ಈ ಬಾರಿ ಅವರ ಚಿತ್ರದ ಬಜೆಟ್ಟು ಚಿಕ್ಕದು ನಿರೀಕ್ಷೆ ದೊಡ್ಡದು !
ಜಯಶ್ರೀ ದೇವಿ ವಾಪಸ್ಸಾಗಿದ್ದಾರೆ!
ಯಾವ ದೇವರು ವರವ ಕೊಟ್ಟನೋ ಅವರು ಚಿತ್ರ ನಿರ್ಮಾಣವನ್ನೂ ಪ್ರಾರಂಭಿಸಿದ್ದಾರೆ. ಭಾರೀ ಬಜೆಟ್ಟಿನ ಶ್ರೀ ಮಂಜುನಾಥ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಕೈ ಕಚ್ಚಿದ ನಂತರ ಅಜ್ಞಾತವಾಸಕ್ಕೆ ಸರಿದಿದ್ದ ಜಯಶ್ರೀದೇವಿ ಮತ್ತೆ ಕಾಣಿಸಿಕೊಂಡಿರುವುದು ಈಗಲೇ. ಅನಾರೋಗ್ಯದ ದಾಳಿಗೂ ಅವರು ತುತ್ತಾಗಿದ್ದರು. ಈಗ ದೇವಿ ಹುಷಾರಾಗಿದ್ದಾರೆ. ಅದಕ್ಕೆ ಸಾಕ್ಷಿಯಾಗಿ ಹೊಸ ಚಿತ್ರದ ಚಿತ್ರೀಕರಣ ರಭಸದಿಂದ ಸಾಗುತ್ತಿದೆ. ಅಂದಹಾಗೆ, ದೇವಿ ಅವರ ಹೊಸಚಿತ್ರದ ಹೆಸರು-
'ದೇವರು ವರವನು ಕೊಟ್ರೆ"
ಫ್ರೆಂಡ್ಸ್ ಚಿತ್ರದ ಜನಪ್ರಿಯ ಗೀತೆಯಾಂದರ ಸಾಲನ್ನೇ ದೇವಿ ತಮ್ಮ ಚಿತ್ರಕ್ಕಿಟ್ಟಿದ್ದಾರೆ. 'ಫ್ರೆಂಡ್ಸ್" ಚಿತ್ರದ ಬಹುತೇಕ ಕಲಾವಿದರು ತಂತ್ರಜ್ಞರೇ ಈ ಚಿತ್ರದಲ್ಲೂ ಮುಂದುವರಿದಿದ್ದಾರೆ. ನಾಯಕಿ ಮಾತ್ರ ಬದಲು. ಋತಿಕಾ ಜಾಗದಲ್ಲಿ ತುಂಟಾಟದ ಚಿಟ್ಟೆ ಛಾಯಾಸಿಂಗ್. ಇತ್ತೀಚೆಗೆ ಕುರುಬರಹಳ್ಳಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಸರಳ ಪೂಜೆಯಾಂದಿಗೆ 'ದೇವರು ವರವನು ಕೊಟ್ರೆ" ಚಿತ್ರ ಸೆಟ್ಟೇರಿತು.
ಚಿತಚ್ರ, ಚಿಟ್ಟೆ, ಫ್ರೆಂಡ್ಸ್ಗಳಂತೆಯೇ 'ದೇವರು ವರವನು ಕೊಟ್ರೆ" ಚಿತ್ರದ ಕಥೆಯೂ ಯುವಕರ ಸುತ್ತಲೇ ಸುತ್ತುತ್ತದೆ. ಯುವಕರು ಯುವತಿಯ ಸುತ್ತ ಸುತ್ತುತ್ತಾರೆ. ಪ್ರೇಮ ಕಥೆಯಲ್ಲಿ ಹೊಸತನ ಇದೆಯೆನ್ನುತ್ತಾರೆ ದೇವಿ. ನಿರ್ದೇಶಕರು ಅದನ್ನು ಅನುಮೋದಿಸುತ್ತಾರೆ.
ನಾಯಕ ನಟರಾಗಿ ನಟರಾಜ್ ವಾಸು, ಆನಂದ್, ಶರಣ್, ಹರಿ, ಶ್ಯಾಂ ಚಿತ್ರದಲ್ಲಿದ್ದಾರೆ. ಉಳಿದಂತೆ ಸಂಕೇತ್ ಕಾಶಿ, ಬ್ಯಾಂಕ್ ಜನಾರ್ಧನ್, ಶಂಕರ್ಭಟ್ ತಾರಾಗಣದಲ್ಲಿದ್ದಾರೆ. ನಗರದ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಕಥೆ- ನಿರ್ದೇಶನ ಎಂ.ಡಿ.ಶ್ರೀಧರ್ ಅವರದು. ರಮೇಶ್ ಕೃಷ್ಣ ಸಂಗೀತ , ಬಿ.ಎ.ಮಧು ಸಂಭಾಷಣೆ ಚಿತ್ರಕ್ಕಿದೆ.


Click it and Unblock the Notifications