ರವಿಚಂದ್ರನ್ 'ಮಂಜಿನ ಹನಿ'ಗೆ ಪ್ರೇಕ್ಷಕರ ಪರದಾಟ
ಕನಸುಗಾರ ರವಿಚಂದ್ರನ್ ಬರೀ ಕನಸುಗಳನ್ನೇ ಕಾಣುತ್ತಿದ್ದಾರೆಯೇ? ಹೀಗೊಂದು ಪ್ರಶ್ನೆ ಈ ವರ್ಷವೂ ಪೂರ್ಣಗೊಳ್ಳದ ಅವರ ಚಿತ್ರ 'ಮಂಜಿನ ಹನಿ' ನೆನೆಪಾದಾಗ ಅನಾಯಾಸವಾಗಿ ಕಾಡುತ್ತದೆ. ಅವರ ಕನಸಿನ ಕೂಸಾದ ಮಂಜಿನ ಹನಿ ಚಿತ್ರ ಈ ವರ್ಷವೂ ಪೂರ್ಣಗೊಳ್ಳಲಿಲ್ಲ. ಅದೊಂದು ಕನಸಿನ ಚಿತ್ರವೆಂದು ಹೇಳಿರುವ ಅವರ ಮಾತು ಅರ್ಥವಾಗದೇ ಪ್ರೇಕ್ಷಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಹಾಗಂತ ರವಿಚಂದ್ರನ್ ಸೋಮಾರಿಯೂ ಅಲ್ಲ, ಬೇರೆ ಚಿತ್ರಗಳಲ್ಲಿ ನಟಿಸದೇ ಸುಮ್ಮನೆ ಕುಳಿತೂ ಇಲ್ಲ. ಇದೀಗ ದಶಮುಖದಲ್ಲಿ ನಟಿಸುತ್ತಿರುವ ರವಿಚಂದ್ರನ್ ಕ್ರೇಜಿಲೋಕ ಹಾಗೂ ಪರಮಶಿವ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಅಭಿನಯದ ಚಿತ್ರಗಳು ಬಂದು ಸದ್ದಿಲ್ಲದೇ ಮರೆಯಾಗುತ್ತಿದ್ದರೂ ಕ್ಯಾರೇ ಅನ್ನುತ್ತಿಲ್ಲ ರವಿಮಾಮ.
ಮಂಜಿನ ಹನಿ ಚಿತ್ರ ಎಲ್ಲಿಗೆ ಬಂತು ಅಂತ ಕೇಳಿದರೆ ಅದೇ ಸಿದ್ಧ ಉತ್ತರ. "ನಾನು ಬೇರೆ ಚಿತ್ರಗಳಲ್ಲಿ ನಟಿಸುತ್ತಿರುವುದೇ ಮಂಜಿನ ಹನಿಗಾಗಿ". ರವಿಯ ದುಡಿಮೆಯನ್ನೆಲ್ಲ ನುಂಗಿ ನೀರು ಕುಡಿಯುತ್ತಿರುವ ಮಂಜಿನ ಹನಿ ಅದಿನ್ನೆಷ್ಟು ಚೆನ್ನಾಗಿ ಮೂಡಿ ಬರುತ್ತಿದೆಯೋ. ಆದರೆ ಅದು ಮುಗಿಯುವುದನ್ನೇ ಕಾಯುತ್ತಿರುವ ರವಿ ಮಗ ಮನೋರಂಜನ್ ತಾಳ್ಮೆಯ ಪರೀಕ್ಷೆಯೂ ಆಗುತ್ತಿದೆ ಅನ್ನಲೇಬೇಕು. (ಒನ್ ಇಂಡಿಯಾ ಕನ್ನಡ)


Click it and Unblock the Notifications











