'ವಿಕ್ರಾಂತ್ ರೋಣ' ಆಡಿಯೋ ಹಕ್ಕು ದುಬಾರಿ ಬೆಲೆ ಮಾರಾಟ
ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಸಂಪೂರ್ಣ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ನಿರತವಾಗಿದ್ದು, ಬಹುತೇಕ ಕೊನೆಯ ಹಂತದಲ್ಲಿದೆ ಎಂಬ ಮಾಹಿತಿ ಇದೆ. ಈ ನಡುವೆ ಪಾತ್ರಗಳ ಫಸ್ಟ್ ಲುಕ್ ಪೋಸ್ಟರ್ಗಳ ಮೂಲಕ ಹೆಚ್ಚು ಕುತೂಹಲ ಕೆರಳಿಸಿದೆ. ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್, ನಿರೂಪ್ ಭಂಡಾರಿಯ ಪೋಸ್ಟರ್ ಬಹಿರಂಗಪಡಿಸಿದ್ದರು. ಇದೀಗ, ಸುದೀಪ್ ಹುಟ್ಟುಹಬ್ಬ ಹಿನ್ನೆಲೆ ಕಿಚ್ಚನ ಹೊಸ ಪೋಸ್ಟರ್ ರಿಲೀಸ್ ಮಾಡುತ್ತಿದೆ.
ಸೆಪ್ಟೆಂಬರ್ 2 ರಂದು ಕಿಚ್ಚ ಸುದೀಪ್ ಹುಟ್ಟುಹಬ್ಬ. ಈ ವಿಶೇಷ ದಿನದಂದು ವಿಕ್ರಾಂತ್ ರೋಣ ಚಿತ್ರತಂಡದಿಂದ ಟೀಸರ್ ಅಥವಾ ಸುದೀಪ್ ಹೊಸ ಲುಕ್ ನಿರೀಕ್ಷೆ ಮಾಡುತ್ತಿದ್ದಾರೆ ಅಭಿಮಾನಿ ವರ್ಗ. ಸೆಪ್ಟೆಂಬರ್ 2 ರಂದು ಬೆಳಗ್ಗೆ 11 ಗಂಟೆಗೆ ಡೆಡ್ ಮ್ಯಾನ್ ಆಂಥೆಮ್ ಸಾಂಗ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಇಷ್ಟರಲ್ಲೇ ವಿಕ್ರಾಂತ್ ಸಿನಿಮಾದ ತಂಡದಿಂದ ಭರ್ಜರಿ ಸುದ್ದಿಯೊಂದು ಹೊರಬಿದ್ದಿದೆ. ಮುಂದೆ ಓದಿ...

'ವಿಕ್ರಾಂತ್ ರೋಣ' ಆಡಿಯೋ ಹಕ್ಕು ಸೇಲ್
ಭಾರತೀಯ ಸಿನಿಮಾರಂಗದಲ್ಲಿ ಭಾರಿ ಚರ್ಚೆಯಲ್ಲಿರುವ ವಿಕ್ರಾಂತ್ ರೋಣ ಸಿನಿಮಾದ ಆಡಿಯೋ ಹಕ್ಕು ಮಾರಾಟವಾಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಲಹರಿ ಮ್ಯೂಸಿಕ್ ಸಂಸ್ಥೆ ಆಡಿಯೋ ಹಕ್ಕು ಖರೀದಿಸಿದೆ. ಹಿಂದಿಯಲ್ಲಿ ಟಿ-ಸಿರೀಸ್ ಸಂಸ್ಥೆ ವಿಕ್ರಾಂತ್ ರೋಣ ಮ್ಯೂಸಿಕ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಎಲ್ಲಾ ಭಾಷೆಯ ಆಡಿಯೋ ಹಕ್ಕಿಗೆ ದುಬಾರಿ ಬೆಲೆ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಬೆಲೆಯ ಬಗ್ಗೆ ಸ್ಪಷ್ಟ ಮಾಹಿತಿ ಸದ್ಯಕ್ಕಿಲ್ಲ. ಆಡಿಯೋ ಹಕ್ಕು ಸೇಲ್ ಆಗಿರುವ ಬಗ್ಗೆ ಸ್ವತಃ ಲಹರಿ ಸಂಸ್ಥೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪ್ರಕಟಿಸಿದೆ.

ಅಭಿಮಾನಿಗಳಿ ಕಿಚ್ಚನ ಮನವಿ
ಹುಟ್ಟುಹಬ್ಬ ಹಿನ್ನೆಲೆ ಕಿಚ್ಚ ಸುದೀಪ್ ತಮ್ಮ ಅಭಿಮಾನಿಗಳಲ್ಲಿ 'ಬರ್ತಡೇ ಆಚರಣೆ ಬೇಡ' ವಿನಂತಿ ಮಾಡಿಕೊಂಡಿದ್ದಾರೆ. "ನನ್ನೆಲ್ಲಾ, ಪ್ರೀತಿಯ ಅಭಿಮಾನಿಗಳಿಗೆ ಸ್ನೇಹಿತರಲ್ಲಿ ಮನವಿ. ಕೋವಿಡ್ ಸಂಕಷ್ಟದ ಈ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಈ ವರ್ಷವೂ ನಾನು ನನ್ನ ಹುಟ್ಟುಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲು ಆಗುತ್ತಿಲ್ಲ. ನೀವು ಇದ್ದಲ್ಲಿಂದಲೇ ನಿಮ್ಮ ಪ್ರೀತಿ ತುಂಬಿದ ಶುಭಾಶಯಗಳನ್ನು ತಿಳಿಸಿ ಎಂದು ಕೋರುವ ನಿಮ್ಮ ಕಿಚ್ಚ. ಕ್ಷಮೆ ಇರಲಿ, ಮುಂದೆ ಪರಿಸ್ಥಿತಿ ಸುಧಾರಿಸಿದ ಬಳಿಕ ನಿಮ್ಮೆಲ್ಲರನ್ನು ಭೇಟಿಯಾಗುತ್ತೇನೆ" ಎಂದು ಹೇಳಿದ್ದಾರೆ.

ವಿಕ್ರಾಂತ್ ರೋಣ ಬಿಡುಗಡೆ?
ಅನೂಪ್ ಭಂಡಾರಿ ನಿರ್ದೇಶಿಸಿರುವ ಈ ಚಿತ್ರವನ್ನು ಜಾಕ್ ಮಂಜು ನಿರ್ಮಾಣ ಮಾಡಿದ್ದಾರೆ. ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ ಸೇರಿದಂತೆ ಹಲವರು ನಟಿಸಿದ್ದಾರೆ. ಪ್ಯಾನ್ ಇಂಡಿಯಾ ಬಿಡುಗಡೆಯಾಗಲಿರುವ ಈ ಚಿತ್ರ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಇತರೆ ಭಾಷೆಯಲ್ಲಿ ತಯಾರಾಗಿದೆ. ಅಂದ್ಹಾಗೆ, 'ವಿಕ್ರಾಂತ್ ರೋಣ' ಚಿತ್ರಕ್ಕೂ ಮೊದಲು ಸುದೀಪ್ ನಟಿಸಿರುವ ''ಕೋಟಿಗೊಬ್ಬ-3' ಸಿನಿಮಾ ಬಿಡುಗಡೆಯಾಗಬೇಕಿದೆ. ಹಾಗಾಗಿ, ವಿಕ್ರಾಂತ್ ರೋಣ ಕಾಯುತ್ತಿದೆ. ಹಾಗಾಗಿ, ಕೋಟಿಗೊಬ್ಬ 3 ರಿಲೀಸ್ ಆಗುವವರೆಗೂ ಅನೂಪ್ ಭಂಡಾರಿ ಥಿಯೇಟರ್ಗೆ ಬರಲ್ಲ ಎಂದು ಹೇಳಲಾಗಿದೆ.

ಕೋಟಿಗೊಬ್ಬ 3 ರಿಲೀಸ್ ದಿನಾಂಕ ಘೋಷಣೆ?
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಕೋಟಿಗೊಬ್ಬ 3 ಸಿನಿಮಾ ಇಷ್ಟೋತ್ತಿಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಅನುಮತಿ ಸಿಗದ ಕಾರಣ ಹಿಂದೆ ಮುಂದೆ ನೋಡುವಂತಾಗಿದೆ. ಸದ್ಯದ ವರದಿ ಪ್ರಕಾರ, ಕೋಟಿಗೊಬ್ಬ 3 ಸಿನಿಮಾ ಅಕ್ಟೋಬರ್ ತಿಂಗಳಲ್ಲಿ ಪ್ರೇಕ್ಷಕರೆದುರು ಬರಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಸೂರಪ್ಪ ಬಾಬು ನಿರ್ಮಾಣದ ಈ ಚಿತ್ರದಲ್ಲಿ ಮಲಯಾಳಂ ನಟಿ ಮಡೋನ್ನಾ ಸಬಾಸ್ಟಿಯನ್
ನಾಯಕಿಯಾಗಿದ್ದಾರೆ. ರವಿಶಂಕರ್, ಅಫ್ತಾಬ್ ಶಿವ ದಾಸನಿ, ಶ್ರದ್ಧಾ ದಾಸ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.


Click it and Unblock the Notifications











