ಪ್ರಭು, ನಯನಾ ಮದುವೆಗೆ ಪ್ರಕಾಶ್ ಪೌರೋಹಿತ್ಯ

ಈಗ ಬಂದಿರುವ ಸುದ್ದಿಯೇನೆಂದರೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡಿರುವ ಮಲಯಾಳಿ ಕ್ರಿಶ್ಚಿಯನ್ ಬ್ಯೂಟಿ ನಯನತಾರಾ ಮತ್ತು ಕನ್ನಡದ ಸುಂದರ ಪ್ರಭುದೇವ (ನೃತ್ಯ ನರ್ದೇಶಕ ಮೂಗೂರ್ ಸುಂದರ್ ಅವರ ಮಗ) ಅವರ ಪ್ರಣಯಕ್ಕೆ ಮೀಡಿಯೇಟರ್ ಆಗಿದ್ದ ಮತ್ತೊಬ್ಬ ಕನ್ನಡಿಗ ಪ್ರಕಾಶ್ ರಾಜ್ ಅವರು ಮದುವೆ ಮತ್ತು ಆರತಕ್ಷತೆಯ ಉಸ್ತುವಾರಿಯನ್ನೂ ವಹಿಸಿದ್ದಾರೆ. ಪ್ರಕಾಶ್ ಯೋಜನೆಯಡಿಯಂತೆ ಮದುವೆ ಜರುಗಲಿದೆ.
ಇದು ಕಾಕತಾಳೀಯವೊ, ಏನು ಕಥೆಯೊ ಪ್ರಭುದೇವ ಮತ್ತು ಪ್ರಕಾಶ್ ರಾಜ್ ಅವರ ತಾರಾ ಜೀವನದಲ್ಲಿ ಇಬ್ಬರೂ ಸಮಾನ ಸುಖಿಗಳು ಮತ್ತು ಸಮಾನ ದುಃಖಿಗಳು. ಇಬ್ಬರೂ ಕನ್ನಡದವರು, ಇಬ್ಬರ ಹೆಸರು ಕೂಡ 'ಪ್ರ' ಅಕ್ಷರದಿಂದ ಶುರು, ಇಬ್ಬರೂ ಮೊದಲನೇ ವಿವಾಹ ಮುರಿದುಕೊಂಡಿದ್ದಾರೆ, ಇಬ್ಬರೂ ಎರಡನೇ ಬಾರಿ ತಾಳಿ ಕಟ್ಟಿದ್ದಾರೆ, ಇಬ್ಬರೂ ಒಬ್ಬೊಬ್ಬ ಮಗನನ್ನು ಕಳೆದುಕೊಂಡಿದ್ದಾರೆ, ಇಬ್ಬರೂ ತಮಿಳು ಚಿತ್ರರಂಗದಲ್ಲಿ ನೆಲೆ ಕಂಡವರು.
ಈ ಎಲ್ಲ ಅಂಶಗಳೇ ಇಬ್ಬರನ್ನೂ ಒಂದಾಗಿಸಿವೆಯಾ? ಅಥವಾ ವಿಧಿ ಬಯಸಿದ್ದೂ ಇದನ್ನೇನಾ? ಅಂತೂ ಮದುವೆ ವಿಷಯದಲ್ಲಿ ಕೂಡ ಇಬ್ಬರೂ ಸಮಾನಮನಸ್ಕರಾಗಿದ್ದಾರೆ. ಪ್ರಕಾಶ್ ಯಾವತ್ತೂ ಪ್ರಭುದೇವ ಮತ್ತು ನಯನತಾರಾ ಪ್ರೇಮ ಪ್ರಕರಣವನ್ನು ಬೆಂಬಲಿಸುತ್ತಾ ಬಂದವರು. ಇಬ್ಬರ ಲವ್ ಚಿಗುರೊಡೆಯುವ ಸಮಯದಲ್ಲಿ ಅವರು ಪ್ರಕಾಶ್ ರಾಜ್ ಮನೆಯಲ್ಲಿಯೇ ಠಿಕಾಣಿ ಹೂಡಿದ್ದರು. ಇಬ್ಬರ ಜೀವನದಲ್ಲಿ ವಿವಾದ, ವಿಷಾದಗಳೇನೇ ಇರಲಿ, ಇಬ್ಬರೂ ಮದುವೆಯ ನಂತರ ಸುಖವಾಗಿರಲಿ.


Click it and Unblock the Notifications











