ಥಿಯೇಟರ್ ಮುಂದೆ ಬಲೂನಿನಲ್ಲಿ ದಿಗಂತ್ ಹಾರಾಟ
ನಿರ್ದೇಶಕ ಇಂದ್ರಜಿತ್ ಲಂಕೇಶ್ ತಮ್ಮ ಚಿತ್ರ 'ದೇವ್ ಸನ್ ಆಫ್ ಮುದ್ದೇಗೌಡ' ಚಿತ್ರದ ಪ್ರಚಾರ ಕಾರ್ಯವನ್ನು ವಿನೂತನ ರೀತಿಯಲ್ಲಿ ಮಾಡಲು ನಿರ್ಧರಿಸಿದ್ದಾರೆ. ಅದರಲ್ಲೊಂದು, ಮಂಡ್ಯದಲ್ಲಿ ಪ್ರಮೋಶನ್ ಹೆಸರಿನಲ್ಲಿ ದೊಡ್ಡ ಮುದ್ದೆಯೊಂದನ್ನು ಲೋಕಾರ್ಪಣೆ ಮಾಡುವುದು. ಸ್ಥಳೀಯ ಸಂಘಸಂಸ್ಥೆಗಳ ನೆರವಿನಿಂದ ಪೌಷ್ಠಿಕ ಸತ್ವಗಳಿರುವ ಮುದ್ದೆಯನ್ನು ತಯಾರಿಸಿ ಅದನ್ನು ನಂತರ ಬಡಮಕ್ಕಳಿಗೆ ಹಂಚುವುದು.
ಇದಲ್ಲದೇ ಇನ್ನೊಂದು ಪ್ರಯೋಗಕ್ಕೂ ಇಂದ್ರಜಿತ್ ಮುಂದಾಗಿದ್ದಾರೆ. ಮಾಮೂಲಿ ವುಡನ್ ಕಟೌಟ್ ನಿಲ್ಲಿಸುವ ಬದಲು, ಒಂದು ಕಡೆ ದಿಗಂತ್ ಫೋಟೋ ಹಾಗೂ ಇನ್ನೊಂದು ಕಡೆ ಚಿತ್ರದ ಶೀರ್ಷಿಕೆ ಇರುವ ಬಲೂನ್ ಒಂದನ್ನು ಬಿಡುಗಡೆಯಾದ ಚಿತ್ರಮಂದಿರಗಳ ಮುಂದೆ ಹಾರಿಬಿಡಲು ನಿರ್ಧರಿಸಿದ್ದಾರೆ. ಇದು ಮಾಮೂಲಿ ಕಟೌಟ್ ನಿಲ್ಲಿಸುವುದಕ್ಕಿಂತ ಜಾಸ್ತಿ ದುಬಾರಿ.
ಆದರೆ ಇಂದ್ರಜಿತ್ ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹೊಸದನ್ನು ಮಾಡುವ ಪ್ರಯತ್ನವಷ್ಟೇ ತಮ್ಮದು ಎಂದು ಈ ಮೂಲಕ ತೋರಿಸಲಿದ್ದಾರಂತೆ. ಅಂದಹಾಗೆ, ಈ ಚಿತ್ರ ಇದೇ ತಿಂಗಳು, ಏಪ್ರಿಲ್ 6, 2012 ರಂದು ರಾಜ್ಯಾದ್ಯಂತ ತೆರೆಕಾಣಲಿದೆ. ಯೂ ಟ್ಯೂಬ್ ನಲ್ಲಿ ಅದಕ್ಕೂ ಮೊದಲೇ ಭಾರತ ಹೊರತುಪಡಿಸಿ ಮಿಕ್ಕ ಕಡೆ ಸಿನಿಮಾ ಪ್ರೀಮಿಯರ್ ಶೋ ಲಭ್ಯವಿದೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











