ಫಿಲಂ ಚೇಂಬರ್ನಲ್ಲಿ 'ಆ ಮರ್ಮ' ತಂದ ಅವಾಂತರ
ಬಾಲಿವುಡ್ ನಟ ಜಾಕಿ ಶ್ರಾಫ್ ಕನ್ನಡದಲ್ಲಿ ಅಭಿನಯಿಸಿರುವ ಚಿತ್ರ 'ಆ ಮರ್ಮ'. ಈ ಚಿತ್ರ ಡಬ್ಬಿಂಗ್ ಅಲ್ಲ ಎಂದು ಈಗಾಗಲೆ ಆ ಚಿತ್ರದ ನಿರ್ದೇಶಕ ಮಧುಸೂಧನ್ ಸ್ಪಷ್ಟಪಡಿಸಿದ್ದರು. ಆದರೆ ಚಲನಚಿತ್ರ ವಾಣಿಜ್ಯ ಮಂಡಳಿ ಇದು ಡಬ್ಬಿಂಗ್ ಚಿತ್ರ ಎಂದು ತೀರ್ಪು ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಮಂಡಳಿಯ ನಿರ್ಧಾರವನ್ನು ವಿರೋಧಿಸಿ ಕೆಎಫ್ಸಿಸಿ ಕಾರ್ಯಕಾರಿ ಸಮಿತಿಯ 9 ಮಂದಿ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಉಮೇಶ್ ಬಣಕಾರ್, ಅಣಜಿ ನಾಗರಾಜ್, ದಿನೇಶ್ ಗಾಂಧಿ, ರಾಮಕೃಷ್ಣ, ಆರ್ ಎಸ್ ಗೌಡ, ಬಿ ಎನ್ ಗಂಗಾಧರ್, ಜಯಶ್ರೀದೇವಿ, ನಿರ್ದೇಶಕ ನಾಗಣ್ಣ ರಾಜೀನಾಮೆ ಸಲ್ಲಿಸಿದವರು. ವಿತರಕರ ವಲಯದಿಂದ ನಾರಾಯಣ ರೆಡ್ಡಿ, ಮಧುಕುಮಾರ್ ಕೂಡ ರಾಜೀನಾಮೆ ಸಲ್ಲಿಸಲು ಮುಂದಾಗಿದ್ದಾರೆ.
ಆ ಮರ್ಮ ಚಿತ್ರದ ನಿರ್ಮಾಪಕರೂ ಆಗಿರುವ ಮಧುಸೂಧನ್ ಹವಾಲ್ದಾರ್ ಅವರಿಗೆ ನ್ಯಾಯ ಸಿಕ್ಕಿಲ್ಲ. ಅವರಿಗೆ ನ್ಯಾಯ ಒದಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆ ಸ್ಥಾನದಲ್ಲಿ ಮುಂದುವರೆಯಲು ನಮಗೆ ಯೋಗ್ಯತೆ ಇಲ್ಲ. ಹಾಗಾಗಿ ರಾಜೀನಾಮೆ ಸಲ್ಲಿಸುತ್ತಿದ್ದೇವೆ ಎಂದು 9 ಮಂದಿ ಸದಸ್ಯರು ತಿಳಿಸಿದ್ದಾರೆ.
ಯಾವುದೇ ಚಿತ್ರವನ್ನು ಡಬ್ಬಿಂಗ್ ಎಂದು ತೀರ್ಮಾನಿಸುವುದು ಒಂದಿಬ್ಬರಿಂದ ಅಲ್ಲ. ತಂತ್ರಜ್ಞರು, ಲ್ಯಾಬ್ ಸೇರಿದಂತೆ ಇತರೆ ಕಡೆ ಸಾಬೀತಾಗಬೇಕು. ಅನಾವಶ್ಯಕವಾಗಿ 'ಆ ಮರ್ಮ' ಚಿತ್ರ ಡಬ್ಬಿಂಗ್ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದೆ ಎಂದು ನಿರ್ಮಾಪಕ ಉಮೇಶ್ ಬಣಕಾರ್ ಹೇಳಿದ್ದಾರೆ.
ಅಂದಹಾಗೆ ಆ ಮರ್ಮ ಚಿತ್ರದಲ್ಲಿ ಸಾಯಿ ಕುಮಾರ್, ಥ್ರಿಲ್ಲರ್ ಮಂಜು, ಅರ್ಚನಾ ಮುಖ್ಯ ಪಾತ್ರಧಾರಿಗಳು. ಕ್ರೈಂ ರಿಪೋರ್ಟರ್ ಆಗಿ ಅರ್ಚನಾ ಕಾಣಿಸಲಿದ್ದಾರೆ. ಆ ಮರ್ಮ' ಚಿತ್ರವನ್ನು ತೆಲುಗು ಮತ್ತು ತಮಿಳಿಗೆ ಡಬ್ ಮಾಡುತ್ತಿದ್ದೇವೆ ಎನ್ನುವ ಮಧುಸೂಧನ್ ಈ ಚಿತ್ರದ ನಿರ್ಮಾಪಕರು ಹೌದು.(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











