ವಿಷ್ಣುವರ್ಧನ್ ಈಗ ‘ಕದಂಬ’ !
*ದಟ್ಸ್ಕನ್ನಡ ಬ್ಯೂರೊ
ವಿಷ್ಣು ನಾಯಕರಾಗಿ ಅಭಿನಯಿಸುತ್ತಿರುವ ‘ಕದಂಬ’ ಚಿತ್ರಕ್ಕೆ ಸೆ.1ರ ಸೋಮವಾರ ಬೆಂಗಳೂರಿನ ಅಶೋಕ ಹೋಟೆಲ್ನಲ್ಲಿ ಚಾಲನೆ ದೊರಕಿತು. ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ಕಮಲಾಕರ್ ಜಂಟಿ ನಿರ್ಮಾಣದ ‘ಕದಂಬ’ ಚಿತ್ರ ‘ಯೂನಿವರ್ಸಲ್ ಬ್ಯಾನರ್’ ಲಾಂಛನದಲ್ಲಿ ಸೆಟ್ಟೇರಿದೆ.
ಸಾಹಸ ಹಾಗೂ ಸೆಂಟಿಮೆಂಟ್ ಸಮ್ಮಿಶ್ರಣದ ‘ಕದಂಬ’ ಚಿತ್ರದಲ್ಲಿ ವಿಷ್ಣುಗೆ ನಾಯಕಿಯಾಗಿ ಭಾನುಪ್ರಿಯ ನಟಿಸುವರು. ಹಿರಿಯ ನಟ ಶ್ರೀನಿವಾಸಮೂರ್ತಿಯವರ ಪುತ್ರ ನವೀನ್ಕೃಷ್ಣ ‘ಕದಂಬ’ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ.
‘ಇದು ತಂದೆ ಮಕ್ಕಳ ಕಥೆಯ ಚಿತ್ರ. ತಂದೆ ಹಾಗೂ ಮಗನ ನಡುವೆ ಸಣ್ಣ ಭಿನ್ನಾಭಿಪ್ರಾಯವುಂಟಾಗಿ, ಅದರ ಕಾರಣದಿಂದಾಗಿ ಉಂಟಾಗುವ ಮಾನಸಿಕ ತುಮುಲಗಳ ಕಥೆ’ ಎಂದು ‘ಕದಂಬ’ ಮುಹೂರ್ತದಲ್ಲಿ ಹಾಜರಿದ್ದ ವಿಷ್ಣುವರ್ಧನ್ ಕಥಾವಸ್ತುವಿನ ಎಳೆಯನ್ನು ಸುದ್ದಿಗಾರರೆದುರು ಬಿಚ್ಚಿಟ್ಟರು. ಯಥಾ ಪ್ರಕಾರ ಲೋಕದ ವಿದ್ಯಮಾನಗಳ ಕುರಿತು ವಿಷ್ಣು ವಿಶ್ಲೇಷಣೆ ಹಾಗೂ ಜಿಜ್ಞಾಸೆ ಮುಂದುವರಿಯಿತು.
‘ಕದಂಬ’ದ ಮೂಲಕ ನಿರ್ದೇಶಕ ಸುರೇಶ್ ಕೃಷ್ಣ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗಲಿದ್ದಾರೆ. ಈಗಾಗಲೇ ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಗಳಲ್ಲಿ ಖ್ಯಾತ ತಾರೆಗಳ ಚಿತ್ರಗಳನ್ನು ನಿರ್ದೇಶಿಸಿರುವ ಸುರೇಶ್ಕೃಷ್ಣ ಈಗ ಕನ್ನಡ ಚಿತ್ರ ನಿರ್ದೇಶಿಸುವ ಮೂಲಕ ಚತುರ್ಭಾಷಾ ನಿರ್ದೇಶಕರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.
ಅಂದಹಾಗೆ, ‘ಕದಂಬ’ ಚಿತ್ರದಲ್ಲಿ ವಿಷ್ಣುವರ್ಧನ್ ಅವರದು ಪೊಲೀಸ್ ಅಧಿಕಾರಿಯ ಪಾತ್ರ. ನಾಲ್ಕು ವರ್ಷಗಳ ನಂತರ ವಿಷ್ಣು ಪೊಲೀಸ್ ಯೂನಿಫಾರ್ಮ್ ತೊಡುತ್ತಿದ್ದಾರೆ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications