"ಕನ್ಯಾಸೆರೆಗೆ ನನ್ನ ಟಾಟಾ ಚಿರಿಯೋ" ಎನ್ನುವುದರ ಅರ್ಥ ಅದಲ್ಲ ಎಂದ ವಿ. ಮನೋಹರ್
ಕನ್ನಡ ಸಿನಿಮಾಗಳಲ್ಲಿ ಡಬಲ್ ಮೀನಿಂಗ್ ಸಾಹಿತ್ಯ ಒಂದಷ್ಟು ಹಾಡುಗಳು ಬಂದಿರುವುದು ಇದೆ. ಇನ್ನು ನಾದಬ್ರಹ್ಮ ಹಂಸಲೇಖ ಸಂಗೀತ, ಸಾಹಿತ್ಯದ ಹಾಡುಗಳು ಕೂಡ ಚರ್ಚೆ ಹುಟ್ಟಾಕ್ಕಿದ್ದು ಇದೆ. ಕೆಲ ಹಾಡುಗಳ ಸಾಹಿತ್ಯ ಬಗ್ಗೆ ಕ್ಯಾತೆ ತೆಗೆದವರು ಇದ್ದಾರೆ.
'ಪ್ರೇಮಲೋಕ' ಚಿತ್ರದ 'ಹೇ ಗಂಗು' ಹಾಡು ಬಂದಾಗಲೇ ಕೆಲವರು ಮೂಗು ಮುರಿದಿದ್ದರು. ಬಳಿಕ ಇದೇ ರೀತಿ ಕೆಲ ಹಾಡುಗಳ ಬಗ್ಗೆ ವಿಮರ್ಶಕರು ಟೀಕೆ ಟಿಪ್ಪಣಿ ಬರೆದಿದ್ದು ಇದೆ. ಆದರೆ ಸಂಗೀತ ಸಾಗರ, ಸಾಹಿತ್ಯ ಸರೋವರ ಹಂಸಲೇಖ ಪ್ರತಿಭೆ ಬಗ್ಗೆ ಎರಡು ಮಾತಿಲ್ಲ. 90ರ ದಶಕದಲ್ಲಿ ಕನ್ನಡ ಸಿನಿಮಾಗಳನ್ನು ಶ್ರೀಮಂತಗೊಂಡಿದ್ದರಲ್ಲಿ ಅವರ ಪಾಲು ದೊಡ್ಡದಿದೆ.

ಹಂಸಲೇಖ ಹಾಡುಗಳ ಬಗ್ಗೆ ಸುಖಾಸುಮ್ಮನೆ ಕೆಲವರು ಸುಳ್ಳು ಹಬ್ಬಿಸುತ್ತಿದ್ದರು. ಅವರು ಸಾಹಿತ್ಯ ಬರೆದ ಅರ್ಥವೇ ಬೇರೆ ಇರುತ್ತಿತ್ತು. ಆದರೆ ಅದನ್ನು ಬೇರೆ ಅರ್ಥದಲ್ಲಿ ಕೆಲವರು ಅರ್ಥೈಸಿ ಚರ್ಚೆ ಹುಟ್ಟಾಗಿ ಆರೋಪ ಮಾಡುತ್ತಿದ್ದರು ಎಂದು ಸಂಗೀತ ನಿರ್ದೇಶಕ ವಿ. ಮನೋಹರ್ ಹೇಳಿದ್ದಾರೆ. ತಮ್ಮ ಗುರುಗಳ ಸಂಗೀತ, ಸಾಹಿತ್ಯ ಪ್ರತಿಭೆಯ ಬಗ್ಗೆ ಅವರು ಗುಣಗಾನ ಮಾಡಿದ್ದಾರೆ. ಇದೇ ಸಮಯದಲ್ಲಿ ಕೆಲವೊಮ್ಮೆ ಹಂಸಲೇಖ ಬರೆದ ಹಾಡಿನ ಸಾಹಿತ್ಯದ ಅರ್ಥ ಏನಿತ್ತು? ಅದು ಯಾಕೆ ಅಪಾರ್ಥಕ್ಕೆ ಕಾರಣವಾಯಿತು ಎನ್ನುವ ಬಗ್ಗೆ ಮಾತನಾಡಿದ್ದಾರೆ. ಶ್ರೀಗಂಧ ಟಿವಿ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ವಿ. ಮನೋಹರ್ ಮಾತನಾಡಿ "ಪ್ರೀತ್ಸೋದ್ ತಪ್ಪಾ' ಸಿನಿಮಾ 1998ರಲ್ಲಿ ತೆರೆಗೆ ಬಂದಿತ್ತು. ಅದರಲ್ಲಿ 'ರಾಜಾ ರಾಜಾ' ಎಂಬ ಹಾಡಿದೆ. ಆ ಹಾಡಿನ ಒಂದು ಸಾಲಿನಲ್ಲಿ "ಕನ್ಯಾಸೆರೆಗೆ ನನ್ನ ಟಾಟಾ ಚಿರಿಯೋ" ಅಂತ ಒಂದು ಸಾಲನ್ನು ಹಂಸಲೇಖ ಗುರುಗಳು ಬರೆದಿದ್ದರು. ಟಾಟಾ ಚಿರಿಯೋ ಅಂದ್ರೆ ವಿದಾಯ ಎನ್ನುವ ಅರ್ಥ ಇದೆ. ಆದರೆ ಅದು ಅಶ್ಲೀಲ ಅರ್ಥ. ಡ್ಯಾಶ್ ತರಿಯೋ ಅಂತ ಅರ್ಥ ಎಂದು ಕೆಲವರು ವಾದಿಸಿದ್ದರು. ಆ ಪದ ಬಳಸುವಂತಿಲ್ಲ, ಟಾಟಾ ಬದಲು ಅದನ್ನು ತರಿಯೋ ಎನ್ನುವ ರೀತಿ ಬರೆದಿದ್ದಾರೆ ಅಂದ್ರು" ಅಂತ ಮನೋಹರ್ ನೆನಪಿಸಿಕೊಂಡಿದ್ದಾರೆ.
"ನಾನು ಕೆಲವರ ಜೊತೆ ಈ ಸಾಲಿನ ಬಗ್ಗೆ ಚರ್ಚೆ ಮಾಡಿದ್ದೆ. ಟಾಟಾ ಚಿರಿಯೋ ಅಂದರೆ ಏನು ಎಂದು ಕೇಳಿದ್ದರು. 1970ವರೆಗೆ ವಿದಾಯ ಹೇಳುವುದಕ್ಕೆ ಟಾಟಾ ಬಾಯ್ ಬಾಯ್ ಎನ್ನುವುದಕ್ಕೆ ಬದಲಾಗಿ 'ಟಾಟಾ ಚಿರಿಯೋ' ಎನ್ನುತ್ತಿದ್ದರು. ಬಳಿಕ ಬೈಬೈ ಎನ್ನಲು ಆರಂಭಿಸಿದ್ದೆವು. ಅದನ್ನು ಗುರುಗಳು ಈ ಹಾಡಿನಲ್ಲಿ ಬಳಸಿದ್ದರು. "ಕನ್ಯಾಸೆರೆಗೆ ನನ್ನ ವಿದಾಯ" ಎಂದು ನಾಯಕಿ ಹೇಳುವ ಅರ್ಥದಲ್ಲಿ ಬರೆದ ಸಾಲು. ಅದನ್ನು ಅಶ್ಲೀಲ ಅರ್ಥಕ್ಕೆ ಬದಲಿಸಿ ಕೆಟ್ಟದಾಗಿ ಪ್ರಚಾರ ಮಾಡಲು ನೋಡಿದರು. ಆದರೆ ಸಾಧ್ಯವಾಗಲಿಲ್ಲ. ಬಳಿಕ ಅದು ತಣ್ಣಗಾಯಿತು ಎಂದು ವಿ. ಮನೋಹರ್ ವಿವರಿಸಿದ್ದಾರೆ.
ತೆಲುಗಿನ 'ನಿನ್ನೆ ಪೆಳ್ಳಾಡತಾ' ಸಿನಿಮಾ ರೀಮೆಕ್ 'ಪ್ರೀತ್ಸೊದ್ ತಪ್ಪಾ'. ಸ್ವತಃ ವಿ. ರವಿಚಂದ್ರನ್ ಸಿನಿಮಾ ನಿರ್ದೇಶಿಸಿ ನಟಿಸಿದ್ದರು. ಕ್ರೇಜಿಸ್ಟಾರ್ ಜೋಡಿಯಾಗಿ ಶಿಲ್ಪಾ ಶೆಟ್ಟಿ ನಟಿಸಿದ್ದರು. ರಾಕ್ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡಿದ್ದರು. ಈ ಸಿನಿಮಾ ಹಾಡುಗಳಿಗೆ ಟ್ಯೂನ್ ಹಾಕುವಾಗಲೇ ರವಿಚಂದ್ರನ್ ಹಾಗೂ ಹಂಸಲೇಖ ನಡುವೆ ಮನಸ್ತಾಪ ಶುರುವಾಗಿತ್ತು. ಬಳಿಕ ಕೆಲ ವರ್ಷ ಇಬ್ಬರೂ ದೂರಾಗುವಂತಾಗಿತ್ತು.


Click it and Unblock the Notifications











