ಗಾಳಿಪಟ ಗ್ರಾಫಿಕ್ಸ್ಗೇ 50 ಲಕ್ಷ!
ಯೋಗರಾಜ್ ಭಟ್, ಗಣೇಶ್, ಜಯಂತ್ ಕಾಯ್ಕಿಣಿ ಜೋಡಿಯ ಗಾಳಿಪಟ ಮನದ ಮುಗಿಲಲ್ಲಿ ಮೊಹಬ್ಬತ್ ಬಿತ್ತಲು ಅಣಿಯಾಗಿದೆ. ಮುಂಗಾರು ಮಳೆ ಸುರಿದಂತೆ ಗಾಳಿಪಟ ಎತ್ತರೆತ್ತರೆಕ್ಕೆ ಹಾರುತ್ತದಾ? ಗೊತ್ತಿಲ್ಲ. ಆದರೆ ಚಿತ್ರತಂಡದಲ್ಲಿ ಇರುವ ಕಲಾವಿದರನ್ನು ನೋಡಿದರೆ ಖಂಡಿತಾ ಮುಗಿಲೆತ್ತರೆಕ್ಕೆ ಹಾರುತ್ತದೆ ಅನಿಸುತ್ತದೆ.
ಈ ಚಿತ್ರದ ಗ್ರಾಫಿಕ್ಸ್ ಕೆಲಸಕ್ಕೇ ಬರೋಬ್ಬರಿ 50 ಲಕ್ಷ ಖರ್ಚು ಮಾಡಲಾಗಿದೆ. ಇದಕ್ಕಾಗಿ 'ಇಂಡಿಯನ್ ಆರ್ಟಿಸ್ಟ್' ಎಂಬ ಮದ್ರಾಸ್ ಕಂಪನಿಯನ್ನು ಕರೆತರಲಾಗಿದೆ. 'ಶಿವಾಜಿ' ಚಿತ್ರದಲ್ಲಿ ರಜನಿಕಾಂತರನ್ನು ಬೆಳ್ಳಗೆ ಮಾಡಿದ್ದೂ ಇವರೇ. ತಮಿಳು ನಿರ್ದೇಶಕ ಶಂಕರ್ರ ಬಹುತೇಕ ಚಿತ್ರಗಳಿಗೆ ಈ ಕಂಪನಿಯೇ ಗ್ರಾಫಿಕ್ಸ್ ಕೆಲಸ ಮಾಡುತ್ತದೆ. ಸಿನಿಮಾ ಒಂದಕ್ಕೆ ಸಾಮಾನ್ಯವಾಗಿ ಗ್ರಾಫಿಕ್ಸ್ ಬಜೆಟ್ ಅಂತ ಒಂದು ರೂಪಾಯಿ ಇದ್ದರೆ ನಾವು 'ಗಾಳಿಪಟಕ್ಕೆ' ಐದು ರೂಪಾಯಿ ಖರ್ಚು ಮಾಡಿದ್ದೇವೆ ಎನ್ನುತ್ತಾರೆ ಚಿತ್ರದ ಕಾರ್ಯಕಾರಿ ನಿರ್ಮಾಪಕ ದಯಾಳ್.
ಗ್ರಾಫಿಕ್ಸ್ಗೆ ಇಷ್ಟೊಂದು ದುಡ್ಡು ಸುರಿದಿದ್ದೀರಲ್ಲಾ? ಅಂತ ಕೇಳಿದರೆ ಇದನ್ನ 20 ಲಕ್ಷಕ್ಕೂ ಮಾಡುವವರಿದ್ದಾರೆ ಆದರೆ ಈ ಒಂದು ಕ್ವಾಲಿಟಿ ಸಿಗಬೇಕಲ್ಲಾ ಎನ್ನುತ್ತಾರೆ. ಅಷ್ಟೊಂದು ಸಹಜವಾಗಿ ಮೂಡಿಬಂದಿದೆ ಎನ್ನುವುದು ಅವರ ಮಾತಿನ ಮರ್ಮ.
ರತ್ನವೇಲು ಏನಂತಾರೆ?
ಚೆನ್ನೈನಲ್ಲಿ ಬಿಎಸ್ಸಿ ಡಿಎಫ್ಟಿ ಪಡೆದ ಕ್ರಿಯಾಶೀಲ ಛಾಯಾಗ್ರಾಹಕ ರತ್ನವೇಲು ಹೊರಟದ್ದು ಮುಂಬೈ ಕಡೆಗೆ. ದುಡಿದಿದ್ದು ಜಾಹೀರಾತು ಕ್ಷೇತ್ರದಲ್ಲಿ. ಕುಟುಂಬದಲ್ಲಿ ಯಾರಿಗೂ ಸಿನಿಮಾ ನಂಟಿಲ್ಲ. ಮುಂಬೈ, ಚೆನ್ನೈ ಅಂತ ಓಡಾಟ. ಹದಿನೈದು ವರ್ಷಗಳ ಕ್ಯಾಮೆರಾ ಒಡನಾಟ. ಛಾಯಾಗ್ರಹಕನಾಗಿ ಕೆಲಸ ನಿರ್ವಹಿಸಿದ್ದು ಮಾತ್ರ ಬೆರಳೆಣಿಕೆಯ ಚಿತ್ರಗಳಲ್ಲಿ. 'ಗಾಳಿಪಟ' ಅವರ ಛಾಯಾಗ್ರಹಣದ ಹದಿನೈದನೆಯ ಚಿತ್ರ. ಗಾಳಿಪಟ ನನ್ನ ವೃತ್ತಿ ಜೀವನದ ಒಂದು ವಿಶಿಷ್ಟ ಅನುಭವ ಎನ್ನುತ್ತಾರೆ ರತ್ನವೇಲು.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications