ಪ್ರೇಕ್ಷಕರ ಎದೆ ಝಲ್ಲೆನ್ನಿಸಲಿದ್ದಾರೆ ಮಾಲಾಶ್ರೀ

ಚಿತ್ರ ಸಾಹಸ ದೃಶ್ಯಗಳಿಗಾಗಿ ರು.2.5 ಕೋಟಿಯಿಂದ ರು.3 ಕೋಟಿ ಖರ್ಚು ಮಾಡಲಾಗಿದೆ.ಒಂದೊಂದು ಸಾಹಸ ದೃಶ್ಯಕ್ಕೂ ಏನಿಲ್ಲವೆಂದರೂ 50 ರಿಂದ 60 ಲಕ್ಷ ರು ಖರ್ಚಾಗಿದೆ ಎನ್ನುತ್ತಾರೆ ನಿರ್ದೇಶಕ ಓಂ ಪ್ರಕಾಶ್ ರಾವ್. ಮಾಲಾಶ್ರೀ, ರಾಮು ಮತ್ತು ಓಂ ಪ್ರಕಾಶ್ ರಾವ್ಅಂದರೆ ಪ್ರೇಕ್ಷರಿಗೆ ಸಾಹಸ ಪ್ರಧಾನ ಚಿತ್ರಗಳು ಮನಃ ಪಟಲದ ಮೇಲೆ ಸರಿದಾಡುತ್ತವೆ. ರಾಮು ಎಂಟರ್ ಪ್ರೈಸಸ್ ಹಿಂದೆಂದೂ ನಿರ್ಮಿಸದಷ್ಟು ಅದ್ದೂರಿಯಾಗಿ ಕಿರಣ್ ಬೇಡಿಯನ್ನು ನಿರ್ಮಿಸುತ್ತಿದೆ. ಈಗಾಗಲೇ ಆ ಚಿತ್ರ120 ದಿನಗಳ ಚಿತ್ರೀಕರಣವನ್ನು ಪೂರೈಸಿಕೊಂಡಿದೆ.
ಅಂದಹಾಗೆ ಈ ಚಿತ್ರ ನಿವೃತ್ತ ಪೊಲೀಸ್ಅಧಿಕಾರಿ ಕಿರಣ್ ಬೇಡಿ ಅವರ ಜೀವನಾಧಾರಿತ ಅಲ್ಲವಂತೆ. ಹೆಸರಷ್ಟೇ ಕಿರಣ್ ಬೇಡಿ, ಚಿತ್ರಕಥೆ ವಿಭಿನ್ನವಾಗಿದೆ ಎನ್ನುತ್ತಾರೆ ನಟಿ ಮಾಲಾಶ್ರೀ. ಚಿತ್ರಕ್ಕೆ ತಮ್ಮ ಹೆಸರು ಇಡುತ್ತಿರುವುದಾಗಿ ಕಿರಣ್ ಬೇಡಿ ಅವರ ಅನುಮತಿ ತೆಗೆದುಕೊಂಡಿದ್ದೇವೆ . ರಿಸ್ಕ್ ತೆಗೆದುಕೊಳ್ಳಲು ನಾನು ಸದಾ ಸಿದ್ಧ ಹಾಗೆಯೇ ಸವಾಲೊಡ್ದುವ ಪಾತ್ರಗಳೆಂದರೆ ನನಗಿಷ್ಟ ಎನ್ನುತ್ತಾರೆ ನಟಿ ಮಾಲಾಶ್ರೀ.
ಕಿರಣ್ ಬೇಡಿ ಚಿತ್ರದಲ್ಲಿ ಮಾಲಾಶ್ರೀ ಅವರ ತಂದೆಯಾಗಿ ಶ್ರೀನಿವಾಸ ಮೂರ್ತಿ ಕಾಣಿಸಲಿದ್ದಾರೆ. ಅವರೇ ಚಿತ್ರದ ನಿಜವಾದ ನಾಯಕ ಎನ್ನ್ನುತ್ತಾರೆ ಓಂ ಪ್ರಕಾಶ್ ರಾವ್. ಚಿತ್ರದಲ್ಲಿನ ಸಾಹಸ ದೃಶ್ಯಗಳನ್ನು ಸೆರೆಹಿಡಿಯಲು ವಿಶೇಷ ಕ್ಯಾಮೆರಾಗಳನ್ನು ಬಳಸಲಾಗಿದೆ. ಕೆಲವು ದಿನಗಳ ಚಿತ್ರೀಕರಣಕ್ಕೆ 75 ಸಾವಿರ ರು. ಬಾಡಿಗೆ ಕೊಟ್ಟು ಕ್ಯಾಮೆರಾಗಳನ್ನು ತಂದಿದ್ದೇವೆ ಎಂದರು. ಕಿರಣ್ ಬೇಡಿ ಬಗ್ಗೆ ನಿರ್ಮಾಪಕ ರಾಮು ಮಾತಾನಾಡುತ್ತಾ,ಈ ಚಿತ್ರವನ್ನು ತಮಿಳು ಅಥವಾ ತೆಲುಗಿನಲ್ಲಿ ನಿರ್ಮಿಸಿದ್ದರೆ ಬರೋಬ್ಬರಿ ರು.20 ಕೋಟಿ ಖರ್ಚಾಗುತ್ತ್ತಿತ್ತು. ಆದರೆ ನಾವು ಕನ್ನಡದಲ್ಲಿ ಅಷ್ಟು ಖರ್ಚು ಮಾಡದೇ ಇದ್ದರೂ ಗುಣಮಟ್ಟದಲ್ಲಿ ಮಾತ್ರ ಸರಿಸಾಟಿಯಿಲ್ಲದಂತೆ ನಿರ್ಮಿಸಿದ್ದೇವೆ ಎಂದು ರಾಮು ಪ್ರಮಾಣ ಪತ್ರ ನೀಡಿದ್ದಾರೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications