ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ!
ಇದನ್ನ ನೋಡಿ ಇದ್ಯಾವ ಭಾಷೆ ಅಂತ ನಮ್ಮನ್ನ ಕೇಳ್ಬೇಡಿ. ಯಾಕಂದ್ರೆ ಇದು ನಮ್ಗೂ ಗೊತ್ತಿಲ್ಲ. ಹೋಗ್ಲಿ, ಇದು ಬೈಯ್ಯೋದಾ, ಇಲ್ಲಾ ಹೊಗಳೋದಾ ಅಂದ್ರೆ ಸಾಕ್ಷಾತ್ ಆ ಭಟ್ರೇ ಉತ್ತರ ಕೊಡ್ಬೇಕು.
ಕನ್ನಡ ಅನ್ನದೇ 'ಎನ್ನಡ', 'ಎಕ್ಕಡ' ಅನ್ನೋದ್ರ ಜೊತೆಗೆ 'ಎಬಡ ತಬಡ' ಅಂತ ಹೊಸ ಆವಿಷ್ಕಾರ ಮಾಡಿ ಅದ್ಯಾವಾಗ ಯೋಗರಾಜ್ ಭಟ್ರು ಬಾಯ್ಬಾಯ್ ಬಡ್ಕೊಂಡ್ರೋ, 'ಈವೊಪ್ಪನ್ ಬಾಯಿಗೆ ಅದಿನ್ಯಾರು ಬೆರಳು ಇಟ್ಟಿದ್ರೋ ಶಿವಾ!?', ಅಂತ ಇಡೀ ಗಾಂಧಿನಗರ, ಕಿವಿ ಮುಚ್ಕೊಂಡು ಹಾಡು ಕೇಳಿತ್ತು. ['ವಾಸ್ತುಪ್ರಕಾರ' ಬೇಸ್ತು ಬಿದ್ದು ಸುಸ್ತಾದ ಭಟ್ಟರು]
ಒಂದ್ಕಾಲದಲ್ಲಿ ಕತ್ತಲಲ್ಲಿ ಕರಡಿಗೆ ಕರೆಕ್ಟಾಗಿ ಜಾಮೂನು ತಿನ್ನಿಸಿದ ಭಟ್ರು, ಈಗ ಅದೇ ಕತ್ತಲಲ್ಲಿ ಗುಂಡು ಹಾರಿಸ್ದಂಗೆ ಅದೇನನ್ನೋ ತಡಬಡಾಯಿಸವ್ರೆ. ಗಾಳೀಲಿ ಹಾರಿಸಿದ ಗುಂಡು ಯಾರಿಗ್ ಬಿತ್ತೋ ಗೊತ್ತಿಲ್ಲ. ಆದ್ರೆ ಭಟ್ರ ಅಡ್ಡದಲ್ಲಿದ್ದ ಎಲ್ಲರಿಗೂ ಅದೇನೋ ಮೆಟ್ಕೊಂಡಂಗಾಗೈತೆ. ಅದನ್ನ ಅವ್ರಾಡೋ ಭಾಷೆ ಕೇಳಿದ್ರೆ ಗೊತ್ತಾಯ್ತದೆ.
ಮಾಮೂಲಿ ಮಳೆ, ನೀರು, ಗುಡ್ಡ ಅನ್ನೋದು ಬುಟ್ಬುಟ್ಟು, ಭಟ್ರು ಫಾರಿನ್ ನಲ್ಲಿ 'ವಾಸ್ತು ಪ್ರಕಾರ' ಪಾಠ ಮಾಡೋಕೆ ಹೋಗಿದ್ದೇ ಹೋಗಿದ್ದು, ಭಟ್ರ ಜೊತೆ ಇದ್ದಬದ್ದವ್ರಿಗೆಲ್ಲಾ ''ಅಕಮಿಕ ಮಕತಕ'' ಅನ್ನಂಗಾಗೈತೆ.

'ವಾಸ್ತು' ಬುಡಕ್ಕೆ ಕೈಹಾಕಿರೋ ಭಟ್ರ ತಲೇಲಿ ಬಲ್ಬ್ ಆನ್ ಆದ್ಹಂಗಾಗಿರ್ಬೇಕು, ವಾಸ್ತುಪ್ರಕಾರ ಚಿತ್ರದಲ್ಲಿ ಅತ್ತ ಕನ್ನಡನೂ ಅಲ್ದೇ, ಇತ್ತ ಇಂಗ್ಲೀಷೂ ಇಲ್ದೇ, ಹೋಗ್ಲಿ ಆಫ್ರಿಕಾ ರೇಂಜಿಗೂ ಮುಟ್ಟದೇ ತಲೆಬುಡ ಇಲ್ಲದ ''ಅಕಮಿಕ'' ಭಾಷೆಗೆ ಬಾಸ್ ಆಗ್ಬುಟವ್ರೇ. ['ವಾಸ್ತು ಪ್ರಕಾರ' ಸ್ವಿಟ್ಜರ್ಲೆಂಡ್ ಗೆ ಹಾರಿದ ಭಟ್ರ ಟೀಂ]
''ಆಸ್ತ್ರದುಲಯಕೋ ಮಿನಸೋಮಾ ಕಾಯಮಿಕ ಮುನಾಸೋ'' ಅಂತ 'ವಾಸ್ತುಪ್ರಕಾರ' ಸುಪ್ರಭಾತ ಗೀಚಿರೋ ಭಟ್ರು, ಎಲ್ರಿಗೂ ಕನ್ನಡವನ್ನೇ ಮರೆಸಿಬಿಟವ್ರೆ. ಪುಣ್ಯಕ್ಕೆ ಮ್ಯೂಸಿಕ್ ಮಾಂತ್ರಿಕ ಹರಿಕೃಷ್ಣ ಭಟ್ರ ಜೊತೆ ಫಾರಿನ್ ಗೆ ಹೋಗಿಲ್ಲ. ಅದಕ್ಕೆ ಹಾಡುಗಳಲ್ಲಿ ಅಲ್ಪ ಸ್ವಲ್ಪ ಕನ್ನಡ, ಕಿವಿಗೆ ಬೀಳ್ತದೆ. [ಸಿಂಪಲ್ ಸ್ಟಾರ್ ಜತೆ ಭಟ್ಟರ 'ವಾಸ್ತು ಪ್ರಕಾರ' ಶುರು]
ಇದೇ ತಿಂಗಳ 12ನೇ ತಾರೀಖು ವಾಸ್ತುಪ್ರಕಾರ ಹಾಡುಗಳನ್ನ ರಿಲೀಸ್ ಮಾಡ್ತಾರಂತೆ ಭಟ್ರು. ಅದಕ್ಕೂ ಮೊದ್ಲು 'ಹಾಡುಗಳು ಹಿಂಗದೆ!' ಅಂತ ತುಣುಕು ತೋರ್ಸವ್ರೇ. ಸಾಲ್ದು ಅಂತ ಭಟ್ರು, ಸಿದ್ಧಿ ಹುಡುಗನ ಬಾಯ್ಲಿ 'ಅಕಮಿಕ' ಭಾಷೇಲಿ ಶಾನೆ ಬೈಯ್ಸೋರೆ. ಅವನ್ನ ಕೇಳೋಕೆ ಮುನ್ನ ಕಣ್ಣುಜ್ಕಳಿ...ಕಿವಿಮುಚ್ಕಳಿ...
ಇಷ್ಟಕ್ಕೆ ನೀವು ತಲೆಕರ್ಕೊಂಡ್ರೆ ಹೆಂಗೆ, ಇನ್ನೂ ಪೂರ್ತಿ ಹಾಡುಗಳು ಕೇಳ್ಬೇಕು, ಆಮೇಲೆ ಪೂರಾ ಪಿಕ್ಚರ್ ನೋಡ್ಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಜಗ್ಗೇಶ್ ಬಾಯಲ್ಲಿ ''ಅಕಮಿಕ'' ಬರ್ಬೇಕು ಅಲ್ವೇ...ಅದಕ್ಕೆ ಭಟ್ರ 'ವಾಸ್ತುಪ್ರಕಾರ' ರಿಲೀಸ್ ಆಗೋವರೆಗೂ ಸ್ವಲ್ಪ ತಡ್ಕಳಿ....(ಫಿಲ್ಮಿಬೀಟ್ ಕನ್ನಡ)


Click it and Unblock the Notifications











