ಮಂತ್ರಾಲಯದಲ್ಲಿ ನವರಸ ನಾಯಕ ಜಗ್ಗೇಶ್ ವಿಶೇಷ ಪೂಜೆ
ನವರಸ ನಾಯಕ ಜಗ್ಗೇಶ್ ಮಹಾನ್ ದೈವಭಕ್ತ. ಅದರಲ್ಲೂ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಹಾನ್ ಆರಾಧಕರು. ಅವರ ಮಹತ್ವಾಕಾಂಕ್ಷೆಯ ಚಿತ್ರ 'ಬಾಡಿಗಾರ್ಡ್' ಪ್ರಥಮ ಪ್ರತಿ ಸಿದ್ಧವಾಗಿದ್ದು ನವೆಂಬರ್ 4ಕ್ಕೆ ತೆರೆಕಾಣಲಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಯಶಸ್ಸನ್ನು ಕೋರಿ ಮಂತ್ರಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಜಗ್ಗೇಶ್ ಅವರು 'ಬಾಡಿಗಾರ್ಡ್' ಚಿತ್ರದ ಪ್ರಥಮ ಪ್ರಿಂಟ್ನೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ವಿಶೇಷ. ರಾಯರ ಆಶೀರ್ವಾದ ತಮ್ಮ ಚಿತ್ರಕ್ಕಿದ್ದರೆ ಬಾಕ್ಸಾಫೀಸ್ನಲ್ಲಿ ಲಕ್ಷ್ಮಿ ಕೃಪಾಕಟಾಕ್ಷ ಇದ್ದೇ ಇರುತ್ತದೆ ಎಂಬ ನಂಬಿಕೆ ಅವರದು. ಅವರು ಇತ್ತೀಚೆಗೆ ತಮ್ಮ ಬಲಗೈ ತೋಳಿನ ಮೇಲೂ ರಾಯರ ಹಚ್ಚೆಯನ್ನೂ ಹಾಕಿಸಿಕೊಂಡಿದ್ದರು.
ಈ ಹಿಂದೆ ಜಗ್ಗೇಶ್ ತಮ್ಮ ಪತ್ನಿ ಪರಿಮಳ ಅವರೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದಾಗ ಗುರು ರಾಘವೇಂದ್ರರ ಬ್ಯಾನರ್ನಲ್ಲಿ ಚಿತ್ರ ನಿರ್ಮಿಸುವುದಾಗಿ ಹರಕೆ ಹೊತ್ತಿದ್ದರಂತೆ. ಆ ಹರಕೆಯ ಫಲವೇ 'ಗುರುರಾಜ್ ಫಿಲಂಸ್' ಬ್ಯಾನರ್. 'ಬಾಡಿಗಾರ್ಡ್' ಚಿತ್ರ ಇದೇ ಬ್ಯಾನರ್ನಲ್ಲಿ ನಿರ್ಮಿಸಲಾಗಿದೆ. ಜಗ್ಗೇಶ್ ಅವರ ಜೊತೆ ಚಿತ್ರದ ನಿರ್ದೇಶಕ ಟಿ ಎನ್ ಆನಂದ್, ಛಾಯಾಗ್ರಾಹಕ ಅಶೋಕ್ ರಾಮ್, ಕಾರ್ಯಕಾರಿ ನಿರ್ಮಾಪಕ ಶ್ರೀನಿವಾಸ್ ಅವರೂ ಮಂತ್ರಾಲಯಕ್ಕೆ ಭೇಟಿ ನೀಡಿದ್ದಾರೆ.
ಈಗಾಗಲೆ ಸೆನ್ಸಾರ್ ಮಂಡಳಿ 'ಬಾಡಿಗಾರ್ಡ್' ಚಿತ್ರದನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದು 'ಯು' ಸರ್ಟಿಫಿಕೇಟ್ ನೀಡಿದೆ. ಜಗ್ಗೇಶ್ ಹಾಗೂ ಅವರ ಪತ್ನಿ ಪರಿಮಳ ಅವರು ಏರ್ಪಡಿಸಿದ್ದ ಚಿತ್ರದ ಪ್ರೀಮಿಯರ್ ಶೋ ನೋಡಿದವರು ಅದ್ಭುತ ಎಂದಿದ್ದಾರೆ. ಚಿತ್ರದ "ಸಿದ್ಧಯ್ಯ ಸ್ವಾಮಿಗಳೇ..." ಎಂಬ ಹಾಡಂತೂ ಈಗಾಗಲೆ ಹಿಟ್ ಆಗಿದೆ. ಒಟ್ಟಾರೆಯಾಗಿ ಚಿತ್ರದ ಬಗ್ಗೆ ಸದಾಭಿಪ್ರಾಯ ಮೂಡಿದ್ದು ತೀವ್ರ ನಿರೀಕ್ಷೆ ಹುಟ್ಟಿಸಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











