ಬೆಂಗಳೂರಿನಲ್ಲಿ ಶಿವಣ್ಣನ 'ತಮಸ್ಸು'
ಇದೇ ಮೊದಲ ಬಾರಿಗೆ ಆಕ್ಷನ್, ಕಟ್ ಹೇಳುತ್ತಿರುವ ಅಗ್ನಿ ಶ್ರೀಧರ್ ಅವರ 'ತಮಸ್ಸು' ಚಿತ್ರಕ್ಕೆ ಉದ್ಯಾನ ನಗರಿ ಬೆಂಗಳೂರು ಹಾಗೂ ಅದರ ಸುತ್ತಲ್ಲಿನ ಪ್ರದೇಶಗಳಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಈ ಚಿತ್ರವನ್ನು ಮೇಘ ಮೂವೀಸ್ ಲಾಂಛನದಲ್ಲಿ ಸೈಯದ್ ಅಮಾನ್ ಹಾಗೂ ರವೀಂದ್ರ ನಿರ್ಮಿಸುತ್ತಿದ್ದಾರೆ.
ತಮ್ಮ ಸಂಸ್ಥೆಯ ಮೂಲಕ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ನಿರ್ಮಾಪಕರು ತಮ್ಮ ಸಂಸ್ಥೆಯ ನಾಲ್ಕನೇ ಕಾಣಿಕೆಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 'ಆ ದಿನಗಳು' ಎಂಬ ಯಶಸ್ವಿ ಚಿತ್ರ ಸೇರಿದಂತೆ ಕೆಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದ ಪತ್ರಕರ್ತ ಅಗ್ನಿಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಕಥೆಗಾರರಾಗಿರುವ ಅವರು ಚಿತ್ರಕಥೆ, ಸಂಭಾಷಣೆಯನ್ನೂ ಬರೆದಿದ್ದಾರೆ.
ವಿಶಿಷ್ಟ ಕಥಾ ಸಾರಾಂಶವುಳ್ಳ 'ತಮಸ್ಸು' ಚಿತ್ರದಲ್ಲಿ ಶಿವರಾಜಕುಮಾರ್ ನಾಯಕರಾಗಿ ನಟಿಸುತ್ತಿದ್ದು, ಪದ್ಮಪ್ರಿಯ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ನಾಜಿರ್, ಹರ್ಷಿಕಾ ಪೂರ್ಣಚ್ಛ, ಆಸೀಫ್, ಸುಧಾ ಬೆಳವಾಡಿ, ಸತ್ಯ ಮುಂತಾದವರ ತಾರಾಬಳಗವೂ ಈ ಚಿತ್ರಕ್ಕಿದೆ.
ಸಂದೀಪ್ ಚೌಟರ ಸಂಗೀತವಿರುವ ಈ ಚಿತ್ರಕ್ಕೆ ಸುಂದರನಾಥ ಸುವರ್ಣ ಅವರ ಛಾಯಾಗ್ರಹಣವಿದೆ. ನಾಗೇಂದ್ರ ಅರಸ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ, ಶಶಿಧರ್ ಅಡಪ ಕಲಾ ನಿರ್ದೇಶನ ಹಾಗೂ ಮಧುಗಿರಿ ಪ್ರಕಾಶ್ ಅವರ ನಿರ್ಮಾಣ ನಿರ್ವಹಣೆ 'ತಮಸ್ಸು ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











