ಹುಬ್ಬಳ್ಳಿಯಲ್ಲಿ 'ಕಾರ್ಪೊರೇಟ್' ನಿರ್ದೇಶಕ ರಮೇಶ್

ಆದರೆ, ಕಾರ್ಪೊರೇಟ್ ಸಂಸ್ಕೃತಿ ಚಿತ್ರೋದ್ಯಮದಲ್ಲಿ ಕಾಲಿಟ್ಟಂದಿನಿಂದ ಕನ್ನಡ ಚಿತ್ರರಂಗ ಒಂದು ನಿರ್ದಿಷ್ಟ ದಿಕ್ಕನ್ನು ಪಡೆಯುತ್ತಿದೆ. ಚಿತ್ರರಂಗದಲ್ಲಿ ವೃತ್ತಿಪರತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಸೀಮಿತ ಮಾರುಕಟ್ಟೆ ತಾನಾಗಿಯೇ ವಿಸ್ತರಣೆಯಾಗುತ್ತಿದೆ ಅನ್ನುವುದು ಕನ್ನಡ ಚಿತ್ರರಂಗದ 'ಜಾಣ' ನಟ, ನಿರ್ದೇಶಕರಲ್ಲಿ ಒಬ್ಬರಾದ ರಮೇಶ್ ಅರವಿಂದ್ ಅವರ ಸ್ಪಷ್ಟ ಅಭಿಪ್ರಾಯ.
ರಮೇಶ್ ಅರವಿಂದ್ ಅವರು ತಮ್ಮ ನಿರ್ದೇಶನದ ಚಿತ್ರ 'ಕ್ರೇಜಿ ಕುಟುಂಬ'ದ ಪ್ರಚಾರಕ್ಕಾಗಿ ಹುಬ್ಬಳ್ಳಿಗೆ ಬಂದಾಗ ಕಾರ್ಪೊರೇಟ್ ಬಂಡವಾಳ ಹೂಡಿಕೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. "ಭಾರತದಲ್ಲಿ ಕಾರ್ಪೊರೇಟ್ ಹೂಡಿಕೆಯನ್ನು ಮೊದಲಿನಿಂದಲೂ ಗಮನಿಸಿದ್ದೇನೆ. ಕಾರ್ಪೊರೇಟ್ ನಿರ್ಮಾಪಕರಿಗಾಗಿ ಎರಡು ಚಿತ್ರಗಳನ್ನೂ ನಿರ್ದೇಶಿಸಿದ್ದೇನೆ. ಅವರದು ವೃತ್ತಿಪರ ಧೋರಣೆ ಮತ್ತು ನಿರ್ವಹಣೆಯಲ್ಲಿ ಪಾರದರ್ಶಕತೆಯಿರುತ್ತದೆ. ಇದರಿಂದ ನಮ್ಮ ಉದ್ಯಮಕ್ಕೆ ಒಳ್ಳೆಯದಾಗುತ್ತಿದೆ" ಎಂದು ಅಭಿಪ್ರಾಯಪಟ್ಟರು. ಕಾರ್ಪೊರೇಟ್ ಸಂಸ್ಕೃತಿ ಕಾಲಿಟ್ಟಿದ್ದರಿಂದ ಕೆಲ ಸಣ್ಣ ನಿರ್ಮಾಪಕರಿಗೆ ದಿಗಿಲಾಗಿರುವುದೂ ಸತ್ಯ ಎಂಬುದನ್ನು ಅವರು ಒಪ್ಪಿಕೊಂಡರು.
ಬೆಂಗಳೂರು ಬಿಟ್ಟರೆ ಕರ್ನಾಟಕದಲ್ಲಿ ಚಿತ್ರೋದ್ಯಮಕ್ಕೆ ದೊಡ್ಡ ಮಾರುಕಟ್ಟೆ ಬಿಟ್ಟುಕೊಟ್ಟಿರುವುದು ಹುಬ್ಬಳ್ಳಿ. ಕ್ರೇಜಿ ಕುಟುಂಬದ ಚಿತ್ರಕಥೆ ಕೂಡ ಉತ್ತರ ಕರ್ನಾಟಕದಿಂದ ಬೆಂಗಳೂರಿಗೆ ವಲಸೆ ಬಂದು ರಿಯಾಲಿಟಿ ಶೋದಲ್ಲಿ ಭಾಗವಹಿಸುವ ರೈತ ಕುಟುಂಬದ ಕಥೆಯಾಗಿದೆ. ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಆಡು ಭಾಷೆ, ಸಂಸ್ಕೃತಿಯನ್ನು ಬಳಸಿದ್ದೇನೆ. ಮರಾಠಿ ಚಿತ್ರವೊಂದರಿಂದ ಪ್ರೇರಣೆ ಪಡೆದು ಚಿತ್ರಕಥೆ ಬರೆಯಲಾಗಿದೆ ಅಂತಾರೆ ರಮೇಶ್.


Click it and Unblock the Notifications











