ಉಪ್ಪಿಯ ‘ಕಲ್ಕಿ’ ಅವತಾರ ಕ್ಯಾನ್ಸಲ್!
ವರ್ಷದ ಆರಂಭದಲ್ಲಿಯೇ ಉಪ್ಪಿ ಅಭಿಮಾನಿಗಳಿಗೆ ಒಂದು ನಿರಾಸೆಯ ಸಮಾಚಾರ! ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿದ್ದ ‘ಕಲ್ಕಿ’ ಚಿತ್ರವನ್ನು ಅರ್ಧಕ್ಕೆ ನಿಲ್ಲಿಸಲು ನಿರ್ಮಾಪಕ ಮುನಿರತ್ನಂ ಮತ್ತು ಉಪೇಂದ್ರ ನಿರ್ಧರಿಸಿದ್ದಾರೆ.
ಚಿತ್ರವನ್ನು ಅರ್ಧಕ್ಕೆ ಕೈಬಿಡುವ ಕಾರಣವೇನೆಂಬುದು ಇನ್ನೂ ಸ್ಪಷ್ಟವಾಗಿಲ್ಲ. ಗಾಂಧಿನಗರದಲ್ಲಿ ಮಾತ್ರ ಏನೇನೋ ಪಿಸುಗುಸು. ಗುಸುಪಿಸು!
ಜ್ಯೋತಿಷ್ಯದ ಮೇಲೆ ಅಪಾರ ನಂಬಿಕೆಯುಳ್ಳ ನಿರ್ಮಾಪಕ ಮುನಿರತ್ನಂ, ಉಪೇಂದ್ರ ಅವರ ಹುಟ್ಟಿದ ಹಬ್ಬದ ದಿನ ಸೆ.18.2005ರಂದು ‘ಕಲ್ಕಿ’ ಚಿತ್ರವನ್ನು ಘೋಷಿಸಿದ್ದರು. ನಂತರ ಎಂಟು ದಿನಗಳ ಚಿತ್ರೀಕರಣ ಮೈಸೂರಿನಲ್ಲಿ ನಡೆದಿತ್ತು.
ಮುನಿರತ್ನಂ ಅವರಿಗೆ 9 ಅದೃಷ್ಟದ ಸಂಖ್ಯೆ. ಆ ಪ್ರಕಾರ ಸೆ.18(ವರ್ಷದ 9ನೇ ತಿಂಗಳು ಸೆಪ್ಟೆಂಬರ್, ಜೊತೆಗೆ 1+8 ಸೇರಿಸಿದರೆ 9) ರಂದು ಕಲ್ಕಿ ಚಿತ್ರವನ್ನು ಆರಂಭಿಸಿದ್ದರು.
ಕಂಠೀರವ ಸ್ಟುಡಿಯೋದಲ್ಲಿ ಅಂದು ನಡೆದ ಚಿತ್ರದ ಮುಹೂರ್ತದ ದಿನ, ಈ ಚಿತ್ರ ಉಪೇಂದ್ರ ಅವರ ಪಾಲಿಗೆ 18ನೇ ಚಿತ್ರ. 2006ರ ಏಪ್ರಿಲ್27(2ಮತ್ತು 7ಸೇರಿದರೆ 9!))ರಂದು ಚಿತ್ರ ಬಿಡುಗಡೆಯಾಗಲಿದೆ ಎಂದಿದ್ದರು. ಅಲ್ಲದೇ ಜ್ಯೋತಿಷ್ಯ ಮತ್ತು ಸಂಖ್ಯಾಶಾಸ್ತ್ರದ ಬಗ್ಗೆ ಪತ್ರಕರ್ತರಿಗೆ ಸಾಕಷ್ಟು ಕೊರೆದಿದ್ದರು.
‘ಆಂಟಿ ಪ್ರೀತ್ಸೆ’, ‘ರಕ್ತಕಣ್ಣೀರು’ ಚಿತ್ರದ ಯಶಸ್ವಿ ಚಿತ್ರಗಳ ನಿರ್ಮಾಪಕ ಮುನಿರತ್ನಂ, ಚಿತ್ರ ಘೋಷಿಸಿ ಅರ್ಧಕ್ಕೆ ನಿಲ್ಲಿಸುವಲ್ಲಿ ಎತ್ತಿದ ಕೈ! ಈ ಹಿಂದೆ, ‘ಹಿಂದೂ’(ನಿರ್ದೇಶನ -ಎಸ್.ವಿ.ರಾಜೇಂದ್ರಸಿಂಗ್ ಬಾಬು) ಮತ್ತು ‘ದೇವದಾಸ್’ ಚಿತ್ರಗಳನ್ನು ನಿರ್ಮಾಣ ಮಾಡುವುದಾಗಿ, ಪತ್ರಿಕೆಗಳಲ್ಲಿ ಪುಟಗಟ್ಟಲೇ ಜಾಹೀರಾತು ನೀಡಿ, ನಂತರ ಸುಮ್ಮನಾಗಿದ್ದರು. ಚಿತ್ರ ಆರಂಭಿಸಿ ನಿಲ್ಲಿಸುವ ಮುನಿರತ್ನಂ ಚಾಳಿ, ಮೂರಕ್ಕೆ ಮುಕ್ತಾಯವಾಗಲಿ!
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications