ಕನ್ನಡದ ನಡುವೆ ಇಂಗ್ಲಿಷ್ ಬೆರೆಸೊಲ್ಲ’! :ನೀತು

ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರಿಗೆ ನಟಿ ನೀತು ನೀಡಿದ್ದ ಮಾತಿದು. ಹೇಳಿಕೇಳಿ ಬರಗೂರು ಕನ್ನಡ ಮೇಷ್ಟ್ರು, ಲೇಖಕರು. ಮಿಗಿಲಾಗಿ ಹೋರಾಟಗಾರರು. ನೀತು ಮಾತುಗಳಲ್ಲಿ ಕನ್ನಡಕ್ಕಿಂಥ ಇಂಗ್ಲಿಷ್ ಶಬ್ದಗಳೇ ಹೆಚ್ಚಾಗಿರುವುದು ಮೇಷ್ಟ್ರಿಗೆ ಸಹಜವಾಗಿಯೇ ಇರುಸುಮುರುಸು ಉಂಟುಮಾಡಿದೆ. ಆ ಕಾರಣದಿಂದಾಗಿ ಅವರು ಸೆಟ್ನಲ್ಲಿ ಪ್ರೀತಿಯಿಂದ ಗದರಿಕೊಂಡಿದ್ದಾರೆ. ನೀತು ಮಾತು ಕೊಟ್ಟಿದ್ದಾರೆ.
ಸೆಟ್ನಲ್ಲಿ ಎಷ್ಟರಮಟ್ಟಿಗೆ ನೀತು ತಮ್ಮ ಮಾತಿಗೆ ಕಟ್ಟುಬಿದ್ದಿದ್ದರೋ ಗೊತ್ತಿಲ್ಲ. ಸುದ್ದಿಗೋಷ್ಠಿಯಲ್ಲಂತೂ ಕಲಬೆರಕೆ ಕನ್ನಡ ಮಾತನಾಡುತ್ತಿದ್ದರು. ಮೇಷ್ಟ್ರು ಹುಸಿಮುನಿಸು ತೋರಿದಾಗ ಹುಳಿಮುಖ ಮಾಡಿಕೊಂಡರು. 'ಮತ್ತೂ ಮಾತನಾಡಿದರೆ ಇನ್ನಷ್ಟು ತಪ್ಪು ಮಾಡ್ತೇನೆ" ಎಂದು ತೆಪ್ಪಗೆ ಕೂತರು.
'ಗಾಳಿಪಟ" ಚಿತ್ರದಲ್ಲಿ ನೀತು ಮಾಡಿದ್ದ ಬಜಾರಿ ಪಾತ್ರ ಅಪಾರ ಜನಪ್ರಿಯತೆ ಗಳಿಸಿತ್ತು. ಥೂ ಥೂ ಎಂದು ನೀತು ಚಿತ್ರದಲ್ಲಿ ಉಗಿಯುತ್ತಿದ್ದರೆ ಆ ಉಗುಳನ್ನು ಆಸ್ವಾದಿಸಿದವರ ಸಂಖ್ಯೆ ದೊಡ್ಡದು. ಈ ಚಿತ್ರದ ನಂತರ ಅವರನ್ನು ಹುಡುಕಿಕೊಂಡು ಬಂದದ್ದೆಲ್ಲ ಬಜಾರಿ ಪಾತ್ರಗಳೇ. 'ಏಕತಾನತೆಯನ್ನು ಎಷ್ಟೂಂತ ಸಹಿಸೋದು. ಅನೇಕ ಪಾತ್ರಗಳನ್ನು ನಿರಾಕರಿಸಿದೆ" ಎನ್ನುವುದು ಪಾತ್ರಗಳ ಆಯ್ಕೆಯಲ್ಲಿ ನೀತು ಅವರಿಗಿರುವ ಬದ್ಧತೆಗೆ ಸಾಕ್ಷಿಯಂತಿದೆ.
ಮೋಹನ್ ನಿರ್ದೇಶನದ 'ವೆಂಕಟ ಇನ್ ಸಂಕಟ"ದ ಮುಖ್ಯಪಾತ್ರವೊಂದರಲ್ಲಿ ನಟಿಸಿದ್ದಾರೆ. ಮಲೆಯಾಳಿ ಹುಡುಗಿಯ ಪಾತ್ರವದು. ನೀತು ಅಭಿನಯ ನೋಡಿ ನಿರ್ದೇಶಕ ಮೋಹನ್ ಮೂಗಿನ ಮೇಲೆ ಬೆರಳಿಟ್ಟಿದ್ದು ಈಗಾಗಲೇ ವರದಿಯಾಗಿರುವ ಸುದ್ದಿ.
ಇದನ್ನೂ ಓದಿ: ಉಗ್ರಗಾಮಿಗೆ ಗೋಡ್ಖಿಂಡಿ ಏಕವ್ಯಕ್ತಿ ಸಂಗೀತ


Click it and Unblock the Notifications