ಅಳುಮುಂಜಿ ಶ್ರುತಿಯ ಆಕ್ಷನ್ ಕಟ್;ನಮ್ಮ ಬೆಸ್ಟ್ ಆಫ್ ಲಕ್!
ಎಲ್ಲವೂ ಅಂದುಕೊಂಡಂತೆ ಆದರೆ ಅಳುಮುಂಜಿ ಶ್ರುತಿ, ಆಕ್ಷನ್ ಕಟ್ ಹೇಳಲಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಿರ್ದೇಶಕಿಯರ ಸಂಖ್ಯೆ ಮೊದಲಿನಿಂದಲೂ ಕಡಿಮೆಯೇ. ಪ್ರೇಮಾ ಕಾರಂತ್ ,ಕವಿತಾ ಲಂಕೇಶ್ ಅವರನ್ನು ಹೊರತು ಪಡಿಸಿದರೆ, ತೂಕದ ಮೂರನೇ ಹೆಸರು ನೆನಪಾಗುವುದಿಲ್ಲ. ಈ ಮಧ್ಯೆ ವಿಜಯ ಲಕ್ಷ್ಮೀ ಸಿಂಗ್ 'ಈ ಬಂಧನ' ಚಿತ್ರವನ್ನು, ಪ್ರಿಯಾ ಹಾಸನ್ 'ಜಂಭದ ಹುಡುಗಿ' ಚಿತ್ರವನ್ನು ನಿರ್ದೇಶಿಸಿ, ಮಹಿಳಾ ನಿರ್ದೇಶಕಿಯರ ಪಟ್ಟಿಯನ್ನು ಉದ್ದ ಮಾಡಿದ್ದಾರೆ. ಪಟ್ಟಿಯನ್ನು ಇನ್ನಷ್ಟು ಉದ್ದ ಮಾಡಲು ಶ್ರುತಿ ನಿರ್ಧಾರ ಮಾಡಿದ್ದಾರೆ. ಅವರಿಗೆ ಬೆಸ್ಟ್ ಆಫ್ ಲಕ್.
ನನ್ನ ಬದುಕಿನ ಮಹತ್ವಕಾಂಕ್ಷೆ;ಚಲನಚಿತ್ರ ನಿರ್ದೇಶನ. ಮುಂದಿನ ವರ್ಷ ನಿರ್ದೇಶನ ಮಾಡುವ ಯೋಜನೆ ಇದೆ. ನಾನು ಅನೇಕ ಕಾದಂಬರಿ ಓದಿದ್ದೇನೆ. ನಿರ್ದೇಶನಕ್ಕೆ ಬೇಕಾದ ತಂತ್ರಗಾರಿಕೆ ಮತ್ತು ಮಾಹಿತಿಯನ್ನು ನನ್ನ ಪತಿ ಎಸ್.ಮಹೇಂದರ್ ಅವರಿಂದ ಕಲಿತಿದ್ದೇನೆ. ಈ ರಂಗದಲ್ಲಿ ಗೆದ್ದೇ ಗೆಲ್ಲುತ್ತೇನೆ ಎಂದ ಶ್ರುತಿ ಮುಖದಲ್ಲಿ ಆತ್ಮವಿಶ್ವಾಸದ ಬೆಳದಿಂಗಳು. ಅವ್ವ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಈ ಚಿತ್ರದಲ್ಲಿ ಅವರು ರಂಗವ್ವನ ಪಾತ್ರವನ್ನು ಮಾಡಿದ್ದು, ಒಂದು ಒಳ್ಳೆ ಪಾತ್ರ ನೀಡಿದ್ದಕ್ಕಾಗಿ ನಿರ್ದೇಶಕಿ ಕವಿತಾ ಲಂಕೇಶ್ ಅವರಿಗೆ ಥ್ಯಾಂಕ್ಸ್ ಮೇಲೆ ಥ್ಯಾಂಕ್ಸ್ ಹೇಳಿದರು. ಈ ಚಿತ್ರದಲ್ಲಿ ಅವರದು ಫೈರ್ ಬ್ರಾಂಡ್ ಪಾತ್ರವಂತೆ.
'ಶ್ರುತಿ' ಚಿತ್ರದ ಮುಖಾಂತರ ನಾಯಕಿಯಾದ ಈಯಮ್ಮ, ಆಮೇಲೆ ಅನೇಕ ಚಿತ್ರಗಳಲ್ಲಿ ಭಾವಪೂರ್ಣ ಪಾತ್ರಗಳ ನಿರ್ವಹಿಸಿದರು. ತಮಿಳಿಗೂ ಹೋದರು. ಅಲ್ಲಿಯೂ ತಮ್ಮ ಹೆಸರನ್ನು ಕೆತ್ತಿದರು. ರಂಜಿತಾ, ಕರ್ಪೂರದ ಗೊಂಬೆ, ತಾಯಿಲ್ಲದ ತಬ್ಬಲಿ, ರಾಮ ಭಾಮ ಶಾಮ,ಗಟ್ಟಿ ಮೇಳೆ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಶ್ರುತಿ, ವಿವಿಧ ಪ್ರಶಸ್ತಿಗಳನ್ನು ಮಡಿಲಿಗೆ ಹಾಕಿಕೊಂಡವರು.
ಬಣ್ಣದ ಲೋಕದ ಬಣ್ಣದ ಕನಸಿನ ಜೊತೆಗೆ, ರಾಜಕಾರಣದಲ್ಲೂ ಶ್ರುತಿಗೆ ಆಸಕ್ತಿ ಇದೆ. ಅವರು ಮತ್ತು ಅವರ ಪತಿ ಎಸ್.ಮಹೇಂದರ್ ಇತ್ತೀಚೆಗಷ್ಟೇ ಬಿಜೆಪಿ ಪ್ರವೇಶಿಸಿದ್ದು, ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಕೊಳ್ಳೆಗಾಲ ಕ್ಷೇತ್ರದಲ್ಲಿ ಮಹೇಂದರ್ ಸ್ಪರ್ಧಿಸಲಿದ್ದಾರೆ. ಅವರ ಗೆಲುವಿಗಾಗಿ ಶ್ರುತಿ ಹಿಂದೆಯೇ ತಿರುಗಲಿದ್ದಾರೆ.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications