ಹಾಡಿದ್ದು ರಿಯಾಲಿಟಿ ಶೋನಲ್ಲಿ ಹಾಡು: ಈ ಜನಪದ ಗಾಯಕಿ ತಂದುಕೊಟ್ಟಿದ್ದು ತನ್ನ ಕುಗ್ರಾಮಕ್ಕೆ ಬಸ್ ಸೇವೆ
ಇತ್ತೀಚಿನ ದಿನಗಳಲ್ಲಿ ರಿಯಾಲಿಟಿ ಶೋಗಳಿಂದ ಅನೇಕ ಪ್ರತಿಭಾವಂತ ಮಕ್ಕಳು ಮತ್ತು ಯುವ ಪ್ರತಿಭಾವಂತರು ದೊಡ್ಡ ಮಟ್ಟದಲ್ಲಿ ಬೆಳಕಿಗೆ ಬರುತ್ತಿದ್ದಾರೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಡುತ್ತಿದ್ದ 'ಎದೆತುಂಬಿ ಹಾಡುವೆನು' ಅಂತಹ ಕಾರ್ಯಕ್ರಮದ ಮೂಲಕ ಬೆಳಕಿಗೆ ಬಂದ ಅನೇಕ ಪ್ರತಿಭೆಗಳು ಇಂದು ಗಾಯಕ-ಗಾಯಕಿಯರಾಗಿ ಸಿನಿಮಾ ರಂಗಗಳಲ್ಲಿ ಮಿಂಚುತ್ತಿದ್ದಾರೆ. ಖಾಸಗಿ ವಾಹಿನಿಗಳು ಇಂದು ಮಕ್ಕಳಿಗೆ ಅವರ ಪ್ರತಿಭೆಯನ್ನು ಪ್ರದರ್ಶನ ಮಾಡಲು ಒಂದು ದೊಡ್ಡ ವೇದಿಕೆಯನ್ನು ಕಲ್ಪಿಸಿಕೊಡುತ್ತಿದೆ.
ರಿಯಾಲಿಟಿ ಶೋಗಳು ವೇದಿಕೆಗಳನ್ನು ಕಲ್ಪಿಸಿಕೊಡುತ್ತಿದೆ. ಅದು 'ಕಾಮಿಡಿ ಕಿಲಾಡಿಗಳು' ಇರಬಹುದು, 'ಸರಿಗಮಪ' ಆಗಬಹುದು, 'ತಕಧಿಮಿತ' ಡ್ಯಾನ್ಸ್ ಶೋ ಆಗಬಹುದು ಅಥವಾ 'ಡ್ರಾಮಾ' ಇರಬಹುದು ಹಲವಾರು ಎಲೆಮರೆಯ ಪ್ರತಿಭೆಗಳಿಗೆ ಇದು ವೇದಿಕೆಗಳನ್ನು ಕಲ್ಪಿಸಿಕೊಟ್ಟು ಅವರ ಪ್ರತಿಭೆಯನ್ನು ಅನಾವರಣ ಮಾಡಿದೆ. ಕೇವಲ ಕನ್ನಡದಲ್ಲಿ ಅಂತ ಮಾತ್ರವಲ್ಲ ಎಲ್ಲಾ ಭಾಷೆಗಳಲ್ಲಿ ಕೂಡ ಇಂತಹ ಕಾರ್ಯಕ್ರಮಗಳ ಮೂಲಕ ಅನೇಕ ತರದ ಪ್ರತಿಭಾವಂತರು ಬೆಳಕಿಗೆ ಬರುತ್ತಿದ್ದಾರೆ ಮತ್ತು ಕೆಲವೊಂದು ಬಾರಿ ಹೃದಯಸ್ಪರ್ಶಿ ಘಟನೆಗಳು ಕೂಡ ಇಲ್ಲಿ ನಡೆಯುತ್ತಿವೆ. ಇಂತಹ ಹೃದಯಸ್ಪರ್ಶಿ ಘಟನೆಯೊಂದು ಇತ್ತೀಚಿಗೆ ತೆಲುಗಿನ ರಿಯಾಲಿಟಿ ಶೋ ಒಂದರಲ್ಲಿ ನಡೆದಿದೆ.

ಸರಿಗಮಪ-ದ ಸಿಂಗಿಂಗ್ ಸೂಪರ್ ಸ್ಟಾರ್-2022
ತೆಲುಗು ಜಿ ವಾಹಿನಿಯಲ್ಲಿ ಪ್ರಸಾರವಾಗುವ ಅತಿದೊಡ್ಡ ರಿಯಾಲಿಟಿ ಶೋಗಳಲ್ಲಿ ಒಂದಾದ ಸರಿಗಮಪ- ದ ಸಿಂಗಿಂಗ್ ಸೂಪರ್ ಸ್ಟಾರ್ (2022) ಕಾರ್ಯಕ್ರಮವನ್ನು ಕೋಟಿ, ಎಸ್ಪಿ ಶೈಲಜಾ, ಸುನಿತಾ, ಅನಂತ್ ಶ್ರೀರಾಮ್ ತೀರ್ಪುಗಾರರಾಗಿ ಸಾಕೇತ್ ಮತ್ತು ಗೀತಾ ಮಾಧುರಿ ಮೆಂಟರ್ ಗಳಾಗಿ ಕಾರ್ಯಕ್ರಮ ಆರಂಭವಾಗಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕದ ಚರಣ್ ತೇಜ (ಚಿಕ್ಕಬಳ್ಳಾಪುರ) ದೀಪ್ತಿ ಭಟ್ (ಬೆಂಗಳೂರು) ಸೇರಿದಂತೆ ವಿವಿಧ ರಾಜ್ಯಗಳ ಮತ್ತು ಅಮೆರಿಕಾದಿಂದ ಕೂಡ ಪ್ರತಿಭಾವಂತ ಯುವ ಪ್ರತಿಭೆಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಕಳೆದವಾರ ಅಧಿಕೃತವಾಗಿ ಚಾಲನೆ ನೀಡಲಾದ ಈ ಬಾರಿಯ ಸರಿಗಮಪ ಸಿಂಗಿಂಗ್ ಸೂಪರ್ ಸ್ಟಾರ್ ಆರಂಭದಲ್ಲೇ ದೊಡ್ಡ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಆರಂಭದಲ್ಲೇ ತನ್ನ ಕಂಚಿನ ಕಂಠದ ಮೂಲಕ ಜನಸಾಮಾನ್ಯರ ಹೃದಯ ಗೆದ್ದಿದ್ದಾಳೆ ಒಂದು ಕುಗ್ರಾಮದ ಹುಡುಗಿ ದಾಸರಿ ಪಾರ್ವತಿ.

ಕಡುಬಡತನದಲ್ಲಿ ಬೆಳೆದ ಜನಪದ ಗಾಯಕಿ
ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಲಕ್ಕ ಸಾಗರಂ ಗ್ರಾಮಕ್ಕೆ ಸೇರಿದ ಹುಡುಗಿ ದಾಸರಿ ಪಾರ್ವತಿ. ಇಂದಿಗೂ ಕನಿಷ್ಠ ಮೂಲಭೂತ ಸೌಕರ್ಯಗಳಿಲ್ಲದ ಆ ಗ್ರಾಮದಲ್ಲಿ ಅತ್ಯಂತ ಕಡು ಬಡತನದ ಹಿನ್ನೆಲೆಯಲ್ಲಿ ಬೆಳೆದವಳು ಪಾರ್ವತಿ. ಪಾರ್ವತಿಗೆ ಸಂಗೀತವೆಂದರೆ ಪ್ರಾಣ. ಅದರಲ್ಲಿ ತಾನು ಏನಾದರೂ ಸಾಧಿಸಿ ತೋರಿಸಬೇಕೆಂಬ ಛಲ. ಹೀಗಾಗಿಯೇ ನಿತ್ಯ ಕುಟುಂಬದ ಸದಸ್ಯರ ಜೊತೆಯಲ್ಲಿ ಕೂಡಿ ಹೊಲಗದ್ದೆಗಳಲ್ಲಿ ದಿನಗೂಲಿ ಕೆಲಸ ಮಾಡುತ್ತಲೇ ಸುಮಾರು ಆರು ಕಿಲೋಮೀಟರ್ ದೂರದಲ್ಲಿರುವ ಪಕ್ಕದ ಊರಿಗೆ ಹೋಗಿ ಸಂಗೀತವನ್ನು ಅಭ್ಯಾಸ ಮಾಡಿಕೊಂಡು ಬರುತ್ತಿದ್ದಾಳೆ ಪಾರ್ವತಿ. ಇಂತಹ ಕುಗ್ರಾಮದ ಜನಪದ ಗಾಯಕಿಗೆ ವೇದಿಕೆಯಾಗಿದೆ ಈ ವರ್ಷದ ಸರಿಗಮಪ- ದಿ ಸಿಂಗಿಂಗ್ ಸೂಪರ್ ಸ್ಟಾರ್...

ಮೊದಲ ಹಾಡಿನಿಂದಲೇ ಮನಸ್ಸು ಗೆದ್ದಳು ಪಾರ್ವತಿ
ಸರಿಗಮಪ ಹೊಸ ಸೀಸನ್ನಲ್ಲಿ ಸ್ಪರ್ಧಿಯಾಗಿ ಬಂದಿರುವ ಗಾಯಕಿ ಪಾರ್ವತಿ ಎಲ್ಲರ ಮನಗೆದ್ದಿದ್ದಾರೆ. ತೀರ್ಪುಗಾರರು ಆಕೆಯ ಹಾಡಿಗೆ ಪುಳಕಿತರಾಗಿದ್ದಾರೆ. ಸೌಂದರ್ಯಕ್ಕಿಂತ ಉತ್ತಮವಾದ ಮನಸ್ಸು ಎಲ್ಲರನ್ನೂ ಮೆಚ್ಚಿಸುತ್ತದೆ. ಸೌಂದರ್ಯವನ್ನು ಕೆಲವೇ ಜನರು ಗುರುತಿಸಿದರೆ. ಜಗತ್ತು ಪ್ರತಿಭೆಯನ್ನು ಗುರುತಿಸುತ್ತದೆ. ಅಂತಹ ಪ್ರತಿಭೆಗೆ ಒಳ್ಳೆ ಮನಸ್ಸು ಜೊತೆಗಿದ್ದರೆ? ಸರಿಗಮಪ ಹೊಸ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಂದಿರುವ ಗಾಯಕಿ ಪಾರ್ವತಿ ಎಲ್ಲರ ಮನಗೆದ್ದಿದ್ದಾರೆ. ಒಳ್ಳೆಯ ಮನಸ್ಸು ಮತ್ತು ವ್ಯಕ್ತಿತ್ವ ಆಕೆಯನ್ನು ಜಗತ್ತಿನ ಮುಂದೆ ಅನಾವರಣಗೊಳಿಸಿದೆ. ಗಾಯಕಿ ಪಾರ್ವತಿ ಹಾಡಿದ ಹಾಡು ಕೇಳಿ ಎಲ್ಲರೂ ಥ್ರಿಲ್ ಆಗಿದ್ದರು. ರಂಗ್ ದೇ ಚಿತ್ರದ 'ಊರಂತ ವೆನ್ನೆಲಾ' ಹಾಡನ್ನು ಪಾರ್ವತಿ ಚೆನ್ನಾಗಿ ಹಾಡಿದ್ದಾರೆ. ತೀರ್ಪುಗಾರರು ಥ್ರಿಲ್ ಆಗಿದ್ದು, ಪಾರ್ವತಿಗೆ ಹೊಗಳಿಕೆಯ ಸುರಿಮಳೆಗೈದರು.

ಊರಿಗೆ ಬಸ್ಸು ಬೇಕು ಸಾರ್....
ಆಕೆ ಹಾಡಿದ ರೀತಿಯನ್ನು ಮೆಚ್ಚಿದ ಸಂಗೀತ ನಿರ್ದೇಶಕ ಕೋಟಿ, ಪಾರ್ವತಿಯನ್ನು ಕೇಳುತ್ತಾರೆ " ಇಷ್ಟು ಮಾಧುರ್ಯ ವಾಗಿ ಹಾಡುವ ನಿಮಗೆ ಏನು ಬೇಕು? 'ಪಾರ್ವತಿ ತಕ್ಷಣ ಕೊಟ್ಟ ಉತ್ತರ "ನನಗೆ ಏನು ಬೇಡ ಸಾರ್. ನಮ್ಮ ಊರಿಗೆ ಬಸ್ ಬಂದರೆ ಸಾಕು'"ಎಂದು ಗಾಯಕಿ ಪಾರ್ವತಿ ಹೇಳಿದಾಗ ಆಕೆಯ ಮಾತುಗಳಿಗೆ ನಿರುತ್ತರವಾಗಿ ಒಂದು ಕ್ಷಣ ಇಡಿ ವೇದಿಕೆ ಮೌನವಾಯಿತು. ನಿಸ್ವಾರ್ಥವಾದ ಆಕೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ತೀರ್ಪುಗಾರರಲ್ಲಿ ಒಬ್ಬರಾದ ಎಸ್ಪಿ ಶೈಲಜಾ ಅವರು
"ನೀನು ಹಾಡುವ ಹಾಡಿನ ಮೂಲಕವೇ ನಿಮ್ಮ ಊರಿಗೆ ಬಸ್ಸು ತಲುಪಿದಂತಾಗಿದೆ" ಎಂದು ಆಕೆಯ ಗುಣಗಾನ ಮಾಡಿದರು. ಆದರೆ ಇದೀಗ ಈ ಗಾಯಕಿಯ ನಿಸ್ವಾರ್ಥವಾದ ಬೇಡಿಕೆ ಜನಸಾಮಾನ್ಯರ ಮನಸ್ಸು ಕೂಡ ಗೆದ್ದಿದೆ.

ಒಂದೇ ಹಾಡಿನೊಂದಿಗೆ ಊರಿಗೆ ಬಸ್ಸು ತಂದಳು
ಪಾರ್ವತಿ ಆಡಿದ ಮಾತುಗಳು ವೈರಲ್ ಆಗುತ್ತಿದ್ದಂತೆ APSRTC ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ಸ್ಪಂದಿಸಿದ್ದಾರೆ. ಬೆಳಗ್ಗೆ 7:30 ಮತ್ತು ಸಂಜೆ 6:30 ಕ್ಕೆ ಡೋನ್ ಡಿಪೋದಿಂದ ಲಕ್ಕಸಾಗರಮ್ ಗ್ರಾಮಕ್ಕೆ ಬಸ್ ಸಂಚಾರ ನಡೆಸಲಾಗುವುದು ಎಂದು ಘೋಷಿಸಲಾಗಿದೆ. ಆರ್ಟಿಸಿ ಅಧಿಕಾರಿಗಳು ಘೋಷಿಸಿದಂತೆ ಇತ್ತೀಚೆಗೆ ಗ್ರಾಮಕ್ಕೆ ಬಸ್ ಸೇವೆ ಲಭ್ಯವಾಗಿದೆ. ಈ ಸಂದರ್ಭದಲ್ಲಿ ಗಾಯಕಿ ಸ್ಮಿತಾ ಅವರ ನೇತೃತ್ವದಲ್ಲಿ ಗ್ರಾಮಸ್ಥರಿಂದ ದಾಸರಿ ಪಾರ್ವತಿ ಅವರನ್ನು ಸನ್ಮಾನಿಸಲಾಯಿತು. ಪಾರ್ವತಿ ಅವರು ಅದ್ಭುತವಾಗಿ ಹಾಡಿದ್ದು, ತಮ್ಮ ಗ್ರಾಮಕ್ಕೆ ಬಸ್ ಸೌಲಭ್ಯ ದೊರಕಿಸಿಕೊಟ್ಟಿದ್ದು ದೊಡ್ಡ ವಿಷಯ ಎಂಬುವುದು ಗ್ರಾಮಸ್ಥರ ಅಭಿಪ್ರಾಯವಾಗಿದೆ. ಉತ್ತಮ ಭವಿಷ್ಯಕ್ಕಾಗಿ ಪಾರ್ವತಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.


Click it and Unblock the Notifications











