ನಟಿ ಹರಿಪ್ರಿಯಾಗೆ ತೆಲುಗು ಪತ್ರಕರ್ತರಿಂದ ಮುತ್ತಿಗೆ
ಹರಿಪ್ರಿಯಾ ಕನ್ನಡದ ಹುಡುಗಿ. ಇಲ್ಲಿ ಸಾಕಷ್ಟು ಸಿನಿಮಾದಲ್ಲಿ ಅಭಿನಯಿಸಿದ್ದರೂ ಇಲ್ಲಿನವರಿಗೆ 'ಹಿತ್ತಲ ಗಿಡ ಮದ್ದಲ್ಲ' ಎಂಬಂತೆ ಅಂದುಕೊಂಡಷ್ಟು ಎತ್ತರಕ್ಕೆ ಏರಿಲ್ಲ. ಈಗೀಗ ಕನ್ನಡದ ಚಿತ್ರಗಳಲ್ಲಿ ಹೆಚ್ಚುಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೂ ಇನ್ನೂ ಕನ್ನಡದ 'ಟಾಪ್ ನಟಿ'ಯರ ಸಾಲಿಗೆ ಸೇರಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ. ಆದರೆ ಇದೇ ಹರಿಪ್ರಿಯಾ ತಮಿಳು, ತೆಲುಗಿನಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಕನ್ನಡದ ಹುಡುಗಿ ಪರಭಾಷೆಯ ಬೆಡಗಿ ಆಗಿದ್ದಾರೆ.
ಕನ್ನಡದ ನಟಿಯರಲ್ಲಿ ಅತ್ಯಂತ ಚೆಲುವೆ ಎಂದು ಬಹಿರಂಗವಾಗಿಯೇ ಮಾತನಾಡುವಷ್ಟು ಚೆಂದವಿದ್ದಾರೆ ಹರಿಪ್ರಿಯಾ. ಆದರೆ ಅದೃಷ್ಟ ಕೈಕೊಟ್ಟಿದೆಯೋ ಏನೋ ಅನ್ನುವಂತೆ ಅವರು ನಟಿಸಿದ ಕನ್ನಡ ಚಿತ್ರ ಯಾವುದೂ ಸೂಪರ್ ಹಿಟ್ ಆಗಿಲ್ಲ. ಕಳ್ಳರ ಸಂತೆ ಯಲ್ಲಿ ಮಾತ್ರ ಹರಿಪ್ರಿಯಾ ಹೆಸರು ಜನರ ನಾಲಿಗೆ ಮೇಲೆ ಓಡಾಡಿದೆ. ಆದರೆ ತಮಿಳು-ತೆಲುಗಿನಲ್ಲಿ ಹಾಗಲ್ಲ, ಹರಿಪ್ರಿಯಾ ಸಖತ್ ಫೇಮಸ್!
ಮೊನ್ನೆ ಕುಟುಂಬದ ಜೊತೆ ತಿರುಪತಿಗೆ ತೆರಳಿದ್ದ ಹರಿಪ್ರಿಯಾಗೆ ತೆಲುಗು ಮಾಧ್ಯಮದ ಮಂದಿ ಮುತ್ತಿಗೆ ಹಾಕಿದ್ದಾರೆ. ಬೆಂಗಳೂರಿನಿಂದ ತಿರುಪತಿಗೆ ಹರಿಪ್ರಿಯಾ ಹೊರಟಿರುವ ಸುದ್ದಿ ಅದು ಹೇಗೋ ತೆಲುಗು ಪತ್ರಕರ್ತರ ಕಿವಿ ಮುಟ್ಟಿದೆ. ಅಲ್ಲಿ ಜಮಾಯಿಸಿ ಕಾಯುತ್ತಿದ್ದ ಪತ್ರಕರ್ತರು ಹರಿಪ್ರಿಯಾ ಕಂಡೊಡನೆ ಮುಗಿಬಿದ್ದಿದ್ದಾರೆ. ಅವರಿಂದ ಬಚಾವಾಗಲು ಸಾಕಷ್ಟು ಪ್ರಯತ್ನಸಿ ಕೊನೆಗೂ ಸೋತು, "ನಟಿಯರಿಗೆ ಖಾಸಗಿ ಬದುಕು ಇಲ್ಲವೇ" ಎಂದು ಪಕ್ಕದಲ್ಲಿದ್ದ ತಮ್ಮ ಆಪ್ತರಲ್ಲಿ ಹೇಳಿಕೊಂಡರು ಎನ್ನಲಾಗಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











