ಅಡವಿಟ್ಟ ತಾಳಿ ಬಿಡಿಸಿಕೊಟ್ಟ ಹ್ಯಾಟ್ರಿಕ್ ಹೀರೋ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಂದರೆ ಹೀಗೇ ನೋಡಿ. ಬಲಗೈಲಿ ಮಾಡಿದ ಉಪಕಾರ ಎಡಗೈಗೆ ಗೊತ್ತಗದಂತೆ ಮಾಡಿರುತ್ತಾರೆ. ಆದರೆ ಅದು ಹೇಗೋ ಏನೋ ಅವರ ಉಪಕಾರ ಬುದ್ಧಿ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತದೆ. ಶಿವಣ್ಣನ ಒಳ್ಳೆತನಕ್ಕೆ ಇದು ಮತ್ತೊಂದು ನಿದರ್ಶನವಿದು.
ಗಂಗಾವತಿ ತಾಲೂಕಿನ ಸ್ತ್ರೀಶಕ್ತಿ ಮಹಿಳೆಯರು ತಾಳಿ ಮಾರಿ ತಮ್ಮ ತಾಂಡದ ರಸ್ತೆಯನ್ನು ತಾವೇ ಅಭಿವೃದ್ಧಿಪಡಿಸಿಕೊಂಡಿದ್ದರು. ಈ ಘಟನೆಯಿಂದ ಸರಕಾರ ಮುಜುಗರಕ್ಕೀಡಾಗಿತ್ತು. ಬಳಿಕ ಕಣ್ಣು ತೆರೆದ ಸರಕಾರ ಈ ತಾಂಡಾದ ರಸ್ತೆ ಅಭಿವೃದ್ಧಿಗಾಗಿ ಕರ್ನಾಟಕ ತಾಂಡ ಅಭಿವೃದ್ಧಿ ನಿಗಮಕ್ಕೆ ಸೂಚಿಸಿತ್ತು.
ಈ ಸುದ್ದಿ ತಿಳಿದ ಶಿವಣ್ಣ ಅಡವಿಟ್ಟ ತಾಳಿ ಬಿಡಿಸಿಕೊಡಲು ಮುಂದಾದರು. ಈ ಸಂಬಂಧ ಅವರು ನೇರವಾಗಿ ಗಂಗಾವತಿಯ ಅರುಣೋದಯ ಸ್ತ್ರೀಶಕ್ತಿ ತಾಂಡಕ್ಕೆ ಭೇಟಿ ನೀಡಿದ್ದರು. ಅವರನ್ನು ನೋಡಲು ಅಭಿಮಾನಿಗಳ ನಡುವೆ ನೂಕು ನುಗ್ಗಲು ಉಂಟಾಗಿತ್ತು. ಮಹಿಳೆಯರು ಅಡವಿಟ್ಟಿದ್ದ ರು.2 ಲಕ್ಷ ಮೌಲ್ಯದ ತಾಳಿ ಹಾಗೂ ಚಿನ್ನಾಭರಣಗಳ ಪೈಕಿ ರು.1 ಲಕ್ಷ ಮೌಲ್ಯದ ತಾಳಿ ಹಾಗೂ ಒಡವೆ ಬಿಡಿಸಿಕೊಟ್ಟರು.
ಗಂಗಾವತಿಯ ಚೆನ್ನಬಸವಸ್ವಾಮಿ ಪತ್ತಿನ ಸಹಕಾರಿ ಬ್ಯಾಂಕ್ ಗೆ ನಟ ಶಿವಣ್ಣ ಬಂದು ಅಲ್ಲಿ ಅಡವಿಟ್ಟ ತಾಳಿ ಬಿಡಿಸಿಕೊಳ್ಳುತ್ತಾರೆ ಎಂದು ಆಡಳಿತ ಮಂಡಳಿ ಕಾಯುತ್ತಿತ್ತು. ಹಾರ, ತುರಾಯಿಗಳೊಂದಿಗೆ ಶಿವಣ್ಣನ ಸ್ವಾಗತಕ್ಕೆ ತುದಿಗಾಗಲ್ಲಿ ಬ್ಯಾಂಕ್ ಅಧಿಕಾರಿಗಳು ಕಾಯುತ್ತಿದ್ದರು. ಅದರೆ ಶಿವಣ್ಣ ನೇರವಾಗಿ ಅರುಣೋದಯ ಕ್ಯಾಂಪಿಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದರು.
ಅರುಣೋದಯ ಕ್ಯಾಂಪಿನಲ್ಲಿ ಶಿವಣ್ಣನಿಗೆ ಅದ್ದೂರಿ ಸ್ವಾಗತ ಕೋರಲಾಯಿತು. ತಮ್ಮ ನೆಚ್ಚಿನ ನಟನನ್ನು ನೋಡಲು ಇಲ್ಲಿನ ಕೋಟ್ನೆಕಲ್ ಗ್ರಾಮದಲ್ಲಿ ಅಭಿಮಾನಿಗಳು ಮುತ್ತಿದ್ದರಿಂದ ಶಿವಣ್ಣ ಕಾರಿನಿಂದಿಳಿದು ಮಾಲಾರ್ಪಣೆ ಸ್ವೀಕರಿಸಿದರು.
ಬಳಿಕ ಮಾಜಿ ಸಂಸದ ಎಚ್ ಜಿ ರಾಮುಲು ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು. ವರನಟ ಡಾ.ರಾಜ್ ಅವರ ಸಂಬಂಧಿಕರಾದ ಎಚ್ ಜಿ ರಾಮುಲು ಅವರ ಯೋಗ ಕ್ಷೇಮ ವಿಚಾರಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎಚ್ ಆರ್ ಶ್ರೀನಾಥ್ ಅವರ ಯೋಗಕ್ಷೇಮವನ್ನು ವಿಚಾರಿಸಿದರು.


Click it and Unblock the Notifications











