ತಡೆಯಾಜ್ಞೆ ತೆರವು, 'ವರಾಹ ರೂಪಂ' ಹಾಡು ಬಳಕೆಗೆ ಅನುಮತಿ: ಗೆದ್ದ ಹೊಂಬಾಳೆ
'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡನ್ನು ಬಳಸದಂತೆ ನೀಡಲಾಗಿದ್ದ ತಡೆಯಾಜ್ಞೆಯನ್ನು ನ್ಯಾಯಾಲಯ ತೆರವುಗೊಳಿಸಿದೆ.
'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡು, ನಮ್ಮ 'ನವರಸಂ' ಹಾಡಿನ ಕದ್ದ ರೂಪ ಎಂದು ತೈಕ್ಕುಡಂ ಬ್ರಿಡ್ಜ್ ತಂಡ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಹಾಗಾಗಿ ಹಾಡನ್ನು ಬಳಸದಂತೆ ಕೇರಳದ ಕೋಳಿಕ್ಕೊಡ್ ಹಾಗೂ ಪಾಲಾಡ್ ನ್ಯಾಯಾಲಯಗಳು ತಡೆಯಾಜ್ಞೆ ನೀಡಿದ್ದವು.
ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ 'ಕಾಂತಾರ' ಸಿನಿಮಾದ ನಿರ್ಮಾಣ ಸಂಸ್ಥೆ ಹೊಂಬಾಳೆ ಕೇರಳ ಹೈಕೋರ್ಟ್ನ ಮೆಟ್ಟಿಲೇರಿತ್ತಾದರೂ ಅಲ್ಲಿ ಹೊಂಬಾಳೆಗೆ ಹಿನ್ನಡೆಯಾಗಿತ್ತು. ಇದೀಗ ಕೋಳಿಕ್ಕೊಡ್ ನ್ಯಾಯಾಲಯದಲ್ಲಿ ತಡೆಯಾಜ್ಞೆ ತೆರವಿಗೆ ಅರ್ಜಿ ಹಾಕಿ ವಾದ ಮಾಡಿ ಪ್ರಕರಣದಲ್ಲಿ ಆರಂಭಿಕ ಗೆಲುವು ಸಾಧಿಸಿದೆ ಹೊಂಬಾಳೆ.

ವಿಶೇಷವೆಂದರೆ 'ವರಾಹ ರೂಪಂ' ಹಾಡಿಗೆ ಸಾಹಿತ್ಯ ಬರೆದಿರುವ ಶಶಿರಾಜ್ ಕಾವೂರ್ ಅವರೇ ನ್ಯಾಯಾಲಯದಲ್ಲಿ ಹಾಡಿನ ಪರ ವಾದಿಸಿದ್ದಾರೆ! ಕೋಳಿಕ್ಕೊಡ್ ನ್ಯಾಯಾಲಯವು ತಡೆಯಾಜ್ಞೆಯನ್ನು ತೆರವು ಮಾಡಿದ್ದು, 'ವರಾಹ ರೂಪಂ' ಹಾಡನ್ನು ಈ ಹಿಂದಿನಂತೆಯೇ ಬಳಸಲು ಅನುಮತಿ ನೀಡಲಾಗಿದೆ.
ತಡೆಯಾಜ್ಞೆ ನೀಡಿದ್ದರಿಂದ ಅಮೆಜಾನ್ ಪ್ರೈಂನಲ್ಲಿ 'ವರಾಹ ರೂಪಂ' ಹಾಡನ್ನು ತೆಗೆದು ಬೇರೆ ಹೊಸ ಹಾಡನ್ನು ಬಳಸಲಾಗಿತ್ತು. ಇದೀಗ ತಡೆಯಾಜ್ಞೆ ತೆರವಾಗಿರುವ ಕಾರಣ 'ವಾರಹ ರೂಪಂ' ಹಾಡನ್ನೇ ಬಳಸಬಹುದಾಗಿದೆ.
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ 'ವರಾಹ ರೂಪಂ' ಸಿನಿಮಾ ಭರ್ಜರಿ ಹಿಟ್ ಆಗಿದ್ದು, ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ 50 ದಿನ ಮುಗಿಸಿದೆ. 400 ಕೋಟಿಗೂ ಹೆಚ್ಚು ಹಣ ಗಳಿಕೆ ಸಹ ಮಾಡಿದೆ. ಕೆಲ ದಿನಗಳ ಹಿಂದೆ ಅಮೆಜಾನ್ ಪ್ರೈಂನಲ್ಲಿಯೂ ಸಿನಿಮಾ ಬಿಡುಗಡೆ ಆಗಿದ್ದು, ಅಲ್ಲಿಯೂ ಸೂಪರ್ ಹಿಟ್ ಆಗಿದೆ.


Click it and Unblock the Notifications











