ಶೀಘ್ರದಲ್ಲೇ ಚಿತ್ರರಂಗಕ್ಕೆ ಕಿಚ್ಚ ಸುದೀಪ್ ವಿದಾಯ
ಇದು ಗಾಂಧಿನಗರದ ಗಲ್ಲಿ ಸುದ್ದಿ ಯಲ್ಲ!ನಿಜವಾಗಿಯೂ ಕಿಚ್ಚ ಸುದೀಪ್ ಶೀಘ್ರದಲ್ಲೇ ಚಿತ್ರರಂಗಕ್ಕೆ ವಿದಾಯ ಹೇಳಲು ಹೊರಟಿದ್ದಾರೆ. ಸುದೀಪ್ ಅಭಿಮಾನಿಗಳಿಗೆ ಇದು ನುಂಗಲಾರದ ತುತ್ತಾದರೂ ನಂಬಲೇ ಬೇಕಾಗಿದೆ. ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಕಿಚ್ಚ ಸುದೀಪ್ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ.
ಚಿತ್ರರಂಗಕ್ಕೆ ಸುದೀಪ್ ಗುಡ್ ಬೈ ಹೇಳಲಿರುವ ಸುದ್ದಿ ಅಭಿಮಾನಿಗಳ ಕಿವಿಗೆ ಬಿದ್ದಿದ್ದೇ ತಡ ಅವರು ಫೇಸ್ ಬುಕ್, ಟ್ವಿಟ್ಟರ್ ತಾಣಗಳಿಗೆ ಲಗ್ಗೆ ಹಾಕಿದ್ದಾರೆ. ಬಹುಶಃ ಇದು ವದಂತಿ ಇರಬೇಕು ಎಂದುಕೊಂಡಿದ್ದ ಅವರಿಗೆ ಅಲ್ಲಿ ಶಾಕ್ ಕಾದಿತ್ತು. ಚಿತ್ರರಂಗಕ್ಕೆ ವಿದಾಯ ಹೇಳುತ್ತಿರುವುದಾಗಿ ಸುದೀಪ್ ಟ್ವಿಟ್ಟರ್ ನಲ್ಲಿ ಘೋಷಿಸಿದ್ದಾರೆ.
"ಹೌದು ನೀವು ಕೇಳುತ್ತಿರುವುದು ನಿಜ, ಇದು ವದಂತಿ ಅಲ್ಲ. ಶೀಘ್ರದಲ್ಲೇ ನಾನು ಚಿತ್ರರಂಗಕ್ಕೆ ವಿದಾಯ ಹೇಳುತ್ತಿದ್ದೇನೆ. ಹಾಗಾಗಿಯೇ ನಾನು ಹೆಚ್ಚು ಚಿತ್ರಗಳಿಗೆ ಸಹಿ ಹಾಕುತ್ತಿಲ್ಲ" ಎಂದು ಟ್ವಿಟ್ಟರ್ನಲ್ಲಿ ಹೇಳಿದ್ದಾರೆ. ಚಿತ್ರರಂಗಕ್ಕೆ ವಿದಾಯ ಹೇಳಲು ಕಾರಣ ಏನು ಎಂಬುದನ್ನು ಮಾತ್ರ ಸುದೀಪ್ ಬಹಿರಂಗಪಡಿಸಿಲ್ಲ.
"ಚಿತ್ರರಂಗಕ್ಕೆ ದಯವಿಟ್ಟು ವಿದಾಯ ಹೇಳಬೇಡಿ. ಒಂದು ವೇಳೆ ನೀವು ವಿದಾಯ ಹೇಳಿದ್ದೇ ಆದರೆ ನಾವೂ ಅಷ್ಟೆ ಕನ್ನಡ ಚಿತ್ರಗಳಿಗೆ ಗುಡ್ ಬೈ ಹೇಳುತ್ತೇವೆ" ಎಂದು ಕಿಚ್ಚನ ಅಭಿಮಾನಿಗಳು ಬೆದರಿಕೆ ಹಾಕಿದ್ದಾರೆ. ಸದ್ಯಕ್ಕೆ ಸುದೀಪ್ ಪ್ರೊಡಕ್ಷನ್ ನಂ.47 (ವಿಷ್ಣುವರ್ಧನ) ಹಾಗೂ 'ಕೆಂಪೇಗೌಡ' ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗಷ್ಟೆ ತೆಲುಗಿನ ರಾಜಮೌಳಿ ಚಿತ್ರದಲ್ಲಿ ನಟಿಸುವ ಅವಕಾಶವು ಕಿಚ್ಚನಿಗೆ ಬಂದಿದೆ.


Click it and Unblock the Notifications











