ಬುದ್ಧನ ಕುರಿತು ಸಿನಿಮಾ- ನಾಗತಿಹಳ್ಳಿ
ಗೌತಮ ಬುದ್ಧನ ಕುರಿತು ಸಿನಿಮಾ ಮಾಡುವ ತಮ್ಮ ಬಯಕೆಯನ್ನು ಜನಪ್ರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಬಹಿರಂಗಪಡಿಸಿದ್ದಾರೆ.
ಬುದ್ಧನ ಕುರಿತ ಸಿನಿಮಾದ ಚಿತ್ರಕಥೆಯನ್ನು ಈಗಾಗಲೇ ಸಿದ್ಧಪಡಿಸಿದ್ದೇನೆ. ಆದರೆ ಚಿತ್ರವನ್ನು ಯಾವಾಗ ನಿರ್ಮಿಸುವುದೆಂದು ನಿರ್ಣಯ ಕೈಗೊಳ್ಳಲಾಗುತ್ತಿಲ್ಲ . ಪ್ಯಾರಿಸ್ ಪ್ರಣಯ ಚಿತ್ರದ ಸೋಲಿನಿಂದ ತಮಗೆ ಚೇತರಿಸಿಕೊಳ್ಳಲಿನ್ನೂ ಸಾಧ್ಯವಾಗಿಲ್ಲ ಎಂದು ನಾಗತಿಹಳ್ಳಿ ಹೇಳಿದರು. ದಾವಣಗೆರೆಯ ಸಾಂವೇದಾ ಸಾಂಸ್ಕೃತಿಕ ವೇದಿಕೆ ನಡೆಸಿದ ನಾಗತಿಹಳ್ಳಿ ಸಾಹಿತ್ಯ ಚಿಂತನಗೋಷ್ಠಿಯ ಸಮಾರೋಪ ಸಮಾರಂಭದಲ್ಲಿ (ನ.2 ಭಾನುವಾರ) ನಾಗತಿಹಳ್ಳಿ ಚಂದ್ರಶೇಖರ್ ಮಾತನಾಡುತ್ತಿದ್ದರು.
ಸದ್ಯಕ್ಕೆ ಇಂತಹುದೇ ಚಿತ್ರ ಮಾಡುತ್ತೇನೆಂದು ನಾನು ಭರವಸೆ ನೀಡಲಾರೆ. ಬಹು ನಿರೀಕ್ಷೆಯ ಚಿತ್ರವನ್ನು ಪ್ರೇಕ್ಷಕರು ತಿರಸ್ಕರಿಸಿದಾಗ ಉಂಟಾಗುವ ಆಘಾತದಿಂದ ಹೊರಬೀಳುವುದು ಸುಲಭದ ಮಾತಲ್ಲ ಎಂದು ಪ್ಯಾರಿಸ್ ಪ್ರಣಯ ಚಿತ್ರದ ಸೋಲಿನ ದುಃಖವನ್ನು ನಾಗತಿಹಳ್ಳಿ ತೋಡಿಕೊಂಡರು.
ಹಳ್ಳಿಗಳ ದ್ರವ್ಯ ಡೆಟ್ರಾಯಿಟ್ನಲ್ಲಿಲ್ಲ !
ನಮ್ಮ ಬದುಕಿನ ಬೇರುಗಳಿರುವುದು ಹಳ್ಳಿಗಳಲ್ಲಿ. ಇಲ್ಲಿನ ಸಂಬಂಧಗಳು ಸಂಘರ್ಷಗಳು ನೋವು ನಲಿವುಗಳನ್ನು ಸೂಕ್ಷ್ಮವಾಗಿ ಕಾಣುವ ಪ್ರಯತ್ನಗಳಾಗಬೇಕಿದೆ ಎಂದು ಸಂಕಿರಣದಲ್ಲಿ ಮಾತನಾಡಿದ ಖ್ಯಾತ ಕಥೆಗಾರ ಕುಂ.ವೀರಭದ್ರಪ್ಪ ಅಭಿಪ್ರಾಯಪಟ್ಟರು. ಕನ್ನಡ ನಾಡಿನ ಹಳ್ಳಿಗಳಲ್ಲಿನ ಜೀವದ್ರವ್ಯ ನ್ಯೂಯಾರ್ಕ್ ಅಥವಾ ಡೆಟ್ರಾಯಿಟ್ಗಳಲ್ಲಿ ಸಿಗುವುದಿಲ್ಲ ಎಂದು ಹೇಳುವ ಮೂಲಕ ನಾಗತಿಹಳ್ಳಿ ಚಂದ್ರಶೇಖರ್ ಅವರನ್ನು ಕುಂವೀ ಪರೋಕ್ಷವಾಗಿ ಲೇವಡಿ ಮಾಡಿದರು.
ಪ್ರೇಕ್ಷಕರ ಅಭಿರುಚಿಗೆ ಕಟ್ಟುಬೀಳದೆ ತಮ್ಮ ತುಡಿತಕ್ಕೆ ತಕ್ಕಂತೆ ನಾಗತಿಹಳ್ಳಿ ಚಿತ್ರ ಮಾಡಬೇಕೆಂದು ಕುಂ.ವೀರಭದ್ರಪ್ಪ ಸಲಹೆ ಮಾಡಿದರು.
(ಇನ್ಫೋ ವಾರ್ತೆ)
ಮುಖಪುಟ / ಸ್ಯಾಂಡಲ್ವುಡ್


Click it and Unblock the Notifications