ಉದಯರವಿಯಲ್ಲಿ ರಸಋಷಿಯ ಚಿತ್ರೀಕರಣ
' ರಸಋಷಿ ಕುವೆಂಪು' ಚಿತ್ರದ ಚಿತ್ರೀಕರಣ ಇಂದು ಮೈಸೂರಿನ ಉದಯರವಿಯಲ್ಲಿ ಪ್ರಾರಂಭವಾಯಿತು. ಅರವಿಂದ್ ಮತ್ತು ಪದ್ಮ ಪ್ರಕಾಶ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚಿತ್ರವನ್ನು ಖ್ಯಾತ ಕಲಾವಿದ ಸಿ.ಆರ್.ಸಿಂಹ ಅವರ ಪುತ್ರ ರಿಥ್ವಿಕ್ ಸಿಂಹ ನಿರ್ದೇಶಿಸುತ್ತಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ನಿರ್ದೇಶಕರು, ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದ್ದು ಕುವೆಂಪು ವಿರಚಿತ ಇಂಗ್ಲಿಷ್ ಹಾಡುಗಳನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಚಿತ್ರಕ್ಕೆ ವಿ.ಮನೋಹರ್ ಸಂಗೀತ ಸಂಯೋಜಿಸಿದ್ದಾರೆ ಎಂದರು. ಯುವ ಕುವೆಂಪು ಪಾತ್ರದಲ್ಲಿ ಬಿ.ವೈ.ನರೇಶ್ ಕಾಣಿಸಿದರೆ ಪ್ರಬುದ್ಧ ಕುವೆಂಪು ಪಾತ್ರದಲ್ಲಿ ಸಿ.ಆರ್.ಸಿಂಹ ಕಾಣಿಸಿಕೊಳ್ಳಲಿದ್ದಾರೆ.
ಮುವ್ವತ್ತು ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು ತೀರ್ಥಹಳ್ಳಿ, ಮೈಸೂರು ಹಾಗೂ ಬೆಂಗಳೂರಿನ ಸುಂದರ ಪರಿಸರದಲ್ಲಿ ರಸಋಷಿಯ ಪಯಣ ಸಾಗಲಿದೆ. ಕುವೆಂಪುರ ಪತ್ನಿ ದಿವಂಗತ ಹೇಮಾವತಿ ಪಾತ್ರದಲ್ಲಿ ಪದ್ಮಜಾ ಶ್ರೀನಿವಾಸ್ ನಟಿಸಿದ್ದಾರೆ. ರಾಮಕೃಷ್ಣ ಪರಮಹಂಸರ ಪ್ರತಿಮೆಗೆ ಸಿ.ಆರ್.ಸಿಂಹ ಪೂಜೆ ಮಾಡುವ ಮುಹೂರ್ತದ ಸನ್ನಿವೇಶವನ್ನು ಮೈಸೂರಿನ ಉದಯರವಿಯಲ್ಲಿ ಇಂದು ಚಿತ್ರೀಕರಿಸಿಕೊಳ್ಳಲಾಯಿತು.
ಕುವೆಂಪು ವಿಶ್ವವಿದ್ಯಾಲಯ ಮಾಜಿ ಕುಲಪತಿ ಹಾಗೂ ಕುವೆಂಪು ಅವರ ಅಳಿಯ ಡಾ.ಕೆ.ಚಿದಾನಂದಗೌಡ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣ ಪ್ರಾರಂಭವಾಯಿತು.ಈ ಸಂದರ್ಭದಲ್ಲಿ ಸಾಹಿತಿಗಳಾದ ದೇಜಗೌ, ವಸಂತಕುಮಾರ್, ತಾರಿಣಿ(ಕುವೆಂಪು ಅವರ ಪುತ್ರಿ) ಹಾಗೂ ಮತ್ತಿತರರು ಉಪಸ್ಥಿತರಿದ್ದರು.
(ದಟ್ಸ್ ಕನ್ನಡ ಸಿನಿವಾರ್ತೆ)


Click it and Unblock the Notifications