ಕನ್ನಡ ಸಿನಿಮಾದಲ್ಲಿ ನಟಿಸುವ ಮುಫತ್ ಸಲಹೆ ಕೊಡ್ತಾರಂತೆ
ಈ ಡಯಲಾಗ್ಗಳು ಇವತ್ತಿಗೂ ಜನಪ್ರಿಯ. ಮೊದಲನೆಯದು ಹಿಂದಿ ಚಿತ್ರ 'ಚಾಲ್ಬಾಜ್"ದು. ಎರಡನೆಯದು ಅದರ ಕನ್ನಡ ರೀಮೇಕ್ 'ರಾಣಿ ಮಹಾರಾಣಿ"ಯದ್ದು. ಮೊದಲನೇ ಡಯಲಾಗ್ ಹೇಳಿದ್ದು ಶಕ್ತಿ ಕಪೂರ್. ಎರಡನೆಯ ಡಯಲಾಗು ಜಗ್ಗೇಶ್ದು ಅಂತ ಹೇಳುವ ಅಗತ್ಯವೇ ಇಲ್ಲ. ಇಬ್ಬರದ್ದೂ ಆ ಚಿತ್ರಕತೆಯಲ್ಲಿ ಒಂದೇ ಪಾತ್ರ. ಈಗ ಈ ಇಬ್ಬರೂ ನಟರು ಒಂದೇ ಸಿನಿಮಾದಲ್ಲಿ ಕಚಗುಳಿಯಿಡುತ್ತಿರುವುದು ಜೋಕಾನುಭವಿಗಳಿಗೆ ಬೋನಸ್ಸು !
'ಅಪೂರ್ವ ಸಹೋದರರ್ಗಳ್"ನಂಥಾ ಹಾಸ್ಯ ಚಿತ್ರ ನಿರ್ದೇಶಿಸಿದ ಸಿಂಗೀತಂ ಆ್ಯಕ್ಷನ್- ಕಟ್ ಹೇಳಲು ನಿಂತರೆ, ಶಕ್ತಿ ಕಪೂರ್ ಒಂದ್ನಿಮಿಷ ಅಂತ ಬೆಂಗಳೂರಿನ ತಣ್ಣನೆಗಾಳಿಯನ್ನು ಸದ್ದು ಮಾಡುತ್ತಾ ಎಳಕೊಳ್ಳುತ್ತಾರೆ. ಯಾರಾದರೂ ಮಾತಾಡಿಸಿದರೆ ಸಾಕು, 'ಮೇಕಪ್" ಸಿನಿಮಾ ಸೆಟ್ಟಲ್ಲಿರೋದನ್ನೇ ಮರೆತು ನಿರರ್ಗಳ ಮಾತಿಗೆ ತೊಡಗುತ್ತಾರೆ. ನಡುನಡುವೆ ಜೋಕು ಜೋಕಾಲಿ ಹಾಸುಹೊಕ್ಕು.
ಮೊನ್ನೆ 'ಮೇಕಪ್" ಸುದ್ದಿಗೋಷ್ಠಿಯಲ್ಲಿ ಕಂಡ ಶಕ್ತಿ ಕಪೂರ್ ಒರಿಜಿನಲ್. ಹಮ್ಮು ಬಿಮ್ಮು ಮುಂಬಯಿಯಲ್ಲೇ ಬಿಟ್ಟು ಬಂದಿದ್ದರು. ಗುಂಡು ಹಾಕಿದ ನಂತರದ ಗುಂ...ಗುಂ.. ಮಾತ್ರ ಇದ್ದೇ ಇತ್ತು. ಜಗ್ಗೇಶ್ ಹೆಂಡತಿ ಪರಿಮಳಾ ಮಾತಾಡಿದರೆ, ಇವರು ಭಾವೀ ಪೊಲಿಟಿಷಿಯನ್ ಅಂತ ಬಿರುದು ಕೊಡುವ, ನಟಿ ಲೈಲಾ ಎದುರು ಬಂದೊಡನೆ ನಿದ್ರೆ ಓಡಿಹೋದದ್ದನ್ನು ಹಿಂದೂಮುಂದೂ ನೋಡದೆ ಉಸುರುವ ನೇರ ಆಸಾಮಿ ಶಕ್ತಿ ಕಪೂರ್. ನಡುನಡುವೆ ಮುಖದ ಮುಂದೆ ಬರುವ ಕೆಂಚ ಕೂದಲನ್ನು ಸರಿಸುವ ಮ್ಯಾನರಿಸಮ್ಮು.
ಬನ್ನಿ, ಮೋಹನ್ ಕಪೂರ್ ಉರುಫ್ ಶಕ್ತಿ ಕಪೂರ್ ಹರಟೆ ಕೇಳೋಣ....
- ವಾಹ್ ! ಬೆಂಗಳೂರು. ಸಾವು ಅಥವಾ ರಿಟೈರ್ಡ್ ಆಗುವ ದಿನ ಯಾವತ್ತಾದರೂ ಬಂದೇ ಬರುತ್ತೆ. ರಿಟೈರ್ಡ್ ಆದಲ್ಲಿ ಬೆಂಗಳೂರಲ್ಲೇ ಸೆಟ್ಲ್ ಆಗೋದು ಖಂಡಿತ.
- ಶಾರುಖ್, ಸಲ್ಮಾನ್, ಆಮೀರ್ ಎಲ್ಲರಿಗೂ ಕನ್ನಡ ಸಿನಿಮಾದಲ್ಲಿ ನಟಿಸಿ ಅಂತ ಹೇಳ್ತೀನಿ. ಯಾಕೆಂದರೆ, ಬೆಂಗಳೂರನ್ನು ಅನುಭವಿಸುವ ಭಾಗ್ಯ ಅವರದ್ದಾಗುತ್ತೆ.
- ಖಳ ನಟನಾಗಿದ್ದಾಗಲೇ ನನ್ನ ಬ್ಯಾಂಕ್ ಬ್ಯಾಲೆನ್ಸ್ ಜೋರಾಗಿತ್ತು. ತಮಾಷೆ ನಟ ಆದದ್ದೇ ಆದದ್ದು, ಬ್ಯಾಲೆನ್ಸು ಕರಗುತ್ತಾ ಹೋಯಿತು. ಇನ್ನು ಕಾಮಿಡಿಗೆ ಫುಲ್ಸ್ಟಾಪ್. ನಾನೇನಿದ್ದರೂ ಖಳನಾಯಕನಾಗಿ ಮಾತ್ರ ನಟಿಸೋದು.
- ಸಿನಿಮಾದಲ್ಲೇ ಇಪ್ಪತ್ತೇಳು ವರ್ಷ ಕಳೆದೆ. 750ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದೆ. ಹಾಗೆ ಬಾಲಿವುಡ್ಡಲ್ಲಿ ಹೇಳೋದೇ ತಮಾಷೆ ವಿಷಯವಾಗುತ್ತದೆ. ಏನೇ ಆಗಲಿ, ಸಿನಿಮಾಗೋಸ್ಕರ ನನ್ನ ಜೀವ ಮುಡಿಪು.
- ಬೆಂಗಳೂರಿಗರ ಪರಿಚಾರಿಕೆ ನನ್ನನ್ನು ಮೂಕ ವಿಸ್ಮಿತನನ್ನಾಗಿಸಿದೆ. ಅಮೆರಿಕೆಯಿಂದ ವಯಾ ಮುಂಬಯಿ ಇಲ್ಲಿಗೆ ಬಂದಿಳಿದ ನನ್ನನ್ನು 10 ಮಂದಿ ಔಷಧಿ ಸಮೇತ ನನ್ನನ್ನು ಉಪಚರಿಸಿದರು. ಅಕ್ಷರಶಃ ಮಗುವಿನಂತೆ ನೋಡಿಕೊಂಡರು. ಹ್ಯಾಟ್ಸಾಫ್ ಬೆಂಗಳೂರ್ !
ಶಕ್ತಿ ಕಪೂರ್ ಕೊಂಚ ಕನ್ನಡ ಕೂಡ ಕಲಿತಿದ್ದಾರೆ. ಪದಗಳ ಉಚ್ಚಾರಣೆ ಕೇಳಿಯೇ ಪರಿಮಳಾ ಜಗ್ಗೇಶ್ ಅವರ ಫ್ಯಾನ್ ಆಗಿಬಿಟ್ಟಿದ್ದಾರೆ. ಸಿಂಗೀತಂಗೂ ಸಂತೋಷವಾಗಿದೆ. ಒಂದು ವಾರದ ಅವರ ಶೂಟಿಂಗ್ ಯಾವುದೇ ವಿಘ್ನಗಳಿಲ್ಲದೆ ಮುಗಿದಿದೆ.
ಅಂದಹಾಗೆ, ಮೇಕಪ್ ಚಿತ್ರದ ಮುಕ್ಕಾಲು ಭಾಗ ಶೂಟಿಂಗ್ ಕೇವಲ 19 ದಿನಗಳಲ್ಲಿ ಮುಗಿದಿದೆ. ಜಗ್ಗೇಶ್ ನಿರಾಳವಾಗಿದ್ದಾರೆ. ತಮ್ಮ ಹೂಡಿಕೆಯ ಹಣ ಸೇಫು ಎಂಬುದು ಅವರ ಆತ್ಮವಿಶ್ವಾಸ.


Click it and Unblock the Notifications