ಗೌಡರ ಪಾಳಯಕ್ಕೆ ಅನಂತನಾಗ್
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಜಾತ್ಯತೀತ ಜನತಾದಳ ಸೇರುವುದರೊಂದಿಗೆ ಸಹಜ ನಟ ಅನಂತನಾಗ್ ತಮ್ಮ ರಾಜಕೀಯ ಚಟುವಟಿಕೆಯನ್ನು ಪುನಃ ಪ್ರಾರಂಭಿಸಿದ್ದಾರೆ.
ಫೆ.4ರ ಗುರುವಾರ ನಟ ಹಾಗೂ ಮಾಜಿ ಸಚಿವ ಅನಂತನಾಗ್ ದೇವೇಗೌಡರ ಜಾತ್ಯತೀತ ಜನತಾದಳ ಸೇರಿದರು. ಜಾತ್ಯತೀತ ಜನತಾದಳಕ್ಕೆ ಸೇರಿದ ಕುರಿತು ಸಂತಸ ವ್ಯಕ್ತಪಡಿಸಿದ ಅನಂತನಾಗ್- ಜಾತ್ಯತೀತ ಜನತಾದಳ ಜನತಾ ಪರಿವಾರದ ಒಂದು ಪ್ರಮುಖ ಪಕ್ಷ ಎಂದು ಬಣ್ಣಿಸಿದರು. ತಮ್ಮ ರಾಜಕೀಯ ಬದುಕು ಆರಂಭಿಸಿದ ಪಕ್ಷಕ್ಕೆ ಮರಳುತ್ತಿರುವುದಕ್ಕೆ ಸಂತಸ ಹಾಗೂ ಹೆಮ್ಮೆ ಎನ್ನಿಸುತ್ತಿದೆ ಎಂದು ಅನಂತನಾಗ್ ಹೇಳಿದರು.
ರಾಜಕೀಯಕ್ಕೆ ಪುನಃ ಪ್ರವೇಶಿಸಿದ್ದರೂ, ಚುನಾವಣೆಯಲ್ಲಿ ಸ್ಪರ್ಧಿಸುವ ಸಾಧ್ಯತೆಗಳ ಕುರಿತು ಅನಂತನಾಗ್ ಸ್ಪಷ್ಟವಾಗಿ ಏನನ್ನೂ ಹೇಳಲಿಲ್ಲ . ಜಾತ್ಯತೀತ ಜನತಾದಳದ ಪರವಾಗಿ ಪ್ರಚಾರ ನಡೆಸುತ್ತೇನೆ ಎಂದಷ್ಟೇ ಅನಂತ್ ಹೇಳಿದರು. ಜನತಾ ಪರಿವಾರದ ಸರ್ವನಾಶಕ್ಕೆ ರಾಮಕೃಷ್ಣ ಹೆಗಡೆ ಹಾಗೂ ಜಾರ್ಜ್ ಫರ್ನಾಂಡಿಸ್ ಕಾರಣ ಎಂದು ಅವರು ಅಭಿಪ್ರಾಯಪಟ್ಟರು.
ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಜೆ.ಎಚ್.ಪಟೇಲರಿಗೆ ಆಪ್ತರಾಗಿದ್ದ ಅನಂತನಾಗ್, ಪಟೇಲರ ಸಂಪುಟದಲ್ಲಿ ಸಚಿವರಾಗಿದ್ದರು. ಪಟೇಲ್ ಸರ್ಕಾರದ ಪತನದ ನಂತರ ಅನಂತನಾಗ್ ರಾಜಕೀಯದಿಂದ ದೂರ ಸರಿದಿದ್ದರು.
(ಏಜನ್ಸೀಸ್)


Click it and Unblock the Notifications