ರಮ್ಯಾ ಜತೆ ಸುದೀಪರ ಮುಸ್ಸಂಜೆಯ ಮಾತು
ಕಿಚ್ಚ ಸುದೀಪ್ ಹಾಗೂ ಲಕ್ಕಿ ಸ್ಟಾರ್ ರಮ್ಯಾ ಮತ್ತೆ ಒಟ್ಟಿಗೆ ನಟಿಸುತ್ತಿರುವುದು ಸಂತಸದ ವಿಷಯ. 'ಮುಸ್ಸಂಜೆ ಮಾತು' ಎಂಬ ಸೊಗಸಾದ ಹೆಸರಿನ ಚಿತ್ರದಲ್ಲಿ ಈ ಇಬ್ಬರು ಪ್ರತಿಭಾವಂತರು ಗ್ಲಾಮರ್ ಇಲ್ಲದೆ, ನಟನೆಯಲ್ಲೇ ತಮ್ಮ ಅಭಿನಯದ ಕೈ ಚಳಕ ತೋರಿಸಹೊರಟಿದ್ದಾರೆ. ಈ ಚಿತ್ರವನ್ನು ಇದೀಗ ತಾನೆ ಗಾಂಧಿನಗರಕ್ಕೆ ಕಾಲಿಟ್ಟಿರುವ ಮಹೇಶ್ ಅವರು ನಿರ್ದೇಶಿಸುತ್ತಿದ್ದಾರೆ. ನಿರ್ಮಾಪಕರಾದ ಸುರೇಶ್ ಜೈನ್ ಹಾಗೂ ಸಂಗೀತ ನಿರ್ದೇಶಕ ಶ್ರೀಧರ್ ಗೂ ಇದು ಹೊಸ ಅನುಭವ.
ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಹರಿದು ಬಂದ ಮಾತುಗಳು:
ಸುದೀಪ್ : ಹಿರಿಯ ಛಾಯಾಗ್ರಾಹಕ ಸುಂದರನಾಥ್ ಸುವರ್ಣ ಅವರ ಜತೆ ನಿರ್ದೇಶಕ ಮಹೇಶ್ ಅವರು ಬಂದು ನನಗೆ ಮೊದಲಿಗೆ ಕಥೆ ಹೇಳಿದಾಗ, ಇಲ್ಲ ಎನ್ನಲು ಕಾರಣಗಳೇ ಇರಲಿಲ್ಲ. ಸ್ಕ್ರೀಪ್ಟ್ ಅಷ್ಟು ಚೆನ್ನಾಗಿತ್ತು. ತಕ್ಷಣ ಒಪ್ಪಿಬಿಟ್ಟೆ,. ಈ ಪ್ರಾಜೆಕ್ಟ್ ಗೆ ರಮ್ಯಾ ಹಾಗೂ ಅನು ಪ್ರಭಾಕರ್ ಅವರನ್ನು ಸೂಚಿಸಿದೆ.ಅದು ಬಿಟ್ಟರೆ ಬಾಕಿಯಂತೆ ನಾನು ನಿರ್ದೇಶಕರು ಬಯಸಿದಂತೆ ಅಭಿನಯಿಸುತ್ತಾ ನಡೆದೆ. ಒಟ್ಟಾರೆ ಚಿತ್ರ ಚೆನ್ನಾಗಿ ಬಂದಿದೆ. ವೈವಿಧ್ಯವಾದ ಪಾತ್ರ ಸಿಕ್ಕಿದೆ ಎಂದು ಸುದೀಪ್ ತೃಪ್ತಿ ವ್ಯಕ್ತಪಡಿಸಿದರು.
ರಮ್ಯಾ: ಸುದೀಪ್ ಹೇಳಿದ ಮಾತು ಸತ್ಯ. ಸ್ಕ್ರೀಪ್ಟ್ ಬಗ್ಗೆ ಮಹೇಶ್ ಅವರು ತುಂಬಾನೇ ಹೋಂ ವರ್ಕ್ ಮಾಡಿದ್ದಾರೆ.ಸುದೀಪ್ ಜತೆ ಸ್ವಲ್ಪ ವೃತ್ತಿಪರತೆ ಬಗ್ಗೆ ಜಗಳ ಆಡಿದ್ದು ನಿಜ. ಆದರೆ ನಮ್ಮಮ್ಮ ಕ್ರಿಯಟಿವಿಟಿ ಬೆಳೆಸೋಕೆ ಸಹಾಯವಾಯ್ತು ಅಷ್ಟೆ. ಈ ಚಿತ್ರ ಮಾಡೋಕೆ ನಂಗೆ ಸುದೀಪ್ ಸೂಚಿಸಿದ್ದು ನಿಜಕ್ಕೂ ಒಳ್ಳೆಯದಾಯ್ತು. ನಾನು ಅದಕ್ಕೆ ಥ್ಯಾಂಕ್ಸ್ ಹೇಳ್ತೀನಿ. ಈ ಚಿತ್ರಕ್ಕೆ ನನ್ನ ಡೈಲಾಗಿಗೆ ನನ್ನ ವಾಯ್ಸ್ ಡಬ್ ಮಾಡಿದ್ದೀನಿ. ಚಿತ್ರ ನೋಡಿ ಅಂದರು.
ಮಹೇಶ್: ಚಿತ್ರರಂಗಕ್ಕೆ ಹೊಸಬನಾದ ನಾನು ಸ್ಕೀಪ್ಟ್ ಹಿಡಿದು ಸುರೇಶ್ ಜೈನ್ ಅವರ ಬಳಿಗೆ ಹೋದಾಗಿನಿಂದ ಸುದೀಪ್ ಸಾರ್ ಅವರನ್ನು ಭೇಟಿ ಮಾಡಿದ್ದು ಎಲ್ಲಾ ಸರಾಗವಾಗಿದ್ದಕ್ಕೆ ಖುಷಿಯಾಗಿದ್ದೇನೆ. ಇನ್ನೆರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಧ್ವನಿಸುರಳಿಯನ್ನು ಈವಾರ ಬಿಡುಗಡೆ ಮಾಡಲಿದ್ದೇವೆ. ಶ್ರೀಧರ್ ಅವರು ಮೇಲೋಡಿಸ್ ಸಾಂಗ್ಸ್ ಕೊಟ್ಟಿದ್ದಾರೆ. ಸುದೀಪ್ ಇದರಲ್ಲಿ ರೇಡಿಯೋ ಆರ್ ಜೆ ಪಾತ್ರದಲ್ಲಿ ಕಾಣಿಸಲಿದ್ದಾರೆ. ಚಿತ್ರ ಚೆನ್ನಾಗಿ ಮೂಡಿ ಬಂದಿದೆಎಂದರು.
ತುಣುಕು: ರಾಮಗೋಪಾಲ ವರ್ಮಾ ಅವರ ಚಿತ್ರದಿಂದ ಸ್ವಲ್ಪ ಬ್ರೇಕ್ ತಗೊಂಡು, ಮುಂಬಯಿಯಿಂದ ಹಾರಿ ಗೂಳಿ ಚಿತ್ರದ ಪತ್ರಿಕಾಗೋಷ್ಠಿಗೆಂದು ಬಂದ ಸುದೀಪ್ ಬೇಸ್ತು ಬಿದ್ದರಂತೆ. 'ಗೂಳಿ ನಿರ್ಮಾಪಕ ರಾಮು, ನಿರ್ದೇಶಕ ಸತ್ಯಾ ಇಬ್ಬರೂ ಸಿಗದಂತೆ ಮಾಯವಾಗಿದ್ದು ಯಾಕೆ ಎಂದು ತಿಳಿಯಲಿಲ್ಲ. ಚಿತ್ರ ಮಾಡಿಯಾದ ಮೇಲೇ ಹೀರೋ ಯಾಕೆ ಬೇಕು ಅಂತಾ ಕಾಣುತ್ತೆ. ಪ್ರೆಸ್ ಮೀಟ್ ಇಲ್ಲಾ ಅಂತಾ ಇಬ್ಬರೂ ಹೇಳಲಿಲ್ಲ ಮಾತಿಗೂ ಸಿಗುತ್ತಿಲ್ಲ' ಎಂದು ಬೇಸರ ವ್ಯಕ್ತಪಡಿಸಿದರು. ಆದರೆ ಸತ್ಯಾ ಅವರು ಇಲ್ಲಾ ನನಗೆ ಮುಂದಿನ ಚಿತ್ರದ ಫೋಟೋ ಸೆಶನ್ ಇತ್ತು ಅದರಲ್ಲಿ ಬ್ಯುಸಿಯಾಗಿದ್ದೆ ಅಂದಿದ್ದಾರೆ. ಕೋಟಿ ನಿರ್ಮಾಪಕ ರಾಮು ಮಾತಿಗೆ ಸಿಕ್ಕಿಲ್ಲ. ಕಡೆಗೆ ಸುದೀಪ್ ಸಮಯದ ಸದುಪಯೋಗ ಮಾಡಿಕೊಳ್ಳಲು 'ಮುಸ್ಸಂಜೆ ಮಾತು' ಚಿತ್ರದ ಪ್ರೆಸ್ ಮೀಟ್ ಕರೆದರು ಎನ್ನುವ ಸುದ್ದಿ ಹರಡಿದೆ.
(ದಟ್ಸ್ ಕನ್ನಡವಾರ್ತೆ)


Click it and Unblock the Notifications