ಹಾಡುಹಕ್ಕಿಗಳಿಗೆ ವಿನಯಾ ಕರೆಯೋಲೆ
*ದಟ್ಸ್ಕನ್ನಡ ಬ್ಯೂರೋ
ವಿನಯಾ ಪ್ರಸಾದ್... ಸಾರಿ, ವಿನಯಾ ಪ್ರಕಾಶ್ ಬಸುರಿಯಾದರು. ಅದಕ್ಕೇ ಈಟಿವಿಯ ‘ಎದೆ ತುಂಬಿ ಹಾಡುವೆನು’ ನಿರೂಪಣೆಗೆ ನಮಸ್ಕಾರ ಹೇಳಿದರು ಅಂತ ಸುದ್ದಿಯಾಂದು ಬಂದ ಕೆಲವೇ ತಿಂಗಳಲ್ಲಿ ವಿನಯಾ ಡಿಡಿ9 ಉರುಫ್ ಚಂದನ ಚಾನೆಲ್ಲಿನಲ್ಲಿ ಮೈಕು ಹಿಡಿದು ನಿಂತಿದ್ದರು.
ಚಂದನದಲ್ಲೂ ಸಂಗೀತ ಕಾರ್ಯಕ್ರಮ. ಆದರಲ್ಲಿ ಎಸ್ಪಿ ಬಾಲು ಇಲ್ಲ. ಬದಲಿಗೆ ಹೊಸ ಮುಖಗಳು. ಹಾಡು ಹೇಳುವ ಮನಸ್ಸುಳ್ಳವರಿಗೆಲ್ಲ ಅಲ್ಲಿ ಮುಕ್ತ ವೇದಿಕೆ. ಕಂಠ ಪರೀಕ್ಷೆ ವಗೈರೆಗಳ ನಿಯಮಗಳನ್ನೆಲ್ಲ ಗಾಳಿಗೆ ತೂರಿ ‘ಸುಗಮ ಸರಿಗಮ ಎಕ್ಸ್ಪ್ರೆಸ್’ ಎಂಬ ಕಾರ್ಯಕ್ರಮವನ್ನು ಶುರುಮಾಡಿದ್ದೇ ವಿನಯಾ ಹಾಗೂ ಆಕೆಯ ಪತಿ ಜ್ಯೋತಿ ಪ್ರಕಾಶ್. ಈಗಾಗಲೇ ನಾಲ್ಕು ಕಂತುಗಳು ಪ್ರತಿ ಭಾನುವಾರ ಬೆಳಗ್ಗೆ 8- 30 ರಿಂದ 9 ಗಂಟೆವರೆಗೆ ಪ್ರಸಾರವಾಗಿವೆ.
ನನ್ನ ಹೆಂಡತಿಗೆ ಪೂರ್ತಿ ಬೆಡ್ ರೆಸ್ಟ್ ಬೇಕು ಅಂತ ಹೇಳಿ, ಈಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಣೆಯ ಕೆಲಸದಿಂದ ಸ್ವಯಂ ನಿವೃತ್ತಿ ಕೊಡಿಸಿದ್ದ ಜ್ಯೋತಿ ಪ್ರಕಾಶ್, ಆಮೇಲೆ ವಿನಯಾ ಅವರನ್ನು ಚಂದನ ಟೀವಿಯಲ್ಲಿ ತುರುಕಿದ್ದೇಕೆ ಎಂಬ ಕುರಿತು ಸಾಕಷ್ಟು ಅನೌಪಚಾರಿಕ ಚರ್ಚೆಗಳು ನಡೆಯುತ್ತಿವೆ.
ಅದು ಒತ್ತಟ್ಟಿಗಿರಲಿ, ನಿಮಗೆ ಹಾಡೋಕೆ ಬರುತ್ತದಾ? ಅಷ್ಟು ಸಾಕು. ಸಂಗೀತ ಕಲಿತಿರಲೇಬೇಕೆಂಬ ನಿಬಂಧನೆ ಇಲ್ಲ. ಹಾಡುಕಂಠ ಹಾಗೂ ಹಾಡುವ ಮನಸ್ಸಿದ್ದರೆ ಆಯಿತು. ನೀವು ಹಾಡಿರುವ ಹಾಡುಗಳನ್ನು ಒಂದು ಕೆಸೆಟ್ಟಿಗೆ ತುಂಬಿಸಿ, ವೈಯಕ್ತಿಕ ವರದಿಗಳ ಸಮೇತ ಈ ವಿಳಾಸಕ್ಕೆ ಕಳುಹಿಸಿ- ಪೋಸ್ಟ್ ಬಾಕ್ಸ್ ನಂಬರ್ 7914, ಬೆಂಗಳೂರು. ಅಥವಾ ದೂರವಾಣಿ ಸಂಖ್ಯೆ (080) 3233656ಕ್ಕೆ ಫೋನಾಯಿಸಿ.
ಆಯ್ದ ಹಾಡುಗಾರರನ್ನು ಒಂದು ಕಂತಿನಲ್ಲಿ ನಾಲ್ಕು ಅಭ್ಯರ್ಥಿಗಳಂತೆ ಹೆಕ್ಕಿ, ಹಾಡಿಸಲಾಗುವುದು. ಒಟ್ಟು ಮೂರು ಸುತ್ತಿನ ಸ್ಪರ್ಧೆ ಇರುತ್ತದೆ. ಮೊದಲ ಸುತ್ತಿನಲ್ಲಿ ದೇವರನಾಮ, ಭಕ್ತಿಗೀತೆ, ವಚನ, ದಾಸ ಸಾಹಿತ್ಯದ ಗೀತೆಗಳನ್ನು ಹಾಡಬೇಕು. ಎರಡನೇ ಸುತ್ತಿನಲ್ಲಿ ಜಾನಪದ ಗೀತೆಗಳ ಸಾಣೆ. ಮೂರನೇ ಸುತ್ತಿನಲ್ಲಿ ಭಾವಪೂರ್ಣ ಹಾಡುಗಳ ಹಾಡಿ ಗೆಲ್ಲಬೇಕು; ಅದು ಸುಗಮ ಸಂಗೀತ, ಸಿನಿಮಾ ಗೀತೆ ಏನಾದರೂ ಆಗಿರಬಹುದು.
ಹಾಡುಹಕ್ಕಿಗಳಿಗೆ ಹಾಡಿ ಹಾರಲು ಇದು ವಿನಯಾ ಮತ್ತು ಜ್ಯೋತಿ ಪ್ರಕಾಶ್ ಕಲ್ಪಿಸಿರುವ ವೇದಿಕೆ. ಇಲ್ಲಿ ಹಾಡಿ ಗೆದ್ದರೆ, ಹಾಡು ಭವಿಷ್ಯ ಹಸನಾಗುತ್ತದೆಂಬ ಖಾತರಿಯನ್ನೂ ವಿನಯಾ ಕೊಡುತ್ತಾರೆ.
ಸಿನಿಮಾ ಸಂಚಯ
ವಿನಯಾ, ಜೂಹಿ ಅಮ್ಮ ಆಗುತ್ತಿದ್ದಾರೆ
ವಿರಸದ ಮುನ್ನುಡಿಯ ಸರಸ= ವಿನಯಾ ಪ್ರಕಾಶ್
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications