ನೆಲ ಕಳಕೊಂಡವರ ಕಥೆ ವ್ಯಥೆ ಪುಟ್ಟಕ್ಕನ ಹೈವೇ
ಅಭಿವೃದ್ಧಿ ಎಂಬುದು ಕಾಲಾಂತರದಲ್ಲಿ ಪಡೆದುಕೊಂಡಿರುವ ಅರ್ಥಗಳೇ ಬೇರೆ. ಈ ಅಭಿವೃದ್ಧಿ ಮಂತ್ರದಲ್ಲಿ ಲಾಭ 'ಪಡೆದು ಕೊಂಡವರಿಗೂ' ಎಲ್ಲಾ ಕಳೆದು ಕೊಂಡವರಿಗೂ ಇರುವ ಅಂತರ ದೊಡ್ಡದು. ಈ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಗಾರರು ಆದ ನಾಗತಿಹಳ್ಳಿ ಚಂದ್ರಶೇಖರ್ ಅವರು ಬರೆದಿರುವ ಸಣ್ಣ ಕತೆಯೊಂದರ ಸ್ಪೂರ್ತಿಯನ್ನು ಇಟ್ಟುಕೊಂಡು ಬಿ.ಸುರೇಶ ಅವರು ಬರೆದಿರುವ ಚಿತ್ರ 'ಪುಟ್ಟಕ್ಕನ ಹೈವೇ'.
ಹೆದ್ದಾರಿಯ ಅಗತ್ಯ ಎಷ್ಟಿದೆಯೋ ಅದರಿಂದ ನೆಲ ಕಳಕೊಂಡವರ ಸಂಖ್ಯೆಯೂ ಅಷ್ಟೇ ದೊಡ್ಡದಿದೆ. ಸರ್ಕಾರ ನೀಡುವ ಪರಿಹಾರಗಳು ಫಲಾನುಭವಿಗಳಿಗೆ ದೊರೆಯುವುದಕ್ಕಿಂತ ಮಧ್ಯವರ್ತಿಗಳಿಗೆ ತಲುಪುವುದೇ ಹೆಚ್ಚು. ಹೀಗೆ ಹೆದ್ದಾರಿಗಾಗಿ ನೆಲ ಕಳಕೊಳ್ಳುವ ಪುಟ್ಟಕ್ಕ, ತನ್ನ ನೆಲ ಮತ್ತು ಅದೇ ನೆಲದಲ್ಲಿ ಚಿರನಿದ್ರೆಯಲ್ಲಿರುವ ತನ್ನ ಗಂಡನ ಗೂಡನ್ನು ಉಳಿಸಿಕೊಳ್ಳಲು ಮಾಡುವ ಹೋರಾಟ ಈ ಚಿತ್ರದ ಕತೆ.
ಪುಟ್ಟಕ್ಕನಾಗಿ ಶ್ರುತಿ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಪ್ರಕಾಶ್ ರೈ, ಸಿಹಿಕಹಿ ಚಂದ್ರು, ಮಂಡ್ಯ ರಮೇಶ್, ಅಚ್ಯುತಕುಮಾರ್, ವೀಣಾಸುಂದರ್ ಪ್ರಧಾನ ಪಾತ್ರಗಳಲ್ಲಿ ಇದ್ದಾರೆ. ಹಂಸಲೇಖ ಅವರು ಕರ್ನಾಟಕದ ಸೂಫಿ ಸಂಗೀತಗಾರರ ಮಟ್ಟುಗಳನ್ನು ಈ ಚಿತ್ರಕ್ಕಾಗಿ ಅಳವಡಿಸಿ ಸಂಗೀತ ಮಾಡಿದ್ದಾರೆ.
ಯೋಗರಾಜ ಭಟ್ ಮೂರು ಹಾಡುಗಳನ್ನು ಬರೆದಿದ್ದಾರೆ. ಎಚ್.ಎಂ.ರಾಮಚಂದ್ರ ಛಾಯಾಗ್ರಾಹಣ ಇರುವ ಈ ಚಿತ್ರಕ್ಕೆ ಜೋ.ನಿ.ಹರ್ಷ ಸಂಕಲನವಿದೆ. ಬಿ.ಸುರೇಶ ಅವರು ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಬರಲಿರುವ ಜನವರಿ, ಫೆಬ್ರವರಿಯಲ್ಲಿ ಈ ಚಿತ್ರ ಕನ್ನಡಿಗರೆದುರು ಬರಲಿದೆ.


Click it and Unblock the Notifications











