ಶಕುನಿ ಅವತಾರ ಕಳಚಿ ‘ಮಲ್ಲ’ನಾದ ರವಿಚಂದ್ರನ್
*ದಟ್ಸ್ಕನ್ನಡ ಬ್ಯೂರೋ
‘ರವಿಚಂದ್ರನ್ ಸೋತಿದ್ದಾರಾ?’
‘ಮೇ. 30ಕ್ಕೆ ಬರ್ತೀನಿ. ಆಗ ಥಿಯೇಟರು ಹೌಸ್ಫುಲ್ಲಾಗೋದು ಗ್ಯಾರಂಟಿ. ನಾನೇನು ಅಂತ ನೋಡ್ತಿರಿ’- ಏಕಾಂಗಿ ಸಿನಿಮಾ ಬಗ್ಗೆ ಇಟ್ಟುಕೊಂಡಿದ್ದ ಭರಪೂರ ನಂಬಿಕೆ ಹುಸಿಯಾದ ನಂತರವೂ ಧೃತಿಗೆಡದ ರವಿಚಂದ್ರನ್ ಅವರ ಆತ್ಮವಿಶ್ವಾಸಕ್ಕೆ ಈ ಮಾತು ಕನ್ನಡಿ ಹಿಡಿಯುತ್ತದೆ. ಅಂದಹಾಗೆ, ಶಕುನಿ ವಗೈರೆ ಪ್ರಾಜೆಕ್ಟುಗಳನ್ನು ಪಕ್ಕಕ್ಕಿರಿಸಿ ರವಿ ಈಗ ‘ಮಲ್ಲ’ನಾಗಲು ಹೊರಟಿದ್ದಾರೆ.
ರವೀನಾ ಟೆಂಡನ್ ಡೇಟ್ಸಿನಿಂದ ನೆನೆಗುದಿಗೆ ಬಿದ್ದಿರುವ ‘ಶಕುನಿ’ಯಲ್ಲಿ ನಿರ್ಮಾಪಕ ರಾಮು ಕಳಕೊಂಡಿದ್ದೆಲ್ಲವನ್ನೂ ತುಂಬಿಕೊಡುವ ಅಚಲ ನಂಬಿಕೆ ರವಿಚಂದ್ರನ್ ಅವರದ್ದು.
‘ಮಲ್ಲ ’ ಚಿತ್ರದ ಮುಹೂರ್ತ ಸಮಾರಂಭದಲ್ಲಿ ರವಿ ಕಳೆಕಳೆಯಾಗಿ ನಗುತ್ತಿದ್ದರು. ಹೂವು ಪ್ರೀತಿಸುವ ನಾಯಕನ ಈ ಚಿತ್ರದ ಕತೆ ಖುದ್ದು ರವಿ ಹೊಸೆದಿದ್ದು. ಚಿತ್ರಕ್ಕೆ ಮೂರು ಹಾಡುಗಳನ್ನೂ ರವಿ ಬರೆದಿದ್ದಾರೆ. ಸಂಭಾಷಣೆ ಕೂಡ ಇವರದ್ದೇ. ಜತೆಗೆ ಭಾರವಿ ಅಕ್ಷರ ಸಹಾಯ ಮಾಡಿದ್ದಾರೆ.
‘ನನ್ನ ಹಳೆ ಶೈಲಿಯ ಚಿತ್ರದಂತೆ ಈ ಚಿತ್ರ ಕೂಡ ಇರುತ್ತೆ. ರವಿಚಂದ್ರನ್ ಚಿತ್ರ ಅಂದರೆ ಮುಗೀತು...ಗ್ರ್ಯಾಂಡ್ ಆಗಿರಲೇಬೇಕು. ಇದನ್ನು ಅಪ್ಪಿತಪ್ಪಿ ಕೂಡ ಮರೆಯದೆ ಚಿತ್ರ ಮಾಡುತ್ತೇವೆ. ತೀರ್ಥಹಳ್ಳಿಯ ಕವಿಶೈಲದಲ್ಲಿ ಶೂಟ್ ಮಾಡಬೇಕು ಅಂದುಕೊಂಡಿದ್ದೆವು. ಅಲ್ಲಿನ ಕುವೆಂಪು ಮನೆಯಲ್ಲಿ ವಿಲನ್ ಜತೆ ಫೈಟ್ ಮಾಡಿದರೆ, ಜನರ ಭಾವನೆಗೆ ತೊಂದರೆಯಾಗಬಹುದು ಅನ್ನಿಸಿ, ಸ್ಪಾಟ್ ಬದಲಾಯಿಸಿದೆವು. ಸಕಲೇಶಪುರದಲ್ಲಿ ಶೂಟಿಂಗ್ ಮಾಡುತ್ತೇವೆ. ಮೂವತ್ತೆೈದೇ ದಿನದಲ್ಲಿ ಶೂಟಿಂಗ್ ಮುಗಿಯುತ್ತೆ. ಮೇ 30ನೇ ತಾರೀಕು ನನ್ನ ಹುಟ್ಟುಹಬ್ಬದ ದಿನ ಸಿನಿಮಾ ರಿಲೀಸ್ ಆಗತ್ತೆ’ ರವಿಚಂದ್ರನ್ ಸಿನಿಮಾ ಖದರಿನಲ್ಲೇ ಹೇಳಿದರು.
ಥಿಯೇಟರಿಗೆ ಬುಕ್ ಮಾಡಿದ್ದೀರಾ, ನೀವೂ ಕ್ಯೂ ನಲ್ಲಿದ್ದೀರಾ ಎಂಬಿತ್ಯಾದಿ ಪ್ರಶ್ನೆಗಳಿಗೆ ನಗುನಗುತ್ತಲೇ ರವಿ ಉತ್ತರಿಸಿದ್ದು ಹೀಗೆ- ‘ಕ್ಯೂ ನಿಲ್ಲುವವರು ಕ್ಯೂ ನಿಲ್ಲುತ್ತಾರೆ. ನಿಮಗೆ ಯಾಕೆ, ಸಿನಿಮಾ ಮೇ 30ಕ್ಕೆ ಗ್ಯಾರಂಟಿ ರಿಲೀಸಾಗತ್ತೆ.’
‘ಎಚ್ಟುಓ’ ಫೇಮ್ನ ಪ್ರಿಯಾಂಕ ನಾಯಕಿಯರ ಪೈಕಿ ಮೊದಲನೆಯಾಕೆ. ಪ್ರೇಮಾ ಡೇಟ್ಸ್ ಕೂಡ ಚಿತ್ರಕ್ಕೆ ಫಿನಲೈಸ್ ಆಗುವುದರಲ್ಲಿದೆ. ಬಾಲಿವುಡ್ ನಟಿ ಪ್ರೀತಿ ರಿkುಂಟಾ ಅವರನ್ನು ಕರೆಸುವ ಇರಾದೆಯನ್ನು ಆರ್ಥಿಕ ಕಾರಣಗಳಿಂದಾಗಿ ಕೈಬಿಡಲಾಗಿದೆ. ಇಬ್ಬರೂ ನಾಯಕಿಯರು ಅಂದಮೇಲೆ, ರವಿಚಂದ್ರನ್ ಡಬ್ಬಲ್ ಆ್ಯಕ್ಟಿಂಗಾ ಅಂತ ಪ್ರಶ್ನಿಸಿದರೆ, ಸಿನಿಮಾ ನೋಡಿ ಅಂತ ರವಿ ಬುಲಾವು ಕೊಟ್ಟರು.
‘ಏಕಾಂಗಿ’ ಗೆದ್ದೆ ಗೆಲ್ಲುತ್ತೆ ಅಂತ 5 ಕೋಟಿ ಸುರಿದು ಮಕಾಡೆ ಮಲಗಿದ್ದ ರವಿಯ ‘ಮಲ್ಲ’ನಾದರೂ ಗೆಲ್ಲಲಿ.
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications