ರಾಜಕೀಯ ರಣರಂಗಕ್ಕೆ ರಿಯಲ್ ಸ್ಟಾರ್ ಉಪೇಂದ್ರ
ಸಿನಿಮಾ ತಾರೆಗಳಿಗೂ ರಾಜಕೀಯಕ್ಕೂ ಬಿಡಿಸಲಾಗದ ನಂಟು. ಈ ನಂಟು ಈಗ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಅಂಟಿಕೊಂಡಿದೆ. ಅಂದರೆ ಉಪೇಂದ್ರ ರಾಜಕೀಯ ರಣರಂಗಕ್ಕೆ ಧುಮುಕಲು ಸಿದ್ಧತೆ ನಡೆಸಿದ್ದಾರೆ. ಇದ್ಯಾವುದೋ ಸಿನಿಮಾ ಕತೆ ಇರಬೇಕು ,ಎಲ್ಲಾ ಬರಿ ಓಳು ಬರಿ ಓಳು ಅಂದುಕೊಂಡರೆ ನಿಮ್ಮ ಎಣಿಕೆ ನೂರಕ್ಕೆ ನೂರರಷ್ಟು ತಪ್ಪು!
ರಾಜಕಾರಣಿಗಳ ಆಣೆಗೂ ಈ ಸುದ್ದಿ ನಿಜ ಸ್ವಾಮಿ! ಉಪೇಂದ್ರ ರಾಜಕೀಯ ರಂಗಪ್ರವೇಶಿಸುವ ಬಗ್ಗೆ ಶೀಘ್ರದಲ್ಲೇ ಅಧಿಕೃತ ಪ್ರಕಟಣೆ ಹೊರಬೀಳಲಿದೆ. ಅವರ ಬಹುನಿರೀಕ್ಷಿತ 'ಸೂಪರ್' ಕೂಡ ತೆರೆಕಾಣಲು ತುದಿಗಾಲಲ್ಲಿ ನಿಂತಿದೆ. ಇದೇ ಸೂಕ್ತ ಸಮಯ ಎಂದು ಅರಿತಿರುವ ಉಪ್ಪಿ, ತಮ್ಮ ರಾಜಕೀಯ ಪ್ರವೇಶವನ್ನು ಘೋಷಿಸಲಿದ್ದಾರೆ ಎನ್ನುತ್ತವೆ ಮೂಲಗಳು.
ಎಲ್ಲ ರಾಜಕಾರಣಿಗಳಂತೆ ಉಪೇಂದ್ರ ಅವರಿಗೂ ಸಮಾಜ ಸೇವೆ, ಜನಸೇವೆ, ಬಡಬಗ್ಗರ ಬಗ್ಗೆ ಎಲ್ಲಿಲ್ಲದ ಕಾಳಜಿ. ಅವರನ್ನು ಹೇಗಾದರೂ ಮಾಡಿ ಉದ್ಧಾರ ಮಾಡಬೇಕು ಎಂಬ ಕನಸು. ಅವರ ಕನಸುಗಳನ್ನು ಸಾಕಾರಗೊಳಿಸಲು ಈಗಾಗಲೆ ಹಲವಾರು ಪಕ್ಷಗಳು ಗಾಳ ಹಾಕಿವೆ.
ರಾಜ್ಯ ರಾಜ್ಯ ಕಾರಣ, ರಾಷ್ಟ್ರ ರಾಜಕಾರಣದಲ್ಲಿ ತಲ್ಲೀನವಾಗಿರುವ ರಾಜಕೀಯ ಪಕ್ಷಗಳು ಈಗಾಗಲೆ ಉಪೇಂದ್ರ ಅವರೊಂದಿಗೆ ಮಾತುಕತೆ ನಡೆಸಿವೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ಈ ಮೂರು ಪಕ್ಷಗಳಲ್ಲಿ ಯಾವುದಾದರೂ ಒಂದು ಪಕ್ಷಕ್ಕೆ ಉಪ್ಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಅದರೆ ಉಪ್ಪಿ ಮನಸ್ಸಿನಲ್ಲಿ ಯಾವ ಪಕ್ಷ ಇದೆ ಎಂಬುದು ನಿಗೂಢವಾಗಿದೆ.
ಸದ್ಯಕ್ಕೆ ಉಪೇಂದ್ರ ತಮ್ಮ ಹೊಚ್ಚ ಹೊಸ ಚಿತ್ರ 'ಸೂಪರ್' ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದ್ದಾರೆ. ಏನ್ರಿ ಸ್ವಾಮಿ ತಾವು ರಾಜಕೀಯಕ್ಕೆ ಬರುತ್ತಿದ್ದೀರಂತೆ ನಿಜವೇ? ಎಂದು ಕೇಳೋಣ ಅಂದ್ರೆ ಉಪ್ಪಿ ಕೈಗೂ ಸಿಗುತ್ತಿಲ್ಲ ಫೋನಿಗೂ ಸಿಗುತ್ತಿಲ್ಲ. ಏನೇ ಆಗಲಿ "ಮನೆಯಲಿ ಇದ್ದರೆ ಗಂಟು, ಅಂಟು ವುದು ರಾಜಕೀಯ ನಂಟು" ಎಂಬ ಹನಿಗವನ ಗಾಂಧಿನಗರದಲ್ಲಿ ಚಾಲ್ತಿಯಲ್ಲಿದೆ!


Click it and Unblock the Notifications











