ತಗಡು, ಎಲ್ಲಿದ್ದಿಯಪ್ಪಾ, ಕಂಜಾಜುಲೇಷನ್, ಕರಿಮಣಿ ಮಾಲೀಕ, ಬೆಳ್ಳುಳ್ಳಿ ಕಬಾಬ್; ಟ್ರೋಲ್ಗಳಿಗೆಲ್ಲಾ ಉಪ್ಪಿ 'UI' ಗುದ್ದು
ಸೋಶಿಯಲ್ ಮೀಡಿಯಾದಲ್ಲಿ ಕೆಲ ವರ್ಷಗಳಿಂದ ಟ್ರೋಲ್ಗಳ ಹಾವಳಿ ಜೋರಾಗಿದೆ. ಇದ್ದಕ್ಕಿದಂತೆ ಕೆಲ ಪದಗಳು ಟ್ರೋಲ್ ಆಗಿ ವೈರಲ್ ಆಗುತ್ತಿವೆ. ಅಂತಹ ಪದಗಳನ್ನೆಲ್ಲಾ ಸೇರಿಸಿ 'ಯುಐ' ಚಿತ್ರದ ಹಾಡೊಂದನ್ನು ಬಿಡುಗಡೆ ಮಾಡಲಾಗಿದೆ. ಹಾಡು ಕೇಳಿದ ಅಭಿಮಾನಿಗಳು ಉಪೇಂದ್ರ ಕ್ರಿಯೇಟಿವಿಟಿ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಚೀಪ್ ಸಾಂಗ್ ಪ್ರೋಮೊ ಬಿಟ್ಟು 'ನಂದು ತುಂಬಾ ದೊಡ್ಡದು, ಅವನಿಗಿಂತ ನಿಂದು ಚಿಕ್ಕದು' ಎಂದು ಹಾಕಿ ಉಪ್ಪಿ ಕೇಳುಗರ ತಲೆಗೆ ಹುಳ ಬಿಟ್ಟಿದ್ದರು. ಫೆಬ್ರವರಿ 26ಕ್ಕೆ ಕಂಪ್ಲೀಟ್ ಸಾಂಗ್ ರಿಲೀಸ್ ಮಾಡೋದಾಗಿ ಹೇಳಿ ನಿರಾಸೆ ಮೂಡಿಸಿದ್ದರು. ಆದರೆ ಚೀಪ್ ಸಾಂಗ್ಗಾಗಿ ಕಾಯುತ್ತಿದ್ದವರಿಗೆ ಟ್ರೋಲ್ ಸಾಂಗ್ ಬಿಟ್ಟು ರಿಯಲ್ ಸ್ಟಾರ್ ಸ್ವೀಟ್ ಶಾಕ್ ಕೊಟ್ಟಿದ್ದಾರೆ. ಸದ್ಯ 5 ಆ ಭಾಷೆಗಳಲ್ಲಿ ಸಾಂಗ್ ರಿಲೀಸ್ ಆಗಿ ವೈರಲ್ ಆಗುತ್ತಿದೆ.

ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡಿದ ಟ್ರೋಲ್ ಪದಗಳನ್ನೆಲ್ಲಾ ಬಳಸಿಕೊಂಡು ಹಾಡಿನ ಸಾಹಿತ್ಯ ಬರೆಯಲಾಗಿದೆ. ಅಜನೀಶ್ ಲೋಕನಾಥ್ ಸಂಗೀತದ ಟ್ಯೂನ್ಗೆ ನರೇಶ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ಕನ್ನಡದಲ್ಲಿ ಐಶ್ವರ್ಯ ರಂಗರಾಜನ್, ಹರ್ಷಿಕಾ ದೇವನಾಥ್ ಹಾಡಿಗೆ ದನಿಯಾಗಿದ್ದಾರೆ. ಇತ್ತೀಚೆಗೆ ಭಾರೀ ಟ್ರೋಲ್ ಆಗಿದ್ದ ತಗಡು, ಗುಮ್ಮಿಸ್ಕೊತ್ತಿಯಾ, ನಮ್ ಮನಸು, ಏನಂತೀರಾ ಪದಗಳನ್ನು ಕೂಡ ಸೇರಿಸಲಾಗಿದೆ.
ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಯಾರ್ಯಾರೋ ದಿಢೀರನೆ ಫೇಮಸ್ ಆಗಿಬಿಡುತ್ತಾರೆ. ಯಾವುದೋ ಡೈಲಾಗ್, ಯಾವುದೋ ರೀಲ್ಸ್ ಟ್ರೆಂಡ್ ಕ್ರಿಯೇಟ್ ಮಾಡ್ತಿದೆ. ಚಿತ್ರದಲ್ಲಿ ರೀಷ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಟ್ರೋಲ್ ಸಾಂಗ್ನಲ್ಲಿ ಆಕೆ ಕಾಣಿಸಿಕೊಂಡಿದ್ದಾರೆ.
ರೀಲ್ಸ್, ಟ್ರೆಂಡ್ ಹುಚ್ಚು ಹತ್ತಿಸಿಕೊಂಡು ಹುಡುಗಿ ಏನಾದರೂ ಮಾಡಿ ಫೇಮಸ್ ಆಗಬೇಕು, ಸೆಲೆಬ್ರೆಟಿ ಆಗಿಬಿಡಬೇಕು ಎಂದು ಆಸೆ ಪಡುವ ನಾಯಕಿ. ಅದು ಬೇಡ ತಪ್ಪು ಎಂದು ಹೇಳುವ ಸ್ನೇಹಿತೆಯ ಸುತ್ತಾ ಈ ಹಾಡು ಸುತ್ತುತ್ತದೆ. ಜೊತೆಗೆ ಇತ್ತೀಚೆಗೆ ಫೋನಿನಲ್ಲೇ ಮುಳುಗಿ ಹೋದ ಜನರಿಗೂ ಗುದ್ದು ಕೊಡುವ ಕೆಲಸ ನಡೆದಿದೆ.
ಇಮ್ರಾನ್ ಸರ್ದಾರಿಯಾ ಹಾಡಿಗೆ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಶಿವಕುಮಾರ್ ಆರ್ಟ್ ವರ್ಕ್ ಇದೆ. ಇನ್ನು ಆಯಾ ಭಾಷೆಗೆ ತಕ್ಕಂತೆ ಸಾಹಿತ್ಯ ಬದಲಿಸಲಾಗಿದೆ. ಆಯಾ ಭಾಷೆಯಲ್ಲಿ, ರಾಜ್ಯದಲ್ಲಿ ಹೆಚ್ಚು ಟ್ರೋಲ್ ಆದ ಪದಗಳನ್ನು ಬಳಸಿಕೊಂಡು ಸಾಹಿತ್ಯ ಪೋಣಿಸಲಾಗಿದೆ. ತೆಲುಗಿನಲ್ಲಿ ರಾಮ್ಬಾಬು ಗೋಸಲ, ಹಿಂದಿಗೆ ನಿರ್ದೇಶಕ ಅನೂಪ್ ಭಂಡಾರಿ, ತಮಿಳಿನಲ್ಲಿ ಮದನ್ಕುಮಾರ್, ಮಲಯಾಳಂನಲ್ಲಿ ಸಂತೋಷ್ ವರ್ಮಾ ಸಾಹಿತ್ಯ ಗೀಚಿದ್ದಾರೆ.
ತೆಲುಗಿನಲ್ಲಿ ಮಂಗ್ಲಿ, ಮಲಯಾಳಂನಲ್ಲಿ ಮೆರಿನ್ ಗ್ರೆಗೊರಿ, ಹಿಂದಿ-ತಮಿಳಿನಲ್ಲಿ ವರ್ಷ ಕೃಷ್ಣನ್ ಹಾಡನ್ನು ಹಾಡಿದ್ದಾರೆ. ಪರಭಾಷಿಕರು ಕೂಡ ಹಾಡಿನ ಸಾಹಿತ್ಯ ಕೇಳಿ ಖುಷಿಯಾಗಿದ್ದಾರೆ. ಉಪೇಂದ್ರ ಕ್ರಿಯೇಟಿವಿಟಿ ಸೂಪರ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ದರ್ಶನ್ ಬಳಸಿದ 'ತಗಡು', 'ಗುಮ್ಮಿಸ್ಕೊತಿಯಾ' ಸೇರಿದಂತೆ ಸಾಕಷ್ಟು ಟ್ರೋಲ್ ಪದಗಳನ್ನು ಸಾಹಿತ್ಯದಲ್ಲಿ ಬಳಸಿಕೊಳ್ಳಲಾಗಿದೆ. ಯಾವುದೇ ವಿವಾದವಾಗದಂತೆ ಕೆಲ ಟ್ರೋಲ್ ಪದಗಳನ್ನು ಬದಲಾಯಿಸಿಕೊಂಡು ಬಳಸಲಾಗಿದೆ.

'ಜೋಡೆತ್ತು', 'ಎಲ್ಲಿದ್ದಿಯಪ್ಪಾ', 'ಆರ್. ಚಂದ್ರು ಹೈಪ್', 'ಬಡವರು ಮಕ್ಕಳು ಬೆಳಿಬೇಕು', 'ರಾಜ್ಯವೇ ಖುಷಿಪಡುವ ಸುದ್ದಿ', 'ನಾನು ನಂದಿನಿ', 'ನಾ ಡ್ರೈವರಾ', 'ಕರಿಮಣಿ ಮಾಲೀಕ', 'ಬೆಳ್ಳುಳ್ಳಿ ಕಬಾಬ್', 'ಮರ ಯಾಕೆ', 'ಹೆಂಗ್ ಪುಂಗ್ಲಿ', 'ಗೂಸ್ ಬಂಪ್ಸ್', ಡೋಲೋ 650 ಮಾತ್ರೆ ಬಿಸಿ ರಾಗಿ ಹಿಟ್ಟು ಹೀಗೆ ಭಾರೀ ಸದ್ದು ಮಾಡಿದ ಟ್ರೋಲ್ ಪದಗಳೆಲ್ಲಾ ಹಾಡಿನಲ್ಲಿದೆ.


Click it and Unblock the Notifications










