ಅರಮನೆ ಮೈದಾನದಲ್ಲಿ ಟುವ್ವಿ ಟುವ್ವಿ 'ಶಿವ'ರಾತ್ರಿ
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ನಿಜವಾಗಿಯೂ ಬುಧವಾರ(ಮಾ.2) ರಾತ್ರಿ 'ಶಿವ'ರಾತ್ರಿ. 'ಶಿವ' ತಾಂಡವ ಕಂಡ ಅಭಿಮಾನಿ ದೇವರುಗಳು 'ಓಂ' ನಮಃ 'ಶಿವಾ'ಯ ಎಂದು ಮನಸಾರೆ ಜಪಿಸಿದರು. ತಮ್ಮ ನೆಚ್ಚಿನ ನಟ ಟುವ್ವಿ ಟುವ್ವಿ ಎಂದು ಬೆಳ್ಳಿಪರದೆಗೆ ಅಡಿಯಿಟ್ಟು 25 ವಸಂತಗಳಾಗುತ್ತಿರುವ ಸಂಭ್ರಮ , ಸಡಗರಗಳು ಅಭಿಮಾನಿಗಳ ಪಾಲಿಗೆ ಮರೆಯಲಾಗದ ಅನುಭವ.
'ಆನಂದ್' ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ 'ಶಿವ'ಣ್ಣ ಟುವ್ವಿ ಟುವ್ವಿ ಎಂದು ವೇದಿಕೆ ಆಗಮಿಸುತ್ತಿದ್ದರೆ ಪ್ರೇಕ್ಷಕರು ಹುಚ್ಚೆದ್ದು ಕುಣಿದು ಸಂಭ್ರಮಿಸಿದರು. ಶಿಳ್ಳೆ, ಕೇಕೆಗಳ ಮೂಲಕ ತಮ್ಮ ನೆಚ್ಚಿನ ನಟನಿಗೆ ಸ್ವಾಗತ ಕೋರಿದರು. 25 ವರ್ಷಳ ಹಿಂದೆ ತೆರೆಕಂಡಿದ್ದ 'ಆನಂದ್' ಚಿತ್ರದ ಗೆಟಪ್ಪಿನಲ್ಲಿ ಶಿವಣ್ಣ ವೇದಿಕೆ ಬಂದದ್ದು ವಿಶೇಷವಾಗಿತ್ತು.
'ಅಂಡಮಾನ್' ಚಿತ್ರದ ಗೀತೆ "ಡ್ಯಾಡಿ ಮೈ ಲವ್ ಲೀ ಡ್ಯಾಡಿ.." ಎಂಬ ಗೀತೆಗೆ ತಮ್ಮ ಪುತ್ರಿ ನಿವೇದಿತಾ ಜೊತೆ ಹೆಜ್ಜೆ ಪ್ರೇಕ್ಷಕರನ್ನು ಮತ್ತಷ್ಟು ಗೆಲುವಾಗಿಸಿದರು. ಈ ಕಾರ್ಯಕ್ರಮ ಕೇವಲ ಶಿವಣ್ಣನ ಅಭಿಮಾನಿಗಳಿಗಷ್ಟೇ ಸೀಮಿತವಾಗಿರಲಿಲ್ಲ. ಕನ್ನಡ ಚಿತ್ರರಂಗದ ಹಲವಾರು ತಾರೆಗಳು ಶಿವಣ್ಣನ ಜೊತೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಪುನೀತ್ ರಾಜ್ ಕುಮಾರ್, ಶಶಿಕುಮಾರ್, ಮಾಲಾಶ್ರೀ, ರಮೇಶ್, ಶ್ರುತಿ, ಬಾಲರಾಜ್, ಗುರುದತ್, ಅನುಪ್ರಭಾಕರ್ ರಂಜಿಸಿದರು.
ಇದೇ ವೇದಿಕೆಯಲ್ಲಿ ಶಿವರಾಜ್ ಕುಮಾರ್ ಜೊತೆ ಚಿತ್ರರಂಗಕ್ಕೆ ಅಡಿಯಿಟ್ಟಿದ್ದ ಕ್ರೇಜಿಸ್ಟಾರ್ ರವಿಚಂದ್ರನ್, ರಮೇಶ್ ಅವರನ್ನೂ ಸನ್ಮಾನಿಸಲಾಯಿತು. ಅಂಬರೀಷ್, ದರ್ಶನ್, ಪೂಜಾಗಾಂಧಿ, ಶ್ರೀನಗರ ಕಿಟ್ಟಿ, ಸೃಜನ್ ಲೋಕೇಶ್, ವಿಜಯ್, ಪ್ರೇಮ್, ಮುರಳಿ, ವಿಜಯ ರಾಘವೇಂದ್ರ ಮುಂತಾದರು ಪ್ರೇಕ್ಷಕರಿಗೆ ರಸದೌತಣ ನೀಡಿದರು.
ಸಮಾರಂಭಕ್ಕೆ ಪಾರ್ವತಮ್ಮ ರಾಜ್ ಕುಮಾರ್, ವರನಟ ಡಾ.ರಾಜ್ ಕುಮಾರ್ ಅವರ ತಂಗಿ ನಾಗಮ್ಮ ,ಶಿವರಾಜ್ ಕುಮಾರ್ ಅವರ ಮಾವ ಹಾಗೂ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ, ರಾಘವೇಂದ್ರ ರಾಜ್ ಕುಮಾರ್, ಗೃಹ ಸಚಿವ ಆರ್ ಅಶೋಕ್, ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ ಉಪಸ್ಥಿತರಿದ್ದರು.


Click it and Unblock the Notifications











