ಕಾಸರವಳ್ಳಿಗೆ ಸಿಂಬಿಯಾಸಿಸ್ ಪ್ರಶಸ್ತಿ
ಸ್ವರ್ಣಕಮಲಗಳ ನಿರ್ದೇಶಕ ಎಂದೇ ಹೆಸರಾದ ಪ್ರಸಿದ್ಧ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರಿಗೆ ಪುಣೆಯ ಸಿಂಬಿಯಾಸಿಸ್ ಸಮೂಹ ಮಾಧ್ಯಮ ಸಂಸ್ಥೆಯ ವಾರ್ಷಿಕ ಪ್ರಶಸ್ತಿ ದೊರೆತಿದೆ.
ವಿವಿಧ ಕಾಲಘಟ್ಟದ ತಲ್ಲಣಗಳನ್ನು ಕಾಸರವಳ್ಳಿಯವರ ಚಿತ್ರಗಳು ಸಮರ್ಥವಾಗಿ ಅಭಿವ್ಯಕ್ತಿಸಿವೆ. ಸಾಮಾಜಿಕ ಮತ್ತು ರಾಜಕೀಯ ಸಂಕ್ರಮಣ ಪರಿಸ್ಥಿತಿಗಳಲ್ಲಿ ವ್ಯಕ್ತಿತ್ವದ ತುಮುಲಗಳನ್ನು ಚಿತ್ರ ಮಾಧ್ಯಮದಲ್ಲಿ ಕಾಸರವಳ್ಳಿಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ ಎಂದು ಸಿಂಬಿಯಾಸಿಸ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಕಾಸರವಳ್ಳಿಯವರನ್ನು ಬಣ್ಣಿಸಲಾಗಿದೆ.
ಡಿಸೆಂಬರ್ 11 ರಂದು ಪುಣೆಯಲ್ಲಿ ನಡೆಯುವ ಸಮಾರಂಭದಲ್ಲಿ ಕಾಸರವಳ್ಳಿ ಅವರು ಸಿಂಬಿಯಾಸಿಸ್ನ ಮಾಧ್ಯಮ ಶ್ರೇಷ್ಠ ಪ್ರಶಸ್ತಿ ಪಡೆಯುವರು. ಆರ್.ಕೆ.ಲಕ್ಷ್ಮಣ್, ಮಹೇಶ್ ಭಟ್, ರಮೇಶ್ ಸಿಪ್ಪಿ , ಗುಲ್ಜಾರ್, ಕುಲದೀಪ್ ನಯ್ಯರ್, ಬಿ.ಆರ್.ಛೋಪ್ರಾ ಈ ಮುನ್ನ ಸಿಂಬಿಯಾಸಿಸ್ ವಾರ್ಷಿಕ ಪ್ರಶಸ್ತಿ ಪಡೆದಿದ್ದಾರೆ.
ಪ್ರಶಸ್ತಿ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿನ ಸಾಧನೆಯನ್ನು ಸಿಂಬಿಯಾಸಿಸ್ ಗುರ್ತಿಸಿದೆ. ಈವರೆಗೆ ಉತ್ತರಭಾರತದವರಿಗೆ ಸೀಮಿತವಾಗಿದ್ದ ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ ಎಂದು ಕಾಸರವಳ್ಳಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications