‘ಕಾರ್ಮುಗಿಲು’ ಚಿತ್ರವನ್ನು ಕೊಂಡಾಡಿದ ಕೆ.ಟಿ.ಗಟ್ಟಿ
ಸಿನಿಮಾ ಅಂದರೆ ನಮ್ಮ ಸಾಹಿತಿಗಳಿಗೆ ಅಷ್ಟಕ್ಕಷ್ಟೇ. ಸಿನಿಮಾ ಅನ್ನುವುದು ಮನರಂಜನೆಯ ಸಾಧನ ಮಾತ್ರವಲ್ಲ ಸೃಜನಶೀಲತೆಯ ಅಭಿವ್ಯಕ್ತಿ ಯೂ ಹೌದು ಅನ್ನುವುದನ್ನು ಬಹಳಷ್ಟು ಸಾಹಿತಿಗಳು ಒಪ್ಪುವುದಿಲ್ಲ . ಆ ಕಾರಣದಿಂದಾಗಿಯೇ ಅನೇಕರು ತಮ್ಮ ಕಥೆ ಕಾದಂಬರಿಗಳನ್ನು ಸಿನಿಮಾ ಮಾಡಲು ಒಪ್ಪುವುದಿಲ್ಲ . ಒಂದು ವೇಳೆ ಒಪ್ಪಿದರೂ- ಕೊಂಕು ತೆಗೆಯುವುದನ್ನು ಬಿಡುವುದಿಲ್ಲ . ತ.ರಾ.ಸುಬ್ಬರಾಯರಿಂದ ವ್ಯಾಸರಾಯ ಬಲ್ಲಾಳರವರೆಗೆ ಸಿನಿಮಾ ನಿರ್ದೇಶಕರನ್ನು ಮೆಚ್ಚಿಕೊಂಡ ಸಾಹಿತಿಗಳ ಸಂಖ್ಯೆ ತೀರಾ ಕಡಿಮೆ !
ಇತ್ತೀಚೆಗೆ ಹೊಸಗಾಳಿ ಬೀಸುತ್ತಿರುವಂತೆ ಕಾಣುತ್ತದೆ. ಎಸ್.ಎಲ್.ಭೈರಪ್ಪ ತಮ್ಮ 'ಮತದಾನ" ಕಾದಂಬರಿಯ ಸಿನಿಮಾ ರೂಪವನ್ನು ಮೆಚ್ಚಿಕೊಂಡರು. ದೇಸಾಯಿ ಅವರ 'ಬೆಳದಿಂಗಳ ಬಾಲೆ" ಸಿನಿಮಾವನ್ನು ಕಾದಂಬರಿಕಾರ ಯಂಡಮೂರಿ ಕೊಂಡಾಡಿದರು. ಈ ಸಾಲಿಗೆ ಹೊಸ ಸೇರ್ಪಡೆ- ಕಾರ್ಮುಗಿಲು.
'ಕಾರ್ಮುಗಿಲು" ಕೆ.ಟಿ.ಗಟ್ಟಿಯವರ ಕಾದಂಬರಿ. ನಿರ್ಮಾಪಕ ಕೋಣಂದೂರು ವೆಂಕಪ್ಪಗೌಡ ಕಾದಂಬರಿಯನ್ನು ಚಿತ್ರವಾಗಿಸಿದ್ದಾರೆ. ಸಿನಿಮಾ ಸಿದ್ಧವಾಗಿದ್ದು ಇನ್ನೇನು ತೆರೆ ಕಾಣಲಿದೆ.
ಇತ್ತೀಚೆಗೆ ಕಾರ್ಮುಗಿಲು ಚಿತ್ರವನ್ನು ವೀಕ್ಷಿಸಿದ ಕಾದಂಬರಿಕಾರ ಕೆ.ಟಿ.ಕಟ್ಟಿ ಅವರಿಗೆ ಹೃದಯ ತುಂಬಿಬಂತು. ತಮ್ಮ ಕಾದಂಬರಿಗೆ ನ್ಯಾಯ ದೊರಕಿದ ಬಗ್ಗೆ ಅವರು ನಿರ್ಮಾಪಕರ ಬಳಿ ಸಂತಸ ವ್ಯಕ್ತಪಡಿಸಿದರು. 'ಚಿತ್ರದಲ್ಲಿ ಪ್ರತಿಯಾಬ್ಬರೂ ಚೆನ್ನಾಗಿ ಅಭಿನಯಿಸಿದ್ದಾರೆ. ನನ್ನ ಕಾದಂಬರಿಯ ಪಾತ್ರಗಳಿಗೆ ನ್ಯಾಯ ಸಿಕ್ಕಿದೆ. ಚಿತ್ರದಲ್ಲಿ ಎಲ್ಲ ಕಲಾವಿದರ ಶ್ರಮವೂ ಎದ್ದು ಕಾಣುತ್ತಿದೆ" ಎಂದು ಗಟ್ಟಿ ಶ್ಲಾಘಿಸಿದರು. ಗಟ್ಟಿ ಅವರ ಜೊತೆ ಚಿತ್ರ ವೀಕ್ಷಿಸಿದ ಎಂ.ಆರ್.ವಿಠಲಮೂರ್ತಿ ಅವರು ಕೂಡ ಚಿತ್ರತಂಡದ ಶ್ರಮವನ್ನು ಶ್ಲಾಘಿಸಿದರು.
ಅಂದಹಾಗೆ, ಕಾರ್ಮುಗಿಲು ಚಿತ್ರದಲ್ಲಿ ಮನೋಜ್, ತಾರಾ, ಉಷ ಕಿರಣ್, ಅವಿನಾಶ್, ದತ್ತಣ್ಣ, ವಿಜಯ್, ಶಾಂತಮ್ಮ , ಶ್ರೀನಿವಾಸ ಪ್ರಭು ಮುಂತಾದವರು ನಟಿಸಿದ್ದಾರೆ.


Click it and Unblock the Notifications











