ನಟ ಕುಮಾರ್ ಗೋವಿಂದ್ ತ್ರಿಕೋನ ಪ್ರೇಮಕತೆ
ಸುದೀರ್ಘ ಸಮಯ ಗಾಂಧಿನಗರದಿಂದ ನಾಪತ್ತೆಯಾಗಿದ್ದ ನಟ ಕುಮಾರ್ ಗೋವಿಂದ್ ಈಗ ಮರಳಿಬಂದಿದ್ದಾರೆ. ಈ ಬಾರಿ ಅವರು ನವಿರಾದ ಪ್ರೇಮ ಕತೆಯಲ್ಲಿ ಬೆಂದೆದ್ದಿದ್ದಾರೆ. ಪ್ರೀತಿಸಿ ಹೊರಟವಳ ಹಿಂದೆ ಬಿದ್ದರೆ ಇನ್ನೇನಾಗುತ್ತದೆ! ಅಂದಹಾಗೆ ಇದು ಪ್ರೀತಿಸಿ ಹೊರಟವಳೇ ಚಿತ್ರದ ಕತೆ. ಬಿ.ಕೆ.ಶ್ರೀನಿವಾಸ್ ಅರ್ಪಿಸುವ ಚಿತ್ರದ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿದೆ. ಸದ್ಯದಲ್ಲೇ ಚಿತ್ರದ ಪ್ರಥಮಪ್ರತಿ ಸಿದ್ದವಾಗಲಿದೆ.
ತ್ರಿಕೋನ ಪ್ರೇಮಕಥೆಯ ಈ ಚಿತ್ರದಲ್ಲಿ ನಾಯಕಿ ಮಾಡಿದ ಚಿಕ್ಕ ಸಹಾಯದಿಂದ ನಾಯಕನ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗುತ್ತದೆ ಎಂಬ ಎಳೆಯಿಂದ ಕಥೆ ಸಾಗುತ್ತದೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು ಗೌತಮ್ಶ್ರೀನಿವಾಸ್ ಸಂಗೀತ ನೀಡಿದ್ದಾರೆ. ನಿರ್ದೇಶಕ ಪ್ರೇಮ್, ಅನೂಪ್, ಅನುರಾಧಾಭಟ್, ಮಧುಬಾಲಕೃಷ್ಣ ಹಾಗೂ ಟಿ.ವಿ.ಕೃಷ್ಣ ಚಿತ್ರದ ಗೀತೆಗಳನ್ನು ಹಾಡಿದ್ದಾರೆ.
ನಿರ್ಮಾಪಕ ಬಿ.ಕೆ.ಶ್ರೀನಿವಾಸ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಣಿಕೊಂಡಿರುವುದಲ್ಲದೆ, ಒಂದು ಹಾಡನ್ನೂ ಬರೆದಿದ್ದಾರೆ. ಉಳಿದ ಗೀತೆಗಳನ್ನು ಕುಮಾರ್ಗೋವಿಂದ್, ಹರೀಶ್ ಹಾಗೂ ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ರವಿ ಸಂಕಲನವಿರುವ ಈ ಚಿತ್ರಕ್ಕೆ ರಂಗಾ ಅವರ ಛಾಯಾಗ್ರಹಣವಿದೆ. ಕುಮಾರ್ಗೋವಿಂದ್, ಡಿಂಪಲ್, ಪದ್ಮಾವಾಸಂತಿ, ಸುಂದರರಾಜ್, ಬ್ಯಾಂಕ್ಜನಾರ್ದನ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. ಊಟಿ, ಕುಂದಾಪುರ, ನಂದಿ, ಬೆಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರಕ್ಕೆ ಇಪ್ಪತ್ತೇಳು ದಿನಗಳ ಚಿತ್ರೀಕರಣ ನಡೆದಿದೆ. (ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications











