ನಾನು ಮದ್ಯ ವ್ಯಸನಿಯಲ್ಲ; ಟೆನ್ನಿಸ್ ಮನದಾಳದ ಮಾತು
ಕನ್ನಡ ಚಿತ್ರರಂಗವು ಗಟ್ಟಿತನ ಕಳೆದುಕೊಳ್ಳುತ್ತಿದೆ ಎಂದು ಹಾಸ್ಯನಟ ಟೆನ್ನಿಸ್ ಕೃಷ್ಣ ಅವರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಹೊಸಪೇಟೆಯ ಪತ್ತಿಕೊಂಡ ವೆಂಕಟಣ್ಣ ಶೆಟ್ಟಿ ಮತ್ತು ಸಹೋದರರ ಧರ್ಮಸಂಸ್ಥೆಯ ಪ್ರೌಢಶಾಲೆಯಲ್ಲಿ ಮಂಗಳವಾರ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಕನ್ನಡ ಚಿತ್ರ ರಂಗವನ್ನು ಶ್ರೀಮಂತಗೊಳಿಸಿದ ಮೇರು ನಟರಾದ ಡಾ. ರಾಜ್ಕುಮಾರ್ ಹಾಗೂ ಡಾ.ವಿಷ್ಣುವರ್ಧನ್ ಮತ್ತು ಹಿರಿಯ ಕಲಾವಿದರಾದ, ಅಶ್ವಥ್, ವಜ್ರಮುನಿ,ನರಸಿಂಹರಾಜ್ರಂತಹ ಕಲಾವಿದರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಹುಟ್ಟಿ ಬಂದರೇ ಮಾತ್ರ ಕನ್ನಡ ಚಿತ್ರರಂಗವು ಉಳಿಯಲು ಸಾಧ್ಯ ಎಂದು ಹೇಳಿದರು.
ಯುವಕರು ಕಲಾತ್ಮಕ ಚಿತ್ರಗಳನ್ನು ನೋಡುವ ಮೂಲಕ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಬಹುತೇಕ ಹಿರಿಯ ಕಲಾವಿದರು ರಂಗ ಭೂಮಿಯಿಂದ ಚಿತ್ರರಂಗಕ್ಕೆ ಬಂದವರಾಗಿದ್ದು, ಅಂದಿನ ದಿನಗಳಲ್ಲಿ ವರ್ಷಕ್ಕೆ ಎರಡು ಅಥವಾ ಮೂರು ಚಿತ್ರಗಳು ಮಾತ್ರ ತೆರೆ ಕಾಣುತ್ತಿದ್ದವು. ಆ ಚಿತ್ರಗಳನ್ನು ನೋಡಲು ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದರು. ಚಿತ್ರರಂಗ ಜೀವಂತವಾಗಿದ್ದು ಎಂದು ಹೇಳಿದರು.
ಆದರೆ ಇಂದು ವರ್ಷಕ್ಕೆ ನೂರಾರು ಚಿತ್ರಗಳು ತೆರೆಕಾಣುತ್ತಿವೆ. ಇಂದಿನ ಚಿತ್ರಗಳಲ್ಲಿ ಸಾಹಿತ್ಯದ ತಿರುಳು ಇಲ್ಲವೇ ಇಲ್ಲ. ಒಂದು ಉತ್ತಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಡುವ ಪ್ರಯತ್ನ ಕೂಡ ನಡೆದಿಲ್ಲ. ಕಾರಣ ಯುವ ಪೀಳಿಗೆ ದಾರಿತಪ್ಪುತ್ತಿದೆ ಎಂದು ಅವರು ವಿಷಾಧಿಸಿದರು.ಕೆಲವು ಮಾಧ್ಯಮಗಳು ನನ್ನನ್ನು 'ಮಹಾ ಕುಡುಕ" ಎಂದ ವರದಿ ಮಾಡಿದ್ದವು. ನಾನು ಇದುವರೆಗೂ ಕುಡಿದೇ ಇಲ್ಲ.
ಕಲಾವಿದರು ನಾಟಕ ಪ್ರದರ್ಶನಗಳನ್ನು ಮಾಡಿ ಸಮಯಕ್ಕೆ ಸರಿಯಾಗಿ ನಿದ್ರೆ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಇದ್ದ ಸಂದರ್ಭದಲ್ಲಿ ನನ್ನನ್ನು ತಪ್ಪಾಗಿ ಅರ್ಥೈಸಿಕೊಂಡು ವರದಿ ಮಾಡಿದ್ದವು ಎಂದು ನೋವನ್ನು ವ್ಯಕ್ತಪಡಿಸಿದರು. ಟೆನ್ನಿಸ್ ಕೃಷ್ಣ ಅವರ ಸಹೋದರ ಶ್ರೀನಿವಾಸ್ ಅವರು ಮಾತನಾಡಿ, ನಮ್ಮಂತಹ ಕಲಾವಿದರನ್ನು ಕನ್ನಡದ ಜನರು ಪೋಷಿಸಿ ಬೆಳೆಸಿದ್ದಾರೆ. ನಿರಂತರವಾಗಿ ಕಲಾವಿದರನ್ನು ಗೌರವಿಸುವ ಕಾರ್ಯ ಕನ್ನಡ ನಾಡಿನಲ್ಲಿ ನಡೆಯಬೇಕಾಗಿದೆ ಎಂದರು.
ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಚಂದ್ರಶೇಖರ್ ಮಾತನಾಡಿ, ಟೆನ್ನಿಸ್ ಕೃಷ್ಣ ಅವರು ತಮ್ಮದೇ ಆದ ಹಾಸ್ಯ ಶೈಲಿಯಲ್ಲಿ ಪಾತ್ರವನ್ನು ಮಾಡುತ್ತಾ ರಾಜ್ಯದ ಜನರ ಮನೆ ಮಾತಾಗಿದ್ದು, ಒಬ್ಬ ಹಾಸ್ಯ ಕಲಾವಿದ 250 ಚಿತ್ರಗಳಲ್ಲಿ ಅಭಿನಯಿಸಿರುವುದು ಹೆಮ್ಮೆಯ ವಿಷಯ ಎಂದರು.
ಶಾಲೆಯ ಮುಖ್ಯ ಗುರು ಬಿ.ಎಡ್. ಹನುಮಂತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಮಲ್ಲಯ್ಯ ಯತ್ನಾಳ್ ಸ್ವಾಗತಿಸಿದರು. ಬಸವರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಟೆನ್ನ್ನಿಸ್ ಕೃಷ್ಣ ಅವರ ಅಭಿನಯದ ಹಾಸ್ಯ ತುಣುಕುಗಳನ್ನು ಪ್ರದರ್ಶಿಸಿದರು .ಶಾಲಾ ಮಕ್ಕಳು, ಶಿಕ್ಷಕರು ಹಾಗೂ ಸಾರ್ವಜನಿಕರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ಟೆನ್ನಿಸ್ ಕೃಷ್ಣ ಹಸ್ತಲಾಘವ ಪಡೆದಿದ್ದು ವಿಶೇಷವಾಗಿತ್ತು.


Click it and Unblock the Notifications











