ನವಂಬರ್ 12ರಿಂದ ‘ತಿರುಗಾಟ’ ಶುರು
ಬೆಂಗಳೂರು : ಕನ್ನಡ ಚಿತ್ರೋದ್ಯಮದ ಬಿಕ್ಕಟ್ಟು ಇನ್ನು ಹಸಿಹಸಿಯಾಗಿಯೇ ಇದೆ. ನಿರ್ಮಾಪಕರು ಮತ್ತು ಪ್ರದರ್ಶಕರು ಕೋಳಿ ಜಗಳದಲ್ಲಿ ಮೈಮರೆತರೇ ಹೊರತು, ಪ್ರೇಕ್ಷಕರ ಒಲವು-ನಿಲುವುಗಳನ್ನು ಕೇಳಲೇ ಇಲ್ಲ. ಕನ್ನಡ ಪ್ರೇಕ್ಷಕರ ಆಸಕ್ತಿ-ಅಭಿರುಚಿಗೆ ಸ್ಪಂದಿಸಲು ಹಾಗೂ ಕನ್ನಡ ಸಿನಿಮಾಗಳಿಂದ ದೂರ ಉಳಿಯುತ್ತಿರುವ ಮಂದಿಯನ್ನು ಸೆಳೆಯಲು ಚಿಂತಕರ ಚಾವಡಿಯಾಂದು ಮುಂದಾಗಿದೆ. ಚಾವಡಿಯ ಕಾರ್ಯ ಚಟುವಟಿಕೆಗಳಿಗೆ ನವೆಂಬರ್ 12 ರಂದು ಚಾಲನೆ ದೊರೆಯಲಿದೆ.
ಖ್ಯಾತ ಚಲನಚಿತ್ರನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ಐ.ಎಂ. ವಿಠಲ್ ಮೂರ್ತಿ, ರಾಜ್ಯ ಚಲನಚಿತ್ರ ಪ್ರದರ್ಶಕರ ಮಹಾಮಂಡಳದ ಅಧ್ಯಕ್ಷ ಆರ್.ಆರ್.ಓದುಗೌಡ, ಟಿ.ಎಸ್.ರಂಗ ಮತ್ತಿತರರ ಕನಸಿನ ಕೂಸು- ಸಿನಿಮಾ ತಿರುಗಾಟ. ಪಟ್ಟಣ-ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೇ ಗ್ರಾಮಾಂತರ ಪ್ರದೇಶಗಳಲ್ಲೂ ಚಲನಚಿತ್ರ ಪ್ರದರ್ಶನದ ಗುರಿ ಹೊಂದಲಾಗಿದೆ.
ಹುಬ್ಬಳ್ಳಿಯಿಂದ 'ಸಿನಿಮಾ ತಿರುಗಾಟ" ಎಂಬ ಹೆಸರಿನಲ್ಲಿ ಆರಂಭಗೊಳ್ಳಲಿರುವ ಚಿತ್ರೋತ್ಸವವನ್ನು, ಹಂತಹಂತವಾಗಿ ರಾಜ್ಯದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ. ಹುಬ್ಬಳ್ಳಿಯ ಆಯ್ದ ಕೆಲವು ಚಿತ್ರಮಂದಿರಗಳಲ್ಲಿ ಕನ್ನಡದ ಹಳೆಯ ಚಿತ್ರಗಳ ಸಹಿತ ಗುಣಮಟ್ಟದ ಚಿತ್ರಗಳನ್ನು ಪ್ರದರ್ಶಿಸಲು ಸಿದ್ಧತೆಗಳು ನಡೆದಿವೆ. ಅಲ್ಲದೇ ಕನ್ನಡ ಚಿತ್ರರಂಗದ ಪ್ರತಿಭಾವಂತರ ತಂಡ, ಪ್ರೇಕ್ಷಕರ ಜತೆ ಸಂವಾದದಲ್ಲಿ ಪಾಲ್ಗೊಳ್ಳಲಿದೆ.
ಸೇತುವೆ : ರಾಜ್ಯದಲ್ಲಿ 1300 ಚಿತ್ರಮಂದಿರಗಳಿದ್ದು, ಅವು ಬೆಂಗಳೂರು ಚಿತ್ರೋದ್ಯಮದದವರ ತಾಳಕ್ಕೆ ತಕ್ಕಂತೆ ಕುಣಿಯಬೇಕಾದ ಅನಿವಾರ್ಯತೆ ತಪ್ಪಿಸುವುದು ಸಹಾ ಚಾವಡಿಯ ಮೂಲ ಉದ್ದೇಶ. ನಿರ್ಮಾಪಕರು, ನಿರ್ದೇಶಕರು, ವಿತರಕರು, ಪ್ರದರ್ಶಕರ ನಡುವಿನ ಗೋಡೆಗಳನ್ನು ಕೆಡವಿ, ಮನಸು-ಮನಸುಗಳ ನಡುವೆ ಸೇತುವೆ ಕಟ್ಟುವುದು ಚಾವಡಿಯ ಕನಸು.(ಇನ್ಫೋ ವಾರ್ತೆ)


Click it and Unblock the Notifications