ಗೌರ್ಮೆಂಟ್ ಬ್ರಾಹ್ಮಣನಾದ ಕನ್ನಡ ನಟ ರವಿ ಚೇತನ್

ಮಾಲಗತ್ತಿ ಅವರ ಬದುಕಿನ ಚಿತ್ರಣವನ್ನು ಸಿನಿಮಾ ಮಾಡುತ್ತಿರುವವರು ಪತ್ರಕರ್ತ ಜಿ ಆರ್ ಸತ್ಯಲಿಂಗರಾಜು. ಮೈಸೂರಿನ ಆಲನಹಳ್ಳಿಯಲ್ಲಿ ಚಿತ್ರ ಸೆಟ್ಟೇರಿದೆ. 'ಗೌರ್ಮೆಂಟ್ ಬ್ರಾಹ್ಮಣ' ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಪ್ರಯೋಗ ಎನ್ನುತ್ತಾರೆ ಚಿತ್ರದ ನಿರ್ದೇಶಕರು.
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ಅರವಿಂದ ಮಾಲಗತ್ತಿ ಅವರು ರಾಜ್ಯದಲ್ಲಿ ದಲಿತ ಚಳವಳಿ ಸೇರಿದಂತೆ ಎಲ್ಲ ಚಳವಳಿಗಳು ಹಳಿ ತಪ್ಪಿವೆ. ಈ ಸಂದರ್ಭದಲ್ಲಿ ತಮ್ಮ ಆತ್ಮಕತೆ ಚಿತ್ರವಾಗುತ್ತಿರುವುದು ಸಂತಸ ತಂದಿದೆ ಎಂದಿದ್ದಾರೆ.
ರವಿಚೇತನ್ ಚಿತ್ರದ ನಾಯಕ. ಈಗಾಗಲೆ ಇವರು 70ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಸತ್ಯಾನಂದ, ಸಂಗೊಳ್ಳಿ ರಾಯಣ್ಣ, ಮಾಯದಂಥ ಮಳೆ ಬಂತಣ್ಣ, ಶ್ರೀಕ್ಷೇತ್ರ ಆದಿ ಚುಂಚನಗಿರಿ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, ಅಭಿನಯಿಸುತ್ತಿದ್ದಾರೆ.
ಮೈಸೂರಿನ ಹುಡುಗಿ ರೋಷನಿ ಚಿತ್ರದ ನಾಯಕಿ. ಈಗಾಗಲೆ ಈಕೆ ಬಲರಾಮ, ದಿಗ್ಗಜರು, ಕಾಮಣ್ಣನ ಮಕ್ಕಳು ಚಿತ್ರಗಳಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಕೆಲವೊಂದು ಟಿವಿ ಧಾರಾವಾಹಿಗಳಲ್ಲೂ ಅಭಿನಯಿಸಿದ್ದಾರೆ. 'ಗೌರ್ಮೆಂಟ್ ಬ್ರಾಹ್ಮಣ' ಚಿತ್ರ ರೋಷನಿಗೆ ಚೊಚ್ಚಲ ಚಿತ್ರ.
ಈ ಚಿತ್ರಕ್ಕೆ ಪಿ ಕೆ ಎಚ್ ದಾಸ್ ಛಾಯಾಗ್ರಹಣವಿದೆ. ಪ್ರವೀಣ್ ಗೋಡ್ಖಿಂಡಿ ಸಂಗೀತವಿದೆ. ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಜವಾಬ್ದಾರಿಯನ್ನು ಲಿಂಗರಾಜು ಹೊತ್ತಿದ್ದಾರೆ. ರಮೇಶ್ ಭಟ್, ಮಂಡ್ಯ ರಮೇಶ್, ಸುನಂದಾ ಹೆಗ್ಡೆ ಮುಂತಾದವರು ಪಾತ್ರವರ್ಗ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











