ಬೆಂಗಳೂರು ದೂರದರ್ಶನದಲ್ಲಿ ಕಾರ್ನಾಡ್ ಪ್ರಯೋಗಗಳು!
ಬೆಂಗಳೂರು : ಜಗದ್ವಿಖ್ಯಾತ ನಾಟಕಕಾರ, ಸಿನಿಮಾ ನಟ-ನಿರ್ಮಾಪಕ ಗಿರೀಶ್ ಕಾರ್ನಾಡ್ ದೂರದರ್ಶನಕ್ಕಾಗಿ ಮೂರು ಕಾದಂಬರಿ ಆಧಾರಿತ ಧಾರಾವಾಹಿಗಳನ್ನು ನಿರ್ಮಿಸಲಿದ್ದಾರೆ.
ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ ಜೋಶಿ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ್ದು,
ಪೂರ್ಣಚಂದ್ರತೇಜಸ್ವಿ ಅವರ ‘ಚಿದಂಬರ ರಹಸ್ಯ’, ದೇವನೂರ ಮಹಾದೇವ ಅವರ ‘ಕುಸುಮಬಾಲೆ ’ ಹಾಗೂ ಶಾಂತಿನಾಥ ದೇಸಾಯಿ ಅವರ ‘ಓಂ ಣಮೋ’ ಕಾದಂಬರಿಗಳು ಧಾರಾವಾಹಿಗಳಾಗಿ ಮೂಡಿಬರಲಿವೆ ಎಂದು ವಿವರಿಸಿದರು.
ಅತ್ಯುತ್ತಮ ಕಾರ್ಯ ನಿರ್ವಹಣೆಗಾಗಿ, ಬೆಂಗಳೂರು ದೂರದರ್ಶನ ಕೇಂದ್ರ ‘ಇಂಡಿಯನ್ ಟೆಲಿ ಅವಾರ್ಡ್ಸ್-2005’ ಪ್ರಶಸ್ತಿ ಪಡೆದುಕೊಂಡಿದೆ. ಶೀಘ್ರದಲ್ಲೇ ‘ಹಲೋ ಸಿಎಂ’, ‘ಹಲೋ ಡಿಸಿಎಂ’ ಎಂಬ ನೇರಪ್ರಸಾರದ ಕಾರ್ಯಕ್ರಮಗಳನ್ನು ಬಿತ್ತರಿಸಲಾಗುವುದು. ವಾರಬಿಟ್ಟು ವಾರ ನಡೆಯುವ ಈ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ನಿರ್ಮಾಪಕ ಕಾರ್ನಾಡ್ ಮಾತನಾಡುತ್ತಾ, ನಾನು ಚಿದಂಬರ ರಹಸ್ಯ ಕಾದಂಬರಿ ನಿರ್ದೇಶಿಸುತ್ತಿದ್ದೇನೆ. ಉಳಿದೆರಡು ಕಾದಂಬರಿಗಳನ್ನು ನನ್ನ ಸಹಾಯಕ ಕೆ.ಎನ್.ಚೈತನ್ಯ ನಿರ್ದೇಶಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
(ಯುಎನ್ಐ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications