ನಾಲ್ಕು ನಟರೊಂದಿಗೆ 'ಮಸ್ತ್ ಮಜಾ ಮಾಡಿ'!
ನಟರಾದ ಸುದೀಪ್, ವಿಜಯ್ ರಾಘವೇಂದ್ರ, ದಿಗಂತ್ ಹಾಗೂ ನಾಗ ಕಿರಣ್ ಒಟ್ಟಿಗೆ ನಟಿಸುತ್ತಿರುವ 'ಮಸ್ತ್ ಮಜಾ ಮಾಡಿ'!'ಚಿತ್ರವನ್ನು ಕನ್ನಡ ಚಿತ್ರೋದ್ಯಮದ ಪ್ರಸಿದ್ಧ ನಿರ್ಮಾಪಕಿ ಸೌಂದರ್ಯ ಜಗದೀಶ್ ನಿರ್ಮಿಸುತ್ತಿದ್ದಾರೆ. ಶಿವರಾಜ್ ಕುಮಾರ್ ನಟನೆಯ 'ನಂದ' ಚಿತ್ರದ ನಿರ್ದೇಶಕ ಅನಂತನಾಗ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.
ಹಲವು ನಾಯಕ ನಟರನ್ನು ಒಟ್ಟಿಗೆ ಹಾಕಿಕೊಂಡು ಸಿನಿಮಾ ಮಾಡುವುದು ಕನ್ನಡ ಚಿತ್ರರಂಗದಲ್ಲೇನು ಹೊಸದಲ್ಲ. ಈಗಾಗಲೇ ಈ ರೀತಿಯ ಪ್ರಯೋಗಗಳು ಸಾಕಷ್ಟು ನಡೆದಿವೆ. ಸದ್ದಿಲ್ಲದಂತೆ ಇದೇ ರೀತಿಯ ಮತ್ತೊಂದು ಪ್ರಯೋಗ ಜೂ.25ರಂದು ನಡೆದಿದೆ.
ಬೆಂಗಳೂರು, ಊಟಿ ಹಾಗೂ ವಿದೇಶಗಳ ಸುಂದರ ತಾಣಗಳಲ್ಲಿ 80 ದಿನಗಳ ಕಾಲ ಚಿತ್ರೀಕರಣ ನಡೆಯಲಿದೆ. ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವ ಸೌಂದರ್ಯ ಜಗದೀಶ್ ಅವರಿಗೆ ಕನ್ನಡ ಚಿತ್ರೋದ್ಯಮದೊಂದಿಗೆ 10 ವರ್ಷಗಳ ನಂಟಿದೆ. ಚಿತ್ರದ ತಾರಾಗಣದಲ್ಲಿ ಹಾಸ್ಯ ನಟ ಕೋಮಲ್, ಜೆನ್ನಿಫರ್ ಕೊತ್ವಾಲ್, ರಂಗಾಯಣ ರಘು, ಸಾಧು ಕೋಕಿಲ, ಸಿಹಿಕಹಿ ಚಂದ್ರು ಇದ್ದಾರೆ. ಹೊಸಬರಾದ ಬಾಲಾಜಿ ಸಂಗೀತ ನೀಡಲಿರುವ ಈ ಚಿತ್ರಕ್ಕೆ ಎಂ.ಆರ್.ಸೀನು ಛಾಯಾಗ್ರಹ ಮಾಡಲಿದ್ದಾರೆ. ಸಂಭಾಷಣೆ ರಾಮ್ನಾರಾಯಣ್, ಸಾಹಸ ರವಿ ವರ್ಮಾ ಅವರದು.
ಇಷ್ಟಕ್ಕೂ ಈ ಚಿತ್ರದ ಹೆಸರಿನ ಬಗ್ಗೆ ಸುಳಿವು ಸಿಕ್ಕಿಲ್ಲ. ಒಂದು ಮೂಲದ ಪ್ರಕಾರ ಈ ಚಿತ್ರಕ್ಕೆ 'ಮಸ್ತ್ ಮಜಾ ಮಾಡಿ' ಎಂದು ನಾಮಕರಣ ಮಾಡಲಾಗಿದೆ ಎನ್ನಲಾಗಿದೆ. ಒಬ್ಬನೇ ನಾಯಕ ನಟನಾಗಿ ನಟಿಸಿದ ಚಿತ್ರಗಳು ತೋಪಾಗುತ್ತಿದ್ದರೆ ಈ ರೀತಿಯ ಪ್ರಯೋಗಗಳು ಆಗಾಗ ಸಫಲವಾಗಿ ಬಹಳಷ್ಟು ಸಲ ವಿಫಲವಾಗಿವೆ. ಆದರೆ ಮಸ್ತ್ ಮಜಾ ಮಾಡಿ ಹಾಗಾಗದಿರಲಿ ಎಂಬುದು ಎಲ್ಲರ ಹಾರೈಕೆ.
(ದಟ್ಸ್ಕನ್ನಡ ಸಿನಿವಾರ್ತೆ)


Click it and Unblock the Notifications