ಕಿಚ್ಚ ಸುದೀಪ್ಗೊಂದು ಬಹಿರಂಗ ಪತ್ರ!
ಕಿಚ್ಚ ಸುದೀಪ್ ಗೆ ಹುಟ್ಟುಹಬ್ಬದ ಶುಭಾಶಯಗಳು. ಇತ್ತೀಚೆಗೆ ಯಾಕೋ ನೀವು ಅಪರೂಪವಾಗ್ಬಿಟ್ರಿ. ಕೈಗೆ ಸಿಗುವುದಿರಲಿ ಕಣ್ಣಿಗೆ ಕಾಣುವ ಮಾತು ದೂರವಾಯಿತು. ಯಾಕೆ ಕನ್ನಡ ಚಿತ್ರಗಳ ಬಗ್ಗೆ ಆಸಕ್ತಿ ಕಳೆದುಕೊಂಡಿರೇನು? ರಾಮ್ ಗೋಪಾಲ್ ವರ್ಮಾ ಕಣ್ಣಿಗೆ ಬಿದ್ದ ನಂತರ ಬಾಲಿವುಡ್, ತೆಲುಗು, ತಮಿಳು ಚಿತ್ರಗಳಲ್ಲೇ ಹೆಚ್ಚು ಕಳೆದು ಹೋಗಿತ್ತಿದ್ದೀರಾ ಅನ್ನಿಸೋದಿಲ್ವೆ?
ಮೊನ್ನೆ ಬಿಡುಗಡೆಯಾದ 'ಕಿಚ್ಚ ಹುಚ್ಚ' ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲೂ ಯಾಕೋ ನಿರಾಸಕ್ತರಾಗಿದ್ದಿರಿ. ರಮ್ಯಾ ಮತ್ತು ನೀವು ಜಗಳ ಆಡಿದ ಬಳಿಕ ನಾನೊಂದು ತೀರ ನೀನೊಂದು ತೀರಾ ಎಂಬಂತಿತ್ತು ನಿಮ್ಮ ಮುಖ ಭಾವ. ಪತ್ರಕರ್ತರ ಕೈಗೆ ಸಿಗದೆ ಅಲ್ಲಿಂದ ಆದಷ್ಟು ಬೇಗ ಕಳಚಿಕೊಂಡ್ರಿ. ಯಾಕೆ ಸಾರ್?
ನೀವು ಮಾತನಾಡಲೇ ಬೇಕಾಗಿದೆ ಸಾರ್. ಇಲ್ಲದಿದ್ದರೆ ಜನ ತಲೆಗೊಂದು ಮಾತಾಡ್ತಾರೆ. ನನ್ನಂಥವರು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿ ತಲೆ ತಿಂತಾರೆ. 'ತೀರ್ಥ' ಅಂತ ಒಂದು ಚಿತ್ರಇನ್ನೇನು ಜನ ಮರತೇ ಹೋದ್ರು ಅನ್ನುವಾಗ ರೀಲೀಸ್ ಆಯ್ತು. ಅಷ್ಟು ಸಮಯದ ಬಳಿಕ ಬಿಡುಗಡೆಯಾದ್ರು ಜನ ಇಷ್ಟಪಡಲಿಲ್ಲ. ಯಾಕೆ ಅಂಥ ಒಮ್ಮೆ ನಿಮ್ಮನ್ನು ನೀವು ಕೇಳಿಕೊಂಡ್ರ ಸಾರ್. ಪ್ರೇಕ್ಷಕ ನಿಮ್ಮಿಂದ ದೂರವಾದನೆ?
ದ್ವಾರಕೀಶ್ ನಿರ್ಮಾಣದಲ್ಲಿ ಬರುತ್ತಿರುವ ಚಿತ್ರಕ್ಕೆ 'ವಿಷ್ಣುವರ್ಧನ' ಎಂದು ಹೆಸರಿಟ್ಟು ಅನವಶ್ಯಕವಾಗಿ ವಿವಾದ ಮೈಮೇಲೆ ಎಳೆದುಕೊಂಡಿರಿ. ಚಿತ್ರದ ವಿವಾದ ಇನ್ನೇನು ತಣ್ಣಗಾಯಿತು ಎಂದಾಗ ನಿಮ್ಮ ಸಾಲು ಸಾಲು ಚಿತ್ರಗಳು ಘೋಷಣೆಯಾದವು. ಕಿಕ್, ಕನ್ವರ್ ಲಾಲ್, ವೀರ ಪರಂಪರೆ, ಕೆಂಪೇಗೌಡ...ಹೀಗೆ. ಇಷ್ಟೆಲ್ಲಾ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ಯಾವ ಚಿತ್ರಕ್ಕೆ ನ್ಯಾಯ ಸಲ್ಲಿಸುತ್ತೀರಾ?
ರೀಮೇಕ್ ಚಿತ್ರಗಳಿಗೆ ನೀವು ಹೆಚ್ಚಾಗಿ ಗಂಟು ಬೀಳುತ್ತಿದ್ದೀರಾ ಅನ್ನಿಸುವುದಿಲ್ಲವೆ? ಒಂದು ಒಳ್ಳೆ ಸ್ವಮೇಕ್ ಚಿತ್ರ ಮಾಡಿ ಸಾರ್. 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ಎಂಬ ರಿಯಾಲಿಟಿ ಶೋ ಮಾಡಿ ಕಿರುತೆರೆಯಲ್ಲಿ ಮಿಂಚಿದಿರಿ. ಈ ಹೊಸ ಪ್ರಯೋಗವನ್ನು ಜನ ಇಷ್ಟಪಟ್ರು. ಈ ರೀತಿ ಏನಾದರೂ ಹೊಸ ಪ್ರಯೋಗಗಳನ್ನು ಮಾಡಿ ಸಾರ್.
ಕೊನೆಯದಾಗಿ ನಿಮ್ಮ ಬಹುಮುಖ ಪ್ರತಿಭೆ ಅಲ್ಲಿ ಇಲ್ಲಿ ಕಳೆದು ಹೋಗಬಾರದು ಎಂಬುದೇ ನಮ್ಮ ಆಸೆ. ನೀವು ನಿರ್ದೇಶನ, ಅಭಿನಯ, ರಿಯಾಲಿಟಿ ಶೋ...ಹೀಗೆ ನಾನಾ ವಿಭಾಗಗಳಲ್ಲಿ ಕಳೆದುಹೋಗುತ್ತಿದ್ದೀರಾ. ನೀವು ಗೆದ್ದಿದ್ದು ರೀಮೇಕ್ ಚಿತ್ರಗಳಿಂದಲೆ. ಒಂದು ಅಪ್ಪಟ ಸ್ವಮೇಕ್ ಚಿತ್ರ ಮಾಡಿ ನಿಮ್ಮ ಪ್ರತಿಭೆ ತೋರಿಸಬೇಕು ಎಂಬುದೇ ನಮ್ಮ ಪ್ರಾರ್ಥನೆ. ಏನಂತೀರಾ ಸಾರ್? ಇಂತಿ ನಿಮ್ಮ ಅಭಿಮಾನಿ.


Click it and Unblock the Notifications











