ಕೊಟ್ಟ ಮಾತು ಉಳಿಸಿಕೊಂಡ ವಿಜಯ್ ದೇವರಕೊಂಡ: ಸಿನಿಮಾ ಅವಕಾಶ ಕೊಟ್ಟ ನಟ
ನಟ ವಿಜಯ್ ದೇವರಕೊಂಡ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಉದಯೋನ್ಮುಖ ಗಾಯಕಿ ಒಬ್ಬರಿಗೆ ತಮ್ಮ ಸಿನಿಮಾದಲ್ಲಿ ಹಾಡುವ ಅವಕಾಶ ಕೊಡಿಸುವುದಾಗಿ ಹೇಳಿದ್ದ ವಿಜಯ್ ದೇವರಕೊಂಡ ಅವಕಾಶ ಕೊಡಿಸಿದ್ದಾರೆ.
ಹಿಂದಿಯ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ಇಂಡಿಯನ್ ಐಡಲ್ 12 ನಡೆಯುವಾಗ ವಿಡಿಯೋ ಪ್ರಕಟಿಸಿದ್ದ ನಟ ವಿಜಯ್ ದೇವರಕೊಂಡ, ಷಣ್ಮುಖಪ್ರಿಯ ಎಂಬ ಸ್ಪರ್ಧಿ ಕುರಿತು ಮಾತನಾಡಿ, ''ನೀನು ಗೆದ್ದರೂ ಸರಿ ಸೋತರೂ ಸರಿ. ನೀನು ಹೈದರಾಬಾದ್ಗೆ ಬರುತ್ತೀಯ, ನನ್ನನ್ನು ಭೇಟಿ ಮಾಡುತ್ತೀಯ, ನನ್ನ ಸಿನಿಮಾದಲ್ಲಿ ಹಾಡು ಹಾಡುತ್ತೀಯ'' ಎಂದಿದ್ದರು.
ಅಂತೆಯೇ ಶೋ ಮುಗಿದಿದ್ದು ಷಣ್ಮುಖಪ್ರಿಯ, ವಿಜಯ್ ದೇವರಕೊಂಡ ಅವರನ್ನು ಅವರ ಮನೆಗೆ ತೆರಳಿ ಭೇಟಿ ಮಾಡಿದ್ದಾರೆ. ವಿಜಯ್ ದೇವರಕೊಂಡ ಅನ್ನು ಭೇಟಿಯಾಗುವ ಮೊದಲೇ 'ಲೈಗರ್' ಸಿನಿಮಾಕ್ಕೆ ಹಾಡು ರೆಕಾರ್ಡ್ ಮಾಡಿದ್ದಾರೆ ಷಣ್ಮುಖಪ್ರಿಯ.

ಷಣ್ಮುಖಪ್ರಿಯ, ವಿಜಯ್ ದೇವರಕೊಂಡ ಅವನ್ನು ಭೇಟಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ''ನೀನು ನಮ್ಮ ಸಿನಿಮಾಕ್ಕೆ ಹಾಡು ಹಾಡುವ ಬಗ್ಗೆ 'ಲೈಗರ್' ಸಿನಿಮಾ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಸಂಗೀತ ನಿರ್ದೇಶಕರಾದ ಮಣಿಶರ್ಮಾ ಮತ್ತು ತನಿಷ್ಕ್ ಅವರುಗಳು ಸಾಕಷ್ಟು ಉತ್ಸುಕರಾಗಿದ್ದರು'' ಎಂದು ವಿಜಯ್ ದೇವರಕೊಂಡ ಹೇಳಿದ್ದಾರೆ.
''ರೆಕಾರ್ಡಿಂಗ್ ಎಲ್ಲ ಹೇಗಿತ್ತು?'' ಎಂಬ ವಿಜಯ್ ದೇವರಕೊಂಡ ಪ್ರಶ್ನೆಗೆ ಉತ್ತರಿಸಿರುವ ಷಣ್ಮುಖಪ್ರಿಯ, ''ಅದ್ಭುತವಾಗಿತ್ತು. ಎಲ್ಲರೂ ಬಹಳ ಬೆಂಬಲ ನೀಡಿದರು ಎಂದರು, ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್ ದೇವರಕೊಂಡ, ''ಅದೊಂದು ಒಳ್ಳೆಯ ಹಾಡು, ಆದಷ್ಟು ಬೇಗ ಆ ಹಾಡನ್ನು ಬಿಡುಗಡೆ ಮಾಡುತ್ತೇವೆ. ತಾಂತ್ರಿಕ ಅಂಶಗಳೆಲ್ಲ ಆದ ಕೂಡಲೇ ಆ ಹಾಡನ್ನು ನನಗೆ ಕಳಿಸುವಂತೆ ನಾನು ಕೇಳಿದ್ದೇನೆ'' ಎಂದಿದ್ದಾರೆ.
ಮನೆಗೆ ಬಂದ ಷಣ್ಮುಖಪ್ರಿಯಾಗೆ ವಿಜಯ್ ದೇವರಕೊಂಡ ತಾಯಿ ಬೊಟ್ಟಿಟ್ಟು, ಶಾಲು ಹೊದಿಸಿ ಸನ್ಮಾನ ಮಾಡಿ, ಷಣ್ಮುಖಪ್ರಿಯ ಹಾಗೂ ಅವರ ತಾಯಿ ಇಬ್ಬರಿಗೂ ಉಡುಗೊರೆಗಳನ್ನು ನೀಡಿ ಬೀಳ್ಕೊಟ್ಟಿದ್ದಾರೆ. ಷಣ್ಮುಖಪ್ರಿಯ ಹಾಗೂ ವಿಜಯ್ ದೇವರಕೊಂಡ ಭೇಟಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.
ಷಣ್ಮುಖಪ್ರಿಯ 'ಇಂಡಿಯನ್ ಐಡಲ್ 12' ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಫೈನಲ್ ವರೆಗೆ ಹೋಗಿದ್ದರು, ಗೆಲ್ಲುವ ಸ್ಪರ್ಧಿಯೆಂದು ಗುರುತಿಸಿಕೊಂಡಿದ್ದರು ಆದರೆ ಪವನ್ದೀಪ್ ರಾಜನ್ ಗೆಲುವು ಸಾಧಿಸಿದರು. ಷಣ್ಮುಖಪ್ರಿಯ ರನ್ನರ್ಅಪ್ ಆಗಿ ಉಳಿದರು. ಷಣ್ಮುಖಪ್ರಿಯ ತೆಲುಗಿನವರಾಗಿದ್ದು ಈ ಮೊದಲು ತೆಲುಗಿನ ಕೆಲವು ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು.


Click it and Unblock the Notifications











