ಮೇ 10ರಂದು ನ್ಯೂಜೆರ್ಸಿಯಲ್ಲಿ ಡಾ.ರಾಜ್ ಕೃತಿ ಅನಾವರಣ
ಬೆಂಗಳೂರು,ಮೇ.2: ಅ.ನಾ.ಪ್ರಹ್ಲಾದರಾವ್ ಅವರ 'ಬಂಗಾರದ ಮನುಷ್ಯ' ಕನ್ನಡ ಕೃತಿಯ ಆಂಗ್ಲ ಅನುವಾದ 'ಡಾ.ರಾಜಕುಮಾರ್ : ದಿ ಇನ್ ಇಮಿಟೆಬಲ್ ಆಕ್ಟರ್ ವಿತ್ ಎ ಗೋಲ್ಡನ್ ವಾಯ್ಸ್ ' ಪುಸ್ತಕ ಗುರುವಾರ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಬಿಡುಗಡೆಯಾಯಿತು. ಪಾರ್ವತಮ್ಮ ರಾಜ್ಕುಮಾರ್ ಕೃತಿಯನ್ನು ಬಿಡುಗಡೆ ಮಾಡಿದರು.
ಡಾ.ರಾಜ್ ಕುರಿತ ಪುಸ್ತಕ ಇಂಗ್ಲಿಷ್ ನಲ್ಲಿ ಪ್ರಕಟವಾಗಿರುವುದರಿಂದ ಇತರ ಭಾಷೆಯ ಓದುಗರಿಗೆ ಅನುಕೂಲವಾಗಿದೆ. ನೂರಾರು ಚಿತ್ರಗಳಲ್ಲಿ ಅಭಿನಯಿಸಿ ಮೇರುನಟನಾಗಿದ್ದ ರಾಜ್ ಅವರು ಸಾಮಾನ್ಯ ವ್ಯಕ್ತಿಯೊಂದಿಗೆ ಬೆರೆಯುವ ಮನೋಭಾವ ಹೊಂದಿದ್ದರು. ಅವರೆಂದೂ ಹಣಕ್ಕಾಗಿ ಆಸೆ ಪಡದೆ ತಮ್ಮ ಕಾಯಕದಲ್ಲಿ ತೊಡಗಿದ್ದವರು.ದೊಡ್ಡ ಸಾಧನೆ ಮಾಡುವುದು ಮುಖ್ಯವಲ್ಲ, ಮನುಷ್ಯತ್ವದಿಂದ ಪ್ರೀತಿ ವಿಶ್ವಾಸ ಉಳಿಸಿಕೊಂಡು ಬಾಳುವುದು ಮುಖ್ಯ ಇದನ್ನು ರಾಜಕುಮಾರ್ ಅವರ ಜೀವನವೇ ಸಾರುತ್ತದೆ ಎಂದು ಕವಿ ಕೆ.ಎಸ್. ನಿಸಾರ್ ಅಹ್ಮದ್ ಹೇಳಿದರು.
ಕನ್ನಡ ಚಿತ್ರೋದ್ಯಮಕ್ಕೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಮೇ.10ರಂದು ರಾಜ್ಕುಮಾರ್ ಅವರ ಈ ಕೃತಿಯನ್ನು ನ್ಯೂಜೆರ್ಸಿಯಲ್ಲಿ ಬಿಡುಗಡೆ ಮಾಡುತ್ತಿರುವುದಾಗಿ ಪ್ರೊ.ರಾವ್ ತಿಳಿಸಿದರು. ನ್ಯೂಜೆರ್ಸಿಯ 'ಬೃಂದಾವನ' ಕನ್ನಡ ಸಂಘ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಕಾರ್ಯಕ್ರಮಕ್ಕೆ 1,000 ಕನ್ನಡಿಗರು ಆಗಮಿಸಬಹುದೆಂದು ನಿರೀಕ್ಷಿಸಲಾಗಿದೆ. ಪ್ರಪಂಚದಾದ್ಯಂತ ಇರುವ ಡಾ.ರಾಜ್ ಅಭಿಮಾನಿಗಳನ್ನು ತಲುಪುವ ಗುರಿ ಹೊಂದಿದ್ದೇವೆ ಎಂದು ಪ್ರೊ.ರಾವ್ ಈ ಸಂದರ್ಭದಲ್ಲಿ ತಿಳಿಸಿದರು.
ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಪುಸ್ತಕವನ್ನು ಬಿಡುಗಡೆ ಮಾಡಿದರು. ಪುಸ್ತಕದ ಅನುವಾದಕರಾದ ಅಲ್ಲಾಡಿ ಜಯಶ್ರೀ, ಪ್ರೋ. ಸಿ.ಎನ್.ರಾಮಚಂದ್ರನ್, ಪ್ರಕಾಶಕ ನಿತಿನ್ ಷಾ ಮತ್ತು ಅ.ನಾ.ಪ್ರಹ್ಲಾದರಾವ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ವಾರ್ತೆ)


Click it and Unblock the Notifications