ನವರಸನಾಯಕ ಜಗ್ಗೇಶ್ ನಟನೆಯ ಮನ್ಮಥ ಇಂದು ತೆರೆಗೆ
ಆಡು ಮುಟ್ಟದ ಸೊಪ್ಪಿಲ್ಲ ಜಗ್ಗೇಶ್ ಮಾಡದ ಪಾತ್ರಗಳೇ ಇಲ್ಲ. ಇಮೇಜಿನ ಹಂಗನ್ನು ತೊರೆದು ಜಗ್ಗೇಶ ಆಯ್ದುಕೊಂಡಂಥ ಪಾತ್ರಗಳನ್ನು ಕನ್ನಡ ಚಿತ್ರರಂಗದಲ್ಲಿ ಬಹುಶಃ ಯಾರೂ ಆಯ್ದುಕೊಂಡಿರಲಾರರು. ಅಂಥ ಪಾತ್ರಗಳನ್ನು ಆಯ್ದುಕೊಳ್ಳುವ ಧೈರ್ಯವನ್ನೂ ಯಾರೂ ಮಾಡಲಾರರು.
ನವರಸನಾಯಕನೆಂಬ ಪ್ರೀತಿಯ ಬಿರುದಿಗೆ ಅನ್ವರ್ಥಕವಾಗುವಂತೆ ಎಲ್ಲ ಬಗೆಯ ಪಾತ್ರಗಳನ್ನು ಮಾಡುತ್ತಲೇ ಬಂದಿದ್ದಾರೆ. ಶುಕ್ರವಾರ ಬಿಡುಗಡೆಯಾಗುತ್ತಿರುವ ಅವರ ನೂರಾಒಂದನೆಯ ಚಿತ್ರ ನವರಸಗಳನ್ನೊಳಗೊಂಡಂಥ ಮನ್ಮಥ ಬಹುನಿರೀಕ್ಷೆಯ ಚಿತ್ರ. ಈ ಚಿತ್ರದಲ್ಲಿ ಮೊಟ್ಟಮೊದಲಬಾರಿಗೆ ಜಗ್ಗೇಶ್ ಅವರು ಅಂಗವಿಕಲನ ಪಾತ್ರ ಮಾಡುತ್ತಿದ್ದಾರೆ.
ವಿಮರ್ಶಕರಿಂದ ಅಪಾರ ಹೊಗಳಿಕೆಗೆ ಪಾತ್ರವಾಗಿರುವ ಚಿತ್ರ ಮತ್ತು ಅವರು ನಟಿಸಿರುವ ಪಾತ್ರ ಜಗ್ಗೇಶ್ಗೂ ತೃಪ್ತಿ ತಂದಿದೆ ಮತ್ತು ಜನರೂ ಒಪ್ಪುವರೆಂಬ ಆತ್ಮವಿಶ್ವಾಸ ಅವರಿಗಿದೆ.
ಕೊಂಕಣಿ ಚಿತ್ರ ಪಾದ್ರಿ ಮತ್ತು ಪ್ರಶಸ್ತಿ ವಿಜೇತ ತುಳು ಚಿತ್ರ ಬದಿ ಚಿತ್ರಗಳ ನಿರ್ದೇಶಕ ರಾಜೇಶ್ ಫರ್ನಾಂಡಿಸ್ ಅವರು ಪ್ರಥಮ ಬಾರಿಗೆ ಜಗ್ಗೇಶ್ ಅಭಿನಯದ ಚಿತ್ರ ನಿರ್ದೇಶಿಸಿದ್ದಾರೆ.
ಜಗ್ಗೇಶ್ ಮತ್ತು ನಾಯಕಿ ಗುರ್ಲಿನ್ ಚೋಪ್ರಾ ಇವರೂ ದ್ವಿಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮುಂಗಾರು ಮಳೆ ಚೆಲುವೆ ಪೂಜಾ ಗಾಂಧಿ ಕೂಡ ಚಿತ್ರದಲ್ಲಿದ್ದಾರೆ. ಉಳಿದ ತಾರಾಗಣದಲ್ಲಿ ನಗಿಸಲು ಕೋಮಲ್, ಸೆಂಟಿಮೆಂಟಿಗೆ ಶ್ರೀನಿವಾಸಮೂರ್ತಿ, ಎಂ.ಡಿ.ಕೌಶಿಕ್, ಆಶಾಲತಾ, ಉಮೇಶ್ ಮುಂತಾದವರಿದ್ದಾರೆ.


Click it and Unblock the Notifications