ಸಿಟ್ಟಾದ ಗಾಯಕಿ ಉಷಾ ಉತ್ತಪ್, ಕಾಲಿಗೆ ಬಿದ್ದು ಕ್ಷಮೆ ಕೇಳಿದ ಗಾಯಕ
ಉಷಾ ಉತ್ತುಪ್ ಭಾರತದ ಜನಪ್ರಿಯ ಗಾಯಕಿಯರಲ್ಲಿ ಒಬ್ಬರು. ಕನ್ನಡದ ಹಾಡುಗಳನ್ನೂ ಹಾಡಿರುವ ಉಷಾ ಉತ್ತಪ್ ಧ್ವನಿಗೆ ಅದರದ್ದೇ ಆದ ಗುರುತಿದೆ. ತುಸು ಗಡುಸಾದ ಹಾಡುಗಳನ್ನು ಹಾಡುವುದರಲ್ಲಿ ಅವರು ಎತ್ತಿದ ಕೈ.
ಹಿರಿಯ ಗಾಯಕಿ ಆಗಿರುವ ಉಷಾ ಉತ್ತುಪ್ ಕೆಲವು ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಬಹಳ ತಮಾಷೆಯ ವ್ಯಕ್ತಿತ್ವದವರೂ ಆಗಿರುವ ಉಷಾ ಉತ್ತುಪ್ ಸಿಟ್ಟು ಮಾಡಿಕೊಳ್ಳುವುದು ಅಪರೂಪ. ಆದರೆ ಈಗ ತಮ್ಮ ಬಗ್ಗೆ ಹೇಳಲಾದ ಮಾತೊಂದಕ್ಕೆ ಸಿಟ್ಟಾಗಿದ್ದಾರೆ.
ಉಷಾ ಉತ್ತಪ್, ತೆಲುಗಿನ ಜನಪ್ರಿಯ ಒಟಿಟಿ 'ಆಹಾ'ನಲ್ಲಿ ಸಿಂಗಿಂಗ್ ರಿಯಾಲಿಟಿ ಶೋ 'ತೆಲುಗು ಇಂಡಿಯನ್ ಐಡಲ್' ಕಾರ್ಯಕ್ರಮದಲ್ಲಿಯೂ ಜಡ್ಜ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಶೋನ ನಿರೂಪಕ ಶ್ರೀರಾಮ್ ಚಂದ್ರ ಆಡಿದ ಮಾತಿನಿಂದ ಸಿಟ್ಟಾದ ಉಷಾ ಉತ್ತುಪ್ ಶೋ ಬಿಟ್ಟು ಹೊರಡುವುದಾಗಿ ಹೇಳಿದ್ದಾರೆ.

ಉಷಾ ಬಗ್ಗೆ ಕವಿತೆ ಓದಿದ ನಿರೂಪಕ
ಆಗಿದ್ದಿಷ್ಟು, ನಿರೂಪಕ ಶ್ರೀರಾಮ್ ಚಂದ್ರ, ಶೋನಲ್ಲಿ ಉಷಾ ಉತ್ತುಪ್ ಬಗ್ಗೆ ಕವಿತೆಯೊಂದನ್ನು ಓದಿದರು. ''ನಿಮ್ಮ ಧ್ವನಿ ಗಂಭೀರ, ನಿಮ್ಮ ಮಾತುಗಳು ಮಧುರ. ನೀವು ಮೈಕ್ ಇಲ್ಲದೆ ಹಾಡಿದರೆ 'ಕೀಚು ರಾಳ್ಳು' (ಶಬ್ದ ಮಾಡುವ ಹುಳದ ಹೆಸರು). ಅದು ಕೇಳುತ್ತದೆ ಮೈಲಿಗಟ್ಟಲೆ'' ಎಂದರು. ತೆಲುಗು ಸರಿಯಾಗಿ ಬಾರದ ಉಷಾ ಉತ್ತುಪ್, ''ನೀನು ನನಗೆ ಗಂಭೀರಂ ಎಂಬ ಪದ ಏಕೆ ಬಳಸಿದೆ. ನೀನು ನನ್ನನ್ನು ಪುರುಷರೊಟ್ಟಿಗೆ ಹೋಲಿಸುತ್ತಿದ್ದೀಯ ಅಲ್ಲವೆ?'' ಎಂದು ಸಿಟ್ಟಿನಿಂದ ಪ್ರಶ್ನೆ ಮಾಡಿದರು. ಇದಕ್ಕೆ ''ಇಲ್ಲ ಇಲ್ಲ ನಾನು ಆ ಅರ್ಥದಲ್ಲಿ ಹೇಳಲಿಲ್ಲ'' ಎಂದರು ಶ್ರೀರಾಮ್. ಆದರೆ ಉಷಾ ಕೋಪ ಕಡಿಮೆ ಆಗಲಿಲ್ಲ.

ಇದು ಅತಿಯಾಯಿತು: ಉಷಾ ಉತ್ತುಪ್ ಅಸಮಾಧಾನ
''ನಾನು ನನ್ನ ಬಗ್ಗೆ ಮಾಡಲಾಗುವ ಜೋಕ್ಗಳನ್ನು ಸಹಿಸಿಕೊಳ್ಳಬಲ್ಲೆ. ಆದರೆ ಇದು ಅತಿಯಾಯಿತು. ಅದು ಹೇಗೆ ನನ್ನದು ಗಂಡರಂತಾ ಧ್ವನಿ ಎಂದು ಹೇಗೆ ಹೇಳಬಲ್ಲೆ ನೀನು. ಇದು ಬಹಳ ಅತಿಯಾಯ್ತು. ನೀನು ಆ ಅರ್ಥದಲ್ಲಿ ಹೇಳಲಿಲ್ಲ ಎಂದು ಹೇಳುತ್ತಿದ್ದೀಯ? ಆದರೆ ನೀನು ಹೇಳಿರುವುದು ಅದನ್ನೇ, ನೀನು ಹೇಳಿದ ಮಾತಿನ ಅರ್ಥ ಅದೇ ಅಲ್ಲವೆ? ನನಗೆ ನಿನ್ನ ಕವಿತೆ ಇಷ್ಟವಾಗಲಿಲ್ಲ ಸಾರಿ'' ಎಂದು ಬೇಸರದಿಂದ ಹೇಳಿದರು ಉಷಾ ಉತ್ತುಪ್.

ಇದನ್ನೆಲ್ಲ ಕೇಳಲು ಕೊಲ್ಕತ್ತದಿಂದ ಬಂದೆನಾ? ಉಷಾ ಪ್ರಶ್ನೆ
'ನಾನು ಕೊಲ್ಕತ್ತದಿಂದ ಇಲ್ಲಿವರೆಗೆ ಬಂದಿದ್ದು, ಇದನ್ನೆಲ್ಲ ಕೇಳುವುದಕ್ಕಾ?' ಎಂದು ಪ್ರಶ್ನೆ ಮಾಡಿದ ಉಷಾ, ಪಕ್ಕದಲ್ಲೇ ಕೂತಿದ್ದ ಸಂಗೀತ ನಿರ್ದೇಶಕ ತಮನ್ ಕಡೆ ತಿರುಗಿ, ''ನಾನು ಈ ಶೋ ಬಿಟ್ಟು ಹೋಗುವುದು ಉತ್ತಮ ಎನಿಸುತ್ತದೆ'' ಎಂದು ಹೇಳಿ ಜಡ್ಜ್ ಸೀಟಿನಿಂದ ಎದ್ದು ಬಿಟ್ಟರು. ಕೂಡಲೆ ಓಡಿ ಬಂದ ನಿರೂಪಕ ಶ್ರೀರಾಮ್, ಉಷಾ ಉತ್ತುಪ್ ಕಾಲಿಗೆ ಬಿದ್ದು ಕ್ಷಮೆ ಕೇಳಿದರು. ಕಾಲು ಹಿಡಿದುಕೊಂಡು ಅಳಲು ಆರಂಭಿಸಿದರು. ಶ್ರೀರಾಮ್ ತಲೆಯ ಮೇಲೆ ಉಷಾ ಕೈಇಟ್ಟರಾದರೂ ಅವರ ಅಸಮಾಧಾನ ಹೋಗಲಿಲ್ಲ.

ಸಮಾಧಾನ ಮಾಡಲು ಯತ್ನಿಸಿದ ನಿತ್ಯಾ ಮೆನನ್
ಪಕ್ಕದಲ್ಲೇ ಕೂತಿದ್ದ ಕನ್ನಡತಿ, ನಟಿ ನಿತ್ಯಾ ಮೆನನ್, ಉಷಾ ಉತ್ತುಪ್ ಅವರನ್ನು ಸಮಾಧಾನ ಮಾಡಲೆತ್ನಿಸಿದರು. ಶೋ ನಿರ್ದೇಶಕರು ಬಂದು ಶ್ರೀರಾಮ್ ಅನ್ನು ಪಕ್ಕಕ್ಕೆ ಕರೆದೊಯ್ದರು. ಉಷಾ ಉತ್ತುಪ್ ಅವರಿಗೆ ಪರಿಸ್ಥಿತಿಯನ್ನು ಅರ್ಥ ಮಾಡಿಸಿ, 'ಗಂಭೀರ' ಪದದ ಅರ್ಥ 'ಪುರುಷರಂತೆ' ಎಂದಲ್ಲ ಎಂದು ಹೇಳಲು ಯತ್ನಿಸಿದರು. ಆದರೆ ಉಷಾ ಉತ್ತುಪ್ ಸಮಾಧಾನಗೊಂಡಂತೆ ತೋರಲಿಲ್ಲ. ಶೋ ನಲ್ಲಿ ಘಟನೆಯ ಈ ವಿಡಿಯೋವನ್ನು ಆಹಾ ಯೂಟ್ಯೂಬ್ ಚಾನೆಲ್ನಲ್ಲಿ ಹಾಕಿಕೊಳ್ಳಲಾಗಿತ್ತು. ಉಷಾ ಉತ್ತುಪ್ ಸಮಾಧಾನಗೊಂಡರೆ ಅಥವಾ ಶೋ ಬಿಟ್ಟು ಹೊರಟೇ ಹೋದರೆ ಎಂಬುದು ಎಪಿಸೋಡ್ ಪ್ರಸಾರವಾದ ಮೇಲಷ್ಟೆ ತಿಳಿಯಲಿದೆ.


Click it and Unblock the Notifications











