ಚಿತ್ರ ನಿರ್ದೇಶಕಿಯಾಗಿ ಕವಿತಾ ಲಂಕೇಶ್ ಯಶಸ್ಸಿನ ಏಣಿಯ ಇನ್ನೊಂದು ಮೆಟ್ಟಿಲು ಹತ್ತಿದ್ದಾರೆ
ಚೊಚ್ಚಲ ಚಿತ್ರ ‘ದೇವೀರಿ’ ಮೂಲಕ ದೇಶ ವಿದೇಶಗಳಲ್ಲಿ ಸಂಚಲನೆ ಹುಟ್ಟಿಸಿದ ಲಂಕೇಶ್ ಪುತ್ರಿ ಕವಿತಾ ಲಂಕೇಶ್ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ. ಅವರ ಮೂರನೇ ಚಿತ್ರ ‘ಬಿಂಬ’ ಪ್ರತಿಷ್ಠಿತ ಬ್ಯಾಂಕಾಕ್ ಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.
ಬೆಳ್ಳಿತೆರೆಯ ಮೇಲೆ ಬಾಲ ಕಲಾವಿದರಿಗೆ ಕೊಡುವ ಮಾನಸಿಕ ಯಾತನೆಯನ್ನು ನವಿರಾಗಿ ತೆರೆದಿಡುವ ‘ಬಿಂಬ’ಕ್ಕೆ ಮಾಧ್ಯಮಗಳಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಮಾಯೆಯ ಸೆಳಕಿಗೆ ಸಿಲುಕುವ ಮಧ್ಯಮ ವರ್ಗದವರ ತಾಕಲಾಟಗಳ ಚಿತ್ರಣ ಮನರಂಜನೆಯ ಜತೆಗೆ ಚಿಂತನೆಗೂ ಒರೆಗೆ ಹಚ್ಚುವಷ್ಟು ಗಂಭೀರವಾಗಿ ‘ಬಿಂಬ’ ದಲ್ಲಿ ಬಿಂಬಿತವಾಗಿದೆ.
ಕತೆ, ಚಿತ್ರಕತೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಕವಿತಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಸಾಲದ್ದಕ್ಕೆ ‘ಬಿಂಬ’ಗೆ ಹಣ ತೊಡಗಿಸಿದ್ದೂ ಈಕೆಯೇ. ಪ್ರಶಸ್ತಿ ಛಾಯಾಗ್ರಾಹಕ ಎಂದೇ ಖ್ಯಾತರಾಗಿರುವ ಎಚ್.ಎಂ.ರಾಮಚಂದ್ರ ಈ ಚಿತ್ರದಲ್ಲೂ ಕೆಲಸ ಮಾಡಿದ್ದಾರೆ. ‘ದ್ವೀಪ’ ಚಿತ್ರಕ್ಕೆ ಸಂಗೀತ ಕೊಟ್ಟಿರುವ ಐಸಾಕ್ ಥಾಮಸ್ ಕೊಟ್ಟುಕಪಲ್ಲಿ ‘ಬಿಂಬ’ಕ್ಕೆ ಮಟ್ಟು ಹಾಕಿದ್ದಾರೆ.
‘ದೇವೀರಿ’ ನಂತರ ‘ಅಲೆಮಾರಿ’ ಚಿತ್ರ ಮಾಡಿ ಶಹಬ್ಭಾಸ್ಗಿರಿ ಗಿಟ್ಟಿಸಿರುವ ಕವಿತಾ ಲಂಕೇಶ್ ನಿರ್ದೇಶನದ ಇನ್ನೊಂದು ಚಿತ್ರ ‘ಪ್ರೀತಿ ಪ್ರೇಮ ಪ್ರಣಯ’ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.
ಇದನ್ನೂ ಓದಿ
‘ಅಲೆಮಾರಿ’ಯ ಸಾವು : ಕವಿತಾ ಲಂಕೇಶ್ ಬಹಿರಂಗ ಪತ್ರ
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications