‘ರವಿಶಾಸ್ತ್ರಿ ’ ಸಿನಿಮಾ ಗೆಲ್ಲಲೇ ಬೇಕು.. ಯಾಕೆಂದರೆ..?
ಕಡಿಮೆ ಅವಧಿಯಲ್ಲಿ ಸಿದ್ಧಗೊಂಡ ರವಿಚಂದ್ರನ್ ಚಿತ್ರಗಳು ಗೆದ್ದಿವೆ. ಅದೇ ರೀತಿ ಇತಿಹಾಸ ಮರುಕಳಿಸುತ್ತದೆ. ಈ ಸಲ ಕೇವಲ 28ದಿನಗಳಲ್ಲಿ ಪೂರ್ಣಗೊಂಡಿರುವ ‘ ರವಿಶಾಸ್ತ್ರಿ’ ಚಿತ್ರ ಗೆಲ್ಲುತ್ತದೆ ಎಂಬ ವಿಶ್ವಾಸ, ಚಿತ್ರದ ನಿರ್ಮಾಪಕ ಸಂದೇಶ್ ನಾಗರಾಜ್ ಅವರದು.
ನಗರದ ಏಟ್ರಿಯಾ ಹೋಟೆಲ್ನಲ್ಲಿ ನಡೆದ ‘ ರವಿಶಾಸ್ತ್ರಿ’ ಚಿತ್ರದ ಧ್ವನಿ ಸುರುಳಿ ಹಾಗೂ ಸಿಡಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ರವಿಚಂದ್ರನ್ ನೀಡಿದ ಸಹಕಾರ, ನಿರ್ದೇಶಕ ಎಂ.ಎಸ್.ರಾಜಶೇಖರ್ ಹಾಗೂ ಸಂಗೀತ ನಿರ್ದೇಶಕ ರಾಜೇಶ್ ರಾಮನಾಥ್ ಶ್ರಮವನ್ನು ಹೊಗಳಿದರು.
ಚಿತ್ರದ ಪ್ರಮುಖ ನಟರಾದ ರವಿಚಂದ್ರನ್, ಸ್ನೇಹಾ ಸೇರಿದಂತೆ ಯಾವುದೇ ಪ್ರಮುಖ ತಾರೆಗಳಿಲ್ಲದ್ದು ಮಾತ್ರ ಅಲ್ಲಿ ಎದ್ದುಕಾಣುತ್ತಿತ್ತು. ಅಂದಹಾಗೆ ಈ ಸಮಾರಂಭದಕ್ಕೆ ಮಾಜಿ ಕ್ರಿಕೆಟ್ ತಾರೆ ರವಿಶಾಸ್ತ್ರಿ ಆಗಮಿಸಬೇಕಿತ್ತು. ಇದಕ್ಕಾಗಿ ಲಹರಿ ಸಂಸ್ಥೆಯ ವೇಲು ಅಗತ್ಯ ಏರ್ಪಾಟು ಕೂಡ ಮಾಡಿದ್ದರು. ಎಲ್ಲ ವ್ಯವಸ್ಥೆಗಳ ಹೊರತಾಗಿಯೂ ಶಾಸ್ತ್ರಿ ಐದು ಲಕ್ಷ ರೂಪಾಯಿಗಳ ಬೇಡಿಕೆ ಇಟ್ಟಿದ್ದರಿಂದ ವೇಲು ಈ ವಿಚಾರ ಅಲ್ಲಿಗೇ ಬಿಟ್ಟರಂತೆ. ಹಾಗಂತ ಅವರೇ ಈ ಸಮಾರಂಭದಲ್ಲಿ ಹೇಳುವುದನ್ನು ಮರೆಯಲಿಲ್ಲ.
ಚಿತ್ರ ಅಕ್ಟೋಬರ್ 6ರಿಂದ ರಾಜ್ಯಾದ್ಯಂತ ತೆರೆಕಾಣಲಿದೆ.


Click it and Unblock the Notifications