ತಿಮ್ಮಪ್ಪನ ಬೆಟ್ಟದಲ್ಲಿ ಕೇಳಿಸುವ 'ಓಂ ನಮೋ ವೆಂಕಟೇಶಾಯ' ಸ್ತ್ರೋತ್ರ ಹಾಡಿದ ಗಾಯಕಿ ಯಾರು?
ಜಗತ್ಪ್ರಸಿದ್ಧ ತಿರುಮಲ ತಿರುಪತಿ ವೆಂಕಟೇಶ್ವರ ದೇವಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾದು ನಿಂತು ತಿರುಮಲವಾಸನ ದರ್ಶನ ಪಡೆದು ಪುನೀತರಾಗುತ್ತಾರೆ. ಇನ್ನು ಬೆಟ್ಟ ಏರಲು ಆರಂಭಿಸುತ್ತಿದ್ದಂತೆ ವೆಂಕಟೇಶ್ವರನ ಸ್ತ್ರೋತ್ರಗಳು ಕಿವಿ ಮೇಲೆ ಬೀಳಲು ಆರಂಭವಾಗುತ್ತದೆ.
ತಿಮ್ಮಪ್ಪನನ್ನು ಭಜಿಸುವ ಸಾಕಷ್ಟು ಸ್ತ್ರೋತ್ರಗಳನ್ನು ಕೇಳುತ್ತಾ ಭಕ್ತರು ಬೆಟ್ಟ ಏರುತ್ತಾರೆ. ಇನ್ನು ಸರತಿ ಸಾಲಿನಲ್ಲಿ ನಿಂತಾಗಲೂ 'ಓಂ ನಮೋ ವೆಂಕಟೇಶಾಯ' ಎನ್ನುವ ಮಂತ್ರ ಪದೇ ಪದೆ ಕೇಳಿಸುತ್ತಲೇ ಇರುತ್ತದೆ. ಕೇಳಲು ಸುಶ್ರಾವ್ಯವಾಗಿರುವ ಸ್ತ್ರೋತ್ರ ಅದ್ಭುತ ಅನುಭವ ನೀಡುತ್ತದೆ. ಅಷ್ಟಕ್ಕೂ ಈ ಸ್ತ್ರೋತ್ರಗಳನ್ನು ಹಾಡಿದ್ದು ಯಾರು? ಅದರಲ್ಲಿ ಕೇಳಿಸುವ ಫೀಮೇಲ್ ವಾಯ್ಸ್ ಯಾರದ್ದು? ಆಕೆಯ ಹಿನ್ನೆಲೆ ಏನು? ಮುಂದೆ ಓದಿ..

ತಿರುಮಲ ಬೆಟ್ಟದಲ್ಲಿ ಕೇಳಿಸುವ 'ಓಂ ನಮೋ ವೆಂಕಟೇಶಾಯ' ಸ್ತೋತ್ರದ ಮೂಲ ಗಾಯಕರು ಪರುಪಳ್ಳಿ ಶ್ರೀ ರಂಗನಾಥ್ ಹಾಗೂ ಮಾಧವಿ. ಹಲವು ವರ್ಷಗಳ ಹಿಂದೆ ಇಬ್ಬರೂ ಹಾಡಿದ್ದ ಸ್ತೋತ್ರವನ್ನು ಇವತ್ತಿಗೂ ತಿರುಮಲ ಬೆಟ್ಟದಲ್ಲಿ ಹಾಕುತ್ತಾರೆ. ಒಳ್ಳೆ ಗಾಯಕಿ ಆಗಿದ್ದ ಮಾಧವಿ ಬಹಳ ಹಿಂದೆಯೇ ಹಾಡುವುದನ್ನು ನಿಲ್ಲಿಸಿಬಿಟ್ಟರು. ಆದರೆ ತಮ್ಮ ಕನಸ್ಸನ್ನು ಮಗಳ ಮೂಲಕ ನನಸು ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಮಾಧವಿ ಅವರ ಪುತ್ರಿ ವೈಷ್ಣವಿ ಕೋವೂರಿ ಚಿಕ್ಕಂದಿನಿಂದಲೂ ಹಾಡುಗಳನ್ನು ಹಾಡುತ್ತಿದ್ದಾರೆ. ಹಲವು ಸಿಂಗಿಂಗ್ ಕಾಂಪಿಟೇಷನ್ನಲ್ಲಿ ಭಾಗವಹಿಸಿದ್ದಾಳೆ. 2ನೇ ತರಗತಿಯಲ್ಲಿ ಇದ್ದಾಗಲೇ ಆಕೆಯ ಪ್ರತಿಭೆಯನ್ನು ಗುರ್ತಿಸಿ ತಾಯಿ ಬೆಂಬಲ ನಿಂತರು. ಆಕೆ ಸದ್ಯ ತೆಲುಗಿನ ಹಿಟ್ ಸಿನಿಮಾಗಳಿಗೆ ಹಾಡು ಹಾಡುತ್ತಿದ್ದಾಳೆ. 'ಭೀಮ್ಲಾ ನಾಯಕ್' ಹಾಗೂ 'ಗಾಡ್ ಫಾದರ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ವೈಷ್ಣವಿ ಕೋವೂರಿ ಹಾಡು ಹಾಡಿ ಸಂಗೀತ ಪ್ರೇಮಿಗಳ ಮನಗೆದ್ದಿದ್ದಾರೆ.
ಕೆಲ ದಿನಗಳ ಹಿಂದೆ ತೆಲುಗು ಕಿರುತೆರೆಯ 'ಶ್ರೀದೇವಿ ಡ್ರಾಮಾ ಕಂಪನಿ' ಶೋನಲ್ಲಿ ವೈಷ್ಣವಿ ಕೋವೂರಿ ತಮ್ಮ ತಾಯಿ ಮಾಧವಿ ಜೊತೆ ಭಾಗಿ ಆಗಿದ್ದರು. ವೇದಿಕೆ ಮೇಲೆ ವೈಷ್ಣವಿ ತಮ್ಮ ಸುಶ್ರಾವ್ಯ ಗಾಯನದ ಮೂಲಕ ಮೋಡಿ ಮಾಡಿದರು. ಬಳಿಕ ತಮ್ಮ ತಾಯಿಯನ್ನು ವೇದಿಕೆಗೆ ಕರೆದರು. ಅದೇ ಸಮಯದಲ್ಲಿ ತಿರುಮಲದ 'ಓಂ ನಮೋ ವೆಂಕಟೇಶಾಯ' ಸ್ತೋತ್ರದ ಬಗ್ಗೆ ಹೇಳಿದರು.
"ನಮ್ಮ ತಾಯಿ 8ನೇ ತರಗತಿಯಲ್ಲಿ ಇದ್ದಾಗ ಈ ಸ್ತ್ರೋತ್ರ ಹಾಡಿದ್ದರು. ಅಂದಿನಿಂದ ಇಂದಿನವರೆಗೂ ಇದನ್ನೇ ಕೇಳುತ್ತಿದ್ದೇವೆ. ಇದು ಬಹಳ ವಿಶೇಷ ಎಂದು ಹೇಳಿದ್ದರು. ಜೊತೆಗೆ ತಾಯಿ ಜೊತೆ ಸೇರಿ ಆ ಸ್ತೋತ್ರದ ಸಾಲುಗಳನ್ನು ಹಾಡಿ ಕೇಳಿಸಿದ್ದರು. ಸದ್ಯ ಆ ವೀಡಿಯೋ ಇಗ ಸಖತ್ ವೈರಲ್ ಆಗುತ್ತಿದೆ.
ರಾಜಮಂಡ್ರಿಯಲ್ಲಿ ಹುಟ್ಟಿದ ಮಾಧವಿ ಚೆನ್ನೈನಲ್ಲಿ ಓದಿ ಬೆಳೆದವರು. ತಂದೆಯಿಂದ ಗಾಯನದ ಗೀಳು ಹತ್ತಿತ್ತು. ಸಹೋದರರು ಕೂಡ ಗಾಯಕರು ಎಂದು ಮತ್ತೊಂದು ಸಂದರ್ಶನದಲ್ಲಿ ಮಾಧವಿ ಹೇಳಿಕೊಂಡಿದ್ದಾರೆ. ಇವತ್ತಿಗೂ ಟಿಟಿಡಿ ವಾಹಿನಿಯಲ್ಲಿ ತಾವು ಹಾಡಿರುವ ಸ್ತೋತ್ರವೇ ಪ್ರಸಾರವಾಗುತ್ತದೆ ಎಂದು ವಿವರಿಸಿದ್ದಾರೆ.
ನನಗೆ ಹಾಡುವ ಆಸೆ ಇತ್ತು. ಒಂದಷ್ಟು ಹಾಡುಗಳನ್ನು ಹಾಡಿದ್ದೆ. ಬಳಿಕ ಕುಟುಂಬ, ಮಕ್ಕಳು ಎಂದು ಹಾಡುವುದನ್ನು ನಿಲ್ಲಿಸುವಂತಾಯಿತು. ಹಾಗಾಗಿ ನನ್ನ ಕನಸು ನನ್ನ ಮಗಳ ಮೂಲಕ ನೆರವೇರುತ್ತಿದೆ. ಆಕೆ ಮತ್ತಷ್ಟು ದೊಡ್ಡ ಗಾಯಕಿ ಆಗನೇಕು ಎನ್ನುವುದು ನನ್ನ ಆಸೆ ಎಂದು ಮಾಧವಿ ವಿವರಿಸಿದ್ದಾರೆ.


Click it and Unblock the Notifications











