ನಾನು ಒಕ್ಕಲಿಗ ಎನ್ನಲು ಹಿಂಜರಿಕೆ ಇಲ್ಲ: ಅಂಬರೀಷ್
ನಾನು ಒಕ್ಕಲಿಗ ಎಂದು ಹೇಳಿಕೊಳ್ಳಲು ಯಾವುದೇ ಹಿಂಜರಿಕೆ ಇಲ್ಲ. ಒಕ್ಕಲಿಗರೆಲ್ಲಾ ತಮ್ಮಲ್ಲಿನ ವೈಮನಸ್ಯ ಮರೆತು ಸಂಘಟಿತರಾದರೆ ಮಾತ್ರ ಸಮುದಾಯ ಬೆಳೆಯಲು ಸಾಧ್ಯ ಎಂದು ಮಾಜಿ ಸಂಸದ ಅಂಬರೀಷ್ ಹೇಳಿದ್ದಾರೆ.
ಅವರು ಕುವೆಂಪು ಕಲಾಕ್ಷೇತ್ರದಲ್ಲಿ ನಡೆದ ಒಕ್ಕಲಿಗ ಸಂಘದ ಸದಸ್ಯತ್ವದ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಇಂದು ಎಲ್ಲ ಸಮುದಾಯಗಳು ಒಗ್ಗಟ್ಟಿನಿಂದ ಇದ್ದಾರೆ. ಆದರೆ ನಮ್ಮಲ್ಲಿ ಕೆಲವು ವೈಮನಸ್ಯಗಳ ಕಾರಣ ಸಂಘಟಿತರಾಗಲು ಸಾಧ್ಯವಾಗುತ್ತಿಲ್ಲ ಎಂದು ಅಂಬಿ ವಿಶಾದ ವ್ಯಕ್ತಪಡಿಸಿದರು.
ಈ ಹಿಂದೆ ನಾನೂ, ಬಾಲಗಂಗಾಧರನಾಥ ಶ್ರೀಗಳು, ಮುದ್ದುಗೌಡರು ಸೇರಿದಂತೆ ಸಮುದಾಯದ ಅನೇಕರು ಬೃಹತ್ ಮಟ್ಟದ ಸಮಾವೇಶ ನಡೆಸಿದ ಮೇಲೆಯೇ ನಮ್ಮ ಸಮುದಾಯದವರು ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಲು ಸಾಧ್ಯವಾಯಿತು ಎಂದರು.
ಒಕ್ಕಲಿಗರ ಸಂಘದಲ್ಲಿರುವವರು ಸ್ವಾರ್ಥ ಬಿಟ್ಟು ಸಂಘಟನೆ ಕಡೆಗೆ ಗಮನ ಕೊಡಬೇಕು. ಆಗಷ್ಟೇ ನಾವು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆಯಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪ ಸಹ ಉಪಸ್ಥಿತರಿದ್ದರು.
ಸಂಘದ ಸದಸ್ಯರು ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಶೇ.15ರಷ್ಟು ರಿಯಾಯಿತಿ ನೀಡಲಾಗುತ್ತದೆ. ಪ್ರಥಮ ಹಂತವಾಗಿ 1.70 ಲಕ್ಷ ಸದಸ್ಯರಿಗೆ ಗುರುತಿನ ಚೀಟಿ ನೀಡಲಾಗಿದೆ. ಮುಂಬರುವ ದಿನಗಳಲ್ಲಿ 10 ಲಕ್ಷ ಮಂದಿಗೆ ಗುರುತಿನ ಚೀಟಿ ನೀಡಲಾಗುತ್ತದೆ ಎಂದು ಕೆಂಚಪ್ಪ ತಿಳಿಸಿದರು.
ಆದಿಚುಂಚನಗಿರಿ ಪೀಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಮಾತನಾಡುತ್ತಾ, ಸಮುದಾಯದಲ್ಲಿ ಅನೇಕ ಪ್ರತಿಭಾವಂತ ಮಕ್ಕಳಿದ್ದಾರೆ. ಅಂತಹ ಮಕ್ಕಳನ್ನು ಗುರುತಿಸಿ ಬೆನ್ನುತಟ್ಟಬೇಕಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಶಾಲಾ, ಕಾಲೇಜು, ಹಾಸ್ಟೆಲ್ಗಳನ್ನು ತೆರೆಯಬೇಕು ಎಂದರು. ಜಿ.ನಾರಾಯಣ, ಎಂಎಸ್ಸಿ ಎ ಕೃಷ್ಣಪ್ಪ, ಸಾವಿತ್ರಿ ವೆಂಕಟಗಿರಿಗೌಡ ಮತ್ತಿತ್ತರು ಉಪಸ್ಥಿತರಿದ್ದರು.


Click it and Unblock the Notifications











